ADVERTISEMENT

ರಸಗೊಬ್ಬರ ಪೂರೈಕೆ ವ್ಯತ್ಯಯ

ಸಕಾಲದಲ್ಲಿ ಸಿಗದ ಡಿಎಪಿ: ರೈತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 3:55 IST
Last Updated 8 ಆಗಸ್ಟ್ 2022, 3:55 IST
ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರಿನ ಸೊಸೈಟಿಯಲ್ಲಿ ಡಿಎಪಿ ಪಡೆಯಲು ಭಾನುವಾರ ಸಾಲುಗಟ್ಟಿ ನಿಂತಿದ್ದ ರೈತರು
ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರಿನ ಸೊಸೈಟಿಯಲ್ಲಿ ಡಿಎಪಿ ಪಡೆಯಲು ಭಾನುವಾರ ಸಾಲುಗಟ್ಟಿ ನಿಂತಿದ್ದ ರೈತರು   

ಶಿಡ್ಲಘಟ್ಟ: ತಾಲ್ಲೂಕಿನಾದ್ಯಂತ ಉತ್ತಮ ಮಳೆ ಆಗುತ್ತಿದ್ದು, ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಆದರೆ ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರ ಪೂರೈಕೆ ಆಗದೇ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಡಿಎಪಿ ಗೊಬ್ಬರವು ರೈತರ ಬೇಡಿಕೆಗೆ ಅನುಗುಣವಾಗಿ ಕಾಲಕಾಲಕ್ಕೆ ಸರಬರಾಜು ಆಗುತ್ತಿಲ್ಲ ಎಂದು ರೈತರು ದೂರಿದ್ದಾರೆ.

ತಾಲ್ಲೂಕಿನ ಬಹುತೇಕ ಕಡೆ ಮಳೆ ಧಾರಾಕಾರವಾಗಿ ಸುರಿದಿದೆ. ಈಗ ರಸಗೊಬ್ಬರಗಳ ಅಗತ್ಯತೆಯೂ ಹೆಚ್ಚಾಗಿದೆ. ಆದರೆ ಡಿಎಪಿ ಮತ್ತು ಯೂರಿಯಾ ಕೊರತೆ ಕಾಣಿಸಿಕೊಂಡಿದೆ.

ADVERTISEMENT

ಕೇಂದ್ರ ಸರ್ಕಾರ ಡಿಎಪಿ ಬೆಲೆ ಏರಿಸಿದಾಗ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಡಿಎಪಿ ಬೆಲೆಯನ್ನು ₹1,200 ಗೆ ಇಳಿಸಿ ರಸಗೊಬ್ಬರ ಉತ್ಪಾದನಾ ಕಂಪನಿಗಳಿಗೆ ಸಬ್ಸಿಡಿ ಹಣ ನೀಡುವುದಾಗಿ ಹೇಳಿತ್ತು. ಇದೇ ಕಾರಣಕ್ಕೆ ಈಗ ಕಂಪನಿಗಳು ಡಿಎಪಿಯನ್ನು ಹೆಚ್ಚಾಗಿ ಉತ್ಪಾದಿಸದೆ ಪೂರೈಕೆಯನ್ನೂ ಕಡಿಮೆ ಮಾಡಿವೆ ಎಂಬ ಆರೋಪವಿದೆ.

ರೈತರು ಬಹುತೇಕ ರಸಗೊಬ್ಬರ ಮಳಿಗೆಗಳು ಮತ್ತು ಸೊಸೈಟಿ ಮುಂದೆ ಡಿಎಪಿಗಾಗಿ ಸಾಲುಗಟ್ಟಿ ನಿಂತಿರುವ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತಿದೆ.

ತಿಂಗಳಿಂದಲೂ ಕೊರತೆ

‘ ಇದು ಬಿತ್ತನೆ ಮಾಡುವ ಕಾಲ. ಈಗ ನಮಗೆಲ್ಲರಿಗೂ ಡಿಎಪಿ ಅತ್ಯಗತ್ಯ. ಆದರೆ ಡಿಎಪಿ ಸಿಗುತ್ತಿಲ್ಲ. ಕೆಲವರು 20-20 ಗೊಬ್ಬರ ಕೊಂಡು ತಂದು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಕಳೆದ ಒಂದು ತಿಂಗಳಿಂದಲೂ ಡಿಎಪಿ ಗೊಬ್ಬರಕ್ಕೆ ತೀವ್ರ ಕೊರತೆಯಿದೆ. ಅಲ್ಪ ಸ್ವಲ್ಪ ಬಂದರೂ ಒಂದೆರಡು ಗಂಟೆಗಳಲ್ಲಿ ಖಾಲಿಯಾಗಿಬಿಡುತ್ತದೆ. ಬಿತ್ತನೆ ಕಾರ್ಯಕ್ಕೆ ಡಿಎಪಿ ಸಿಗದಂತಾಗಿದೆ’ ಎನ್ನುತ್ತಾರೆ ರೈತ ರಂಜಿತ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.