ಗುಡಿಬಂಡೆ: ‘ಒಗ್ಗಟ್ಟಿನ ಕೊರತೆ ಪರಿಣಾಮ ಬ್ರಾಹ್ಮಣ ಸಮುದಾಯ ಪ್ರಸ್ತುತ ಸಂಕಷ್ಟದಲ್ಲಿದೆ’ ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದಮೂರ್ತಿ ಹೇಳಿದರು.
ತಾಲ್ಲೂಕಿನ ಎಲ್ಲೋಡು ಗ್ರಾಮದಲ್ಲಿ ಶ್ರೀಲಕ್ಷ್ಮಿಆದಿನಾರಾಯಣಸ್ವಾಮಿ ಬ್ರಾಹ್ಮಣ ಸೇವಾ ಸಂಘದಿಂದ ನಡೆದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಇದೇ ಮೊದಲ ಬಾರಿಗೆ ನಿಗಮಕ್ಕೆ ಸರ್ಕಾರ ಹಣಕಾಸಿನ ನೆರವು ನೀಡಿದೆ. ಯಾರಿಗೂ ತೊಂದರೆ ನೀಡದೆ ಸಾತ್ವಿಕ ಸಮುದಾಯವನ್ನು ವಿನಾಕಾರಣ ತೇಜೋವಧೆ ಮಾಡುವ ಕುತಂತ್ರವು ಕೆಲವು ಘಾತುಕಶಕ್ತಿಗಳಿಂದ ನಡೆಯುತ್ತಿದೆ. ಇದಕ್ಕೆ ಸ್ವಾಭಿಮಾನವಿಲ್ಲದ ಸಮುದಾಯದ ಕೆಲವರು ಕುಮ್ಮಕ್ಕು ನೀಡುತ್ತಿದ್ದಾರೆ. ಮೊದಲು ನಾವು ಒಗ್ಗೂಡಬೇಕು ಎಂದು ಹೇಳಿದರು.
ನಮ್ಮಲ್ಲಿನ ಉಪ ಪಂಗಡಗಳನ್ನು ಬಿಟ್ಟು ನಾವೆಲ್ಲರೂ ಒಂದೇ ಎಂದಾಗ ಮಾತ್ರ ಸಮುದಾಯ ಉಳಿಯುತ್ತದೆ. ಸರ್ಕಾರ ನಮ್ಮನ್ನು ಗುರುತಿಸಿ ನಿಗಮಕ್ಕೆ ನೆರವು ನೀಡಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ನೆರವು ಹಾಗೂ ಸ್ವಂತಬಲದ ಮೂಲಕ ಅಭಿವೃದ್ಧಿ ಸಾಧಿಸಬೇಕಿದೆ ಎಂದು ಹೇಳಿದರು.
ಲಕ್ಷ್ಮಿಆದಿನಾರಾಯಣಸ್ವಾಮಿ ಬ್ರಾಹ್ಮಣ ಸೇವಾ ಸಂಘದ ಮಹಾಪೋಷಕ ಹರಿಶರ್ಮ ಮಾತನಾಡಿ, ಅನೇಕ ತಲೆಮಾರಿನಿಂದ ಬಂದಿರುವ ಸಂಪ್ರದಾಯಗಳನ್ನು ಆಚರಿಸಬೇಕು. ಆ ಮೂಲಕ ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಗಟ್ಟಿಯಾಗಿ ನಿಲ್ಲಬೇಕಾಗಿದೆ. ಒಗ್ಗಟ್ಟು ಹಾಗೂ ವಿದ್ಯೆ ಬಿಟ್ಟರೆ ಬ್ರಾಹ್ಮಣರು ಬದುಕಲು ಯಾವುದೇ ದಾರಿ ಇಲ್ಲ ಎಂದು ಹೇಳಿದರು.
ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಅಟ್ಟೂರು ವೆಂಕಟೇಶಯ್ಯ, ಎಲ್ಲೋಡು ಶ್ರೀಲಕ್ಷ್ಮಿಆದಿನಾರಾಯಣಸ್ವಾಮಿ ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ರಾಮಚಂದ್ರರಾವ್
ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಅಧ್ಯಕ್ಷ ರಾಮಚಂದ್ರರಾವ್, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಪವನ್ ಕುಮಾರ್, ವತ್ಸಲಾ ನಾಗೇಶ್, ರಾಜೇಂದ್ರಪ್ರಸಾದ್, ಸಮುದಾಯದ ಮುಖ್ಯಸ್ಥರಾದ ಸೂರ್ಯಪ್ರಕಾಶ್, ಸ.ನ. ನಾಗೇಂದ್ರ, ನಾಗಭೂಷಣರಾವ್, ಮಂಕಾಲ ಜ್ವಾಲಾಪ್ರಸಾದ್, ಮಂಕಾಲ ವೇಣುಗೋಪಾಲ್, ದಕ್ಷಿಣಾಮೂರ್ತಿ, ನಾರಾಯಣರಾವ್, ಶ್ರೀನಿವಾಸ್, ರಾಘವೇಂದ್ರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.