ADVERTISEMENT

ಭೂಸ್ವಾಧೀನ ಪರಿಹಾರ ಪಡೆಯಲು ದಾಖಲೆ ಸಲ್ಲಿಸಿ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 2:48 IST
Last Updated 24 ಜುಲೈ 2025, 2:48 IST
ಬಾಗೇಪಲ್ಲಿ ತಾಲ್ಲೂಕು ಪಂಚಾಯಿತ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ತಹಶೀಲ್ದಾರ್ ಮನೀಷಾ ಪತ್ರಿ, ಕೆಐಎಡಿಬಿ ಅಧಿಕಾರಿಗಳು ರೈತರ ಜತೆ ಸಭೆ ನಡೆದಸಿದರು
ಬಾಗೇಪಲ್ಲಿ ತಾಲ್ಲೂಕು ಪಂಚಾಯಿತ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ತಹಶೀಲ್ದಾರ್ ಮನೀಷಾ ಪತ್ರಿ, ಕೆಐಎಡಿಬಿ ಅಧಿಕಾರಿಗಳು ರೈತರ ಜತೆ ಸಭೆ ನಡೆದಸಿದರು   

ಬಾಗೇಪಲ್ಲಿ: ಕೊಂಡರೆಡ್ಡಿಪಲ್ಲಿ ಹಾಗೂ ಹೊಸಹುಡ್ಯ ಗ್ರಾಮಗಳ 625 ಎಕರೆಯಲ್ಲಿ 429 ಎಕರೆ ಖರಾಬು ಹಾಗೂ ಉಳಿದ 197 ಎಕರೆ ಪ್ರದೇಶದ ಜಮೀನನ್ನು ಕೈಗಾರಿಕಾ ಪ್ರದೇಶಾಭಿವೃದ್ಧಿಗೆ ಭೂಸ್ವಾಧೀನ ಪಡಿಸಿಕೊಂಡಿದ್ದು, ಪರಿಹಾರ ಪಡೆಯಲು ಭೂಮಾಲೀಕರು ಮೂಲ ದಾಖಲೆ ಒದಗಿಸಬೇಕು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮನವಿ ಮಾಡಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಹಶೀಲ್ದಾರ್, ಕೈಗಾರಿಕಾ ಪ್ರದೇಶಾಭಿವೃದ್ಧಿ ಅಧಿಕಾರಿಗಳು, ರೈತರ ಜೊತೆ ಬುಧವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.

ಕರ್ಣಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1916 ಅಡಿಯಲ್ಲಿ ಸರ್ಕಾರದ ಅಧಿಸೂಚನೆ ಹೊರಡಿಸಿ ರಾಜ್ಯಪತ್ರದಲ್ಲಿ ಪ್ರಕಟಿಸುವ ಮೂಲಕ ಜಮೀನುಗಳನ್ನು ಭೂಸ್ವಾಧೀನಪಡಿಸಲಾಗಿದೆ. ಹೊಸಹುಡ್ಯ ಗ್ರಾಮದ ಜಮೀನಿಗೆ ಎಕರೆಗೆ ₹70 ಲಕ್ಷ, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ 100 ಮೀಟರ್ ವ್ಯಾಪ್ತಿಯೊಳಗೆ ಇರುವ ಜಮೀನುಗಳಿಗೆ ಎಕರೆಗೆ ₹1 ಕೋಟಿಯಂತೆ ಹಾಗೂ ಭೂ ಪರಿವರ್ತನೆ ಆಗಿರುವ ಜಮೀನುಗಳಿಗೆ ಹೆಚ್ಚುವರಿಯಾಗಿ ₹5 ಲಕ್ಷ ಪರಿಹಾರ ಪಾವತಿಸಲು ಅನುಮೋದನೆ ಮಾಡಲಾಗಿದೆ ಎಂದರು.

ADVERTISEMENT

ಭೂಮಾಲೀಕರು ಪರಿಹಾರ ಒಪ್ಪಂದ ದರದಲ್ಲಿ ಪಡೆಯಲು ಒಪ್ಪಿಗೆ ಇದ್ದಲ್ಲಿ, ಒಪ್ಪಿಗೆ ಪತ್ರದೊಂದಿಗೆ ಭೂದಾಖಲೆಗಳನ್ನು ನೋಟಿಸ್ ತಲುಪಿದ 15 ದಿನಗಳ ಒಳಗೆ ಸಲ್ಲಿಸಬೇಕು. ಆಕ್ಷೇಪಣೆ ಇದ್ದಲ್ಲಿ ಅರ್ಜಿಯನ್ನು 15 ದಿನಗಳ ಒಳಗೆ ಸಲ್ಲಿಸಬೇಕು ಎಂದರು.

ಬರಪೀಡಿತ ಹಾಗೂ ಹಿಂದುಳಿದ ಪಟ್ಟಿಯಲ್ಲಿ ಇರುವ ತಾಲ್ಲೂಕನ್ನು ಅಭಿವೃದ್ಧಿಯತ್ತ ಸಾಗಿಸಲು ಶಾಶ್ವತ ನೀರಾವರಿ ಹಾಗೂ ಕೈಗಾರಿಕಾ ಪ್ರದೇಶ ಇರಬೇಕು. ಕೈಗಾರಿಕಾ ಪ್ರದೇಶಕ್ಕೆ ರೈತರು ತಮ್ಮ ಭೂಮಿ ಸ್ವಾಧೀನಪಡಿಸಲು ಅವಕಾಶ ನೀಡಬೇಕು. ದೇವನಹಳ್ಳಿ ತಾಲ್ಲೂಕಿನಲ್ಲಿ ನಿರ್ಮಿಸಬೇಕಾಗಿದ್ದ ಕೈಗಾರಿಕೆಗಳನ್ನು ತಾಲ್ಲೂಕಿನಲ್ಲಿ ಆರಂಭಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸರ್ಕಾರ ಕೈಗಾರಿಕಾ ಪ್ರದೇಶ ಆರಂಭಿಸಲು ಅನುಮತಿ ಹಾಗೂ ಅನುದಾನ ನೀಡಬೇಕು. ಈ ಸಂಬಂಧ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕೈಗಾರಿಕಾ ಸಚಿವರ ಬಳಿ ಚರ್ಚಿಸಲಾಗುವುದು ಎಂದು ತಿಳಿಸಿದರು.

ತಹಶೀಲ್ದಾರ್ ಮನೀಷಾ ಎನ್.ಪತ್ರಿ ಮಾತನಾಡಿ, ರೈತರು ತಮ್ಮ ಒಪ್ಪಿಗೆ ಪತ್ರದ ಜೊತೆ ಅಗತ್ಯವಾದ ಮೂಲದಾಖಲೆಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ರೈತರಿಗೆ ತಿಳಿಸಲಾಗಿದೆ. ಯಾವುದೇ ವ್ಯಾಜ್ಯಗಳ ಹಾಗೂ ಸಮಸ್ಯೆಗಳ ಬಗ್ಗೆ ಇದ್ದರೆ, ಭೂಮಾಲೀಕರು ನೇರವಾಗಿ ಸಂಪರ್ಕಿಸಬಹುದು ಎಂದರು.

ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿ ಹರೀಶ್, ಅಧಿಕಾರಿ ಶಿಲ್ಪ, ತಾಲ್ಲೂಕು ಪಂಚಾಯಿತಿ ಇಒ ಜಿ.ವಿ.ರಮೇಶ್, ಎಚ್.ಎಸ್.ನರೇಂದ್ರ, ಪ್ರಶಾಂತ್ ವರ್ಣಿ, ಶ್ರೀನಿವಾಸರೆಡ್ಡಿ, ರೈತರು, ಭೂಮಾಲೀಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.