ಬಾಗೇಪಲ್ಲಿ: ಕೃಷಿ ಕಾಯ್ದೆಗಳ ತಿದ್ದುಪಡಿ, ವಿದ್ಯುತ್ ಮಸೂದೆ ಹಾಗೂ ಕಾರ್ಮಿಕ ಸಂಹಿತೆಗಳ ರದ್ದತಿಗಾಗಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸಂಯುಕ್ತ ಹೋರಾಟ-ಕರ್ನಾಟಕ ಕೃಷಿ, ಕೂಲಿಕಾರ್ಮಿಕರು, ದಲಿತ, ವಿದ್ಯಾರ್ಥಿ ಯುವಜನ, ಕನ್ನಡ ಮತ್ತು ಜನಪರ ಸಂಘಟನೆಗಳ ಸಮನ್ವಯ ಸಮಿತಿಯಿಂದಸೆಪ್ಟೆಂಬರ್ 27ರಂದು ಹಮ್ಮಿಕೊಂಡಿರುವ ಭಾರತ್ ಬಂದ್ಗೆ ತಾಲ್ಲೂಕಿನ ಸಿಐಟಿಯು ತಾಲ್ಲೂಕು ಸಮಿತಿ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಸುಂದರಯ್ಯ ಭವನದಲ್ಲಿ ಭಾನುವಾರ ಸಿಐಟಿಯು ತಾಲ್ಲೂಕು ಸಮಿತಿಯಿಂದ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ವಿವಿಧ ಕಾರ್ಮಿಕರ ಸಂಘಟನೆಗಳ ಮುಖಂಡರು ಮಾತನಾಡಿ ಬಂದ್ಗೆ ಬೆಂಬಲಿಸಿದರು.
ಸಿಐಟಿಯು ತಾಲ್ಲೂಕು ಅಧ್ಯಕ್ಷ ಬಿ.ಆಂಜನೇಯರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿರುವ ಭೂ ಸುಧಾರಣಾ, ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಹಾಗೂ ಕಾರ್ಮಿಕರ ಸಂಹಿತೆಗಳನ್ನು ರದ್ದುಪಡಿಸಬೇಕು. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 550ಕ್ಕೂ ಹೆಚ್ಚು ವಿವಿಧ ಸಂಘಟನೆಗಳುಸೆಪ್ಟೆಂಬರ್ 27ರಂದು ಭಾರತ್ ಬಂದ್ ಕರೆ ನೀಡಿದೆ ಎಂದರು.
ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ಅಶ್ವತಪ್ಪ, ಹಮಾಲಿ ಸಂಘದ ಅಧ್ಯಕ್ಷ ಮಂಜುನಾಥ್, ಕಟ್ಟಡ ಕಾರ್ಮಿಕರ ಸಂಘದ ನಾಗರಾಜು, ಬೈಯರೆಡ್ಡಿ, ಮರಕೆಲಸ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ರಾಮಾಂಜಿ, ಅಧ್ಯಕ್ಷ ಪೀರುಸಾಬ್, ಹಾಸ್ಟೆಲ್ ಕಾರ್ಮಿಕರ ಸಂಘದ ಕಾರ್ಯದರ್ಶಿ ಮುನಿಯಪ್ಪ, ನಾರಾಯಣನಾಯಕ್, ನರಸಿಂಹಪ್ಪ, ಆಟೊಚಾಲಕರ ಸಂಘದ ಇರ್ಷಾದ್, ಚಿನ್ನಪ್ಪಯ್ಯ, ಸನಾವುಲ್ಲಾ, ಟೆಂಪೋ ಮಾಲೀಕರ ಮತ್ತು ಚಾಲಕರ ಸಂಘದ ಪಿ.ಎನ್.ಆಂಜಿನಪ್ಪ, ಪ್ರಕಾಶ್, ಬಾಬು, ರಫೀಕ್, ಮುಜುವಲ್ಲಿ, ಭಾಷಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.