ಚಿಕ್ಕಬಳ್ಳಾಪುರ: ಭಾರತೀಯ ಜೀವ ವಿಮಾ (ಎಲ್ಐಸಿ) ಸಂಸ್ಥೆ ಪ್ರತಿನಿಧಿಗಳು ಮತ್ತು ಪಾಲಿಸಿದಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎಲ್ಐಸಿ ಪ್ರತಿನಿಧಿಗಳ ಒಕ್ಕೂಟದ ಜಿಲ್ಲಾ ಶಾಖೆಯ ಪದಾಧಿಕಾರಿಗಳು ನಗರದ ಎಲ್ಐಸಿ ಕಚೇರಿ ಎದುರು ಶುಕ್ರವಾರ ಪ್ರತಿಭಟಿಸಿದರು.
ಪ್ರತಿಭಟನೆಯಲ್ಲಿ ಲಿಯಾಫಿ ವಿಭಾಗೀಯ ಅಧ್ಯಕ್ಷ ವಿ.ರವೀಂದ್ರನಾಥ್ ಜೋನಲ್ ಮಾತನಾಡಿ, ‘ವಿಮಾ ಪ್ರತಿನಿಧಿಗಳಿಗೆ ಹಾಗೂ ಪಾಲಿಸಿದಾರರಿಗೆ ಬೋನಸ್ ದರ ಹೆಚ್ಚಳ, ಶಾಖೆಗಳಲ್ಲಿ ಗುಣಮಟ್ಟದ ಸೇವೆ, ಪ್ರತಿನಿಧಿಗಳ ಕಮಿಷನ್ ದರದಲ್ಲಿ ಹೆಚ್ಚಳ ಮೊದಲಾದ ಬೇಡಿಕೆಗೆ ವಿಮಾ ಸಂಸ್ಥೆ ನಿರಾಸಕ್ತಿ ವಹಿಸಿದೆ. ಬೇಡಿಕೆಗಳನ್ನು ಈಡೇರಿಸುವಂತೆ ಸಂಸ್ಥೆಗೆ ಅನೇಕ ಬಾರಿ ಮನವಿ ಮಾಡಿದರೂ ನಿರ್ಲಕ್ಷ್ಯ ತೋರುತ್ತಿರುವುದು ಖಂಡನೀಯ’ ಎಂದು ಆಕ್ರೋಶ
ವ್ಯಕ್ತಪಡಿಸಿದರು.
‘ಪಾಲಿಸಿದಾರರ ಪಾಲಿಸಿ ಮೇಲಿನ ಸಾಲ ಮತ್ತು ಇತರ ಆರ್ಥಿಕ ವ್ಯವಹಾರಗಳ ಮೇಲಿನ ಬಡ್ಡಿದರ ಇಳಿಕೆ, ದಾಖಲೆ ಸಲ್ಲಿಸಿದಾಗ ಸ್ವೀಕೃತಿ ನೀಡುವುದು, ತಡವಾಗಿ ವಿಮಾ ಕಂತು ಪಾವತಿ ಮಾಡಿದರೆ ಅದರ ಮೇಲಿನ ಜಿಎಸ್ಟಿ ಕಡಿಮೆ ಮಾಡಬೇಕು. ಕಂತು ಹಾಗೂ ವಿಮೆಗೆ ವಿಧಿಸುವ ಜಿಎಸ್ಟಿ ರದ್ದುಗೊಳಿಸಬೇಕು. ಎಲ್ಲ ಪ್ರತಿನಿಧಿಗಳಿಗೆ ಗುಂಪು ವೈದ್ಯಕೀಯ ವಿಮೆ ಜಾರಿಗೊಳಿಸಬೇಕು’ ಎಂದು ಆಗ್ರಹಿಸಿದರು.
ಎಲ್ಐಸಿ ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಸೋಮಶೇಖರ್, ವಲಯ ಕಾರ್ಯಕಾರಿ ಸಮಿತಿ ಸದಸ್ಯ ಟಿ.ಸಿ.ಲಕ್ಷ್ಮಣ್, ಮಂಜುನಾಥ್, ಚಿಕ್ಕಬಳ್ಳಾಪುರ ಶಾಖೆ ಅಧ್ಯಕ್ಷ ಬಿ.ಬಯ್ಯಾರೆಡ್ಡಿ, ಉಪಾಧ್ಯಕ್ಷ ಕೆ.ಎಂ.ವೆಂಕಟಶಿವಾರೆಡ್ಡಿ, ಜಂಟಿ ಕಾರ್ಯದರ್ಶಿ ಚಲಪತಿ, ವಿಮಾ ಪ್ರತಿನಿಧಿ ಮೋಹನ್ ಬಾಬು, ರಮೇಶ್ಗುಪ್ತ, ಗುರುರಾಜ್, ಶ್ರೀನಿವಾಸ ಚಾರಿ, ಚಂದ್ರಕಲಾ, ಅರುಣ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.