ಗುಡಿಬಂಡೆ: ಪದವಿ ಅಂಕಪಟ್ಟಿ ವಿತರಣೆ ವಿಳಂಬ ಖಂಡಿಸಿ ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಕಾಲೇಜಿನ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿ ಬಿ.ಎ. ಸೋಮಶೇಖರ್ ಮಾತನಾಡಿ, ಪ್ರಾಂಶುಪಾಲರು ವಿಶ್ವವಿದ್ಯಾಲಯದಿಂದ ಅಂಕಪಟ್ಟಿ ತರಿಸಿಕೊಡದೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ಜತೆಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಎ ಮತ್ತು ಬಿಕಾಂ ಪದವಿ ಮುಗಿಸಿದ್ದು ವಿದ್ಯಾರ್ಥಿಗಳು ಶುಲ್ಕ ಪಾವತಿಸಿದ್ದಾರೆ. ಶುಲ್ಕ ಬಾಕಿ ಇರುವುದಿಲ್ಲ. ಆದರೂ ಅಂಕಪಟ್ಟಿ ಕೇಳಿದರೆ ಅಂಕಪಟ್ಟಿ ವಿಭಾಗದಲ್ಲಿ ಸಾಕಷ್ಟು ಹಣ ಬಾಕಿ ಇದೆ. ಆದ್ದರಿಂದ ಅಂಕಪಟ್ಟಿ ನೀಡುತ್ತಿಲ್ಲ ಎಂಬ ಕುಂಟು ನೆಪವೊಡ್ಡಿ ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ದಿಕ್ಕುತಪ್ಪಿಸುತ್ತಿದ್ದಾರೆ ಎಂದು ದೂರಿದರು.
2017-18ರಿಂದ 2019-20ನೇ ಸಾಲಿನಡಿ ನಡೆದ ಮೂರರಿಂದ ಆರನೇ ಸೆಮಿಸ್ಟರ್ವರೆಗಿನ ಬಿಕಾಂ, ಬಿಎ ಹಾಗೂ ಇತರೆ ಪದವಿ ಪರೀಕ್ಷೆಯ ಅಂಕಪಟ್ಟಿ ವಿತರಣೆ ವಿಳಂಬವಾಗಿದೆ. ಇದರಿಂದ ನೂರಾರು ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದೆ. ಸ್ನಾತಕೋತ್ತರ, ಬಿ.ಇಡಿ ಹಾಗೂ ಇತರೆ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಮತ್ತು ಉದ್ಯೋಗ ಗಿಟ್ಟಿಸಿಕೊಳ್ಳಲು ತೊಂದರೆಯಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.
ಕಾಲೇಜು ಅಭಿವೃದ್ಧಿ ಸಮಿತಿಯಲ್ಲಿ ಸಾಕಷ್ಟು ಹಣ ಇದೆ. ಅದನ್ನು ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಬಾಕಿ ಹಣಕ್ಕೆ ಹೊಂದಾಣಿಕೆ ಮಾಡಬೇಕು. ಶಾಸಕರು ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಲು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಪರೀಕ್ಷೆ ಮುಗಿದು ಮೂರು ವರ್ಷಗಳು ಕಳೆದಿದ್ದರೂ ಅಂಕಪಟ್ಟಿ ವಿತರಣೆ ವಿತರಿಸಿಲ್ಲ. ಇನ್ನು ಹತ್ತು ದಿನಗಳಲ್ಲಿ ಅಂಕಪಟ್ಟಿ ವಿತರಿಸದಿದ್ದರೆ ಪೋಷಕರೊಟ್ಟಿಗೆ ಬಂದು ಕಾಲೇಜಿನ ಮುಂದೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭನಟನೆಯಲ್ಲಿ ಕರವೇ ಮುಖಂಡ ನವೀನ್, ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಅಂಬರೀಶ್, ಜಿ.ವಿ. ಶ್ರೀನಾಥ್, ಎನ್. ಮಂಜುನಾಥ, ಶ್ರೀನಿವಾಸ, ಸಂತೋಷ್ ಆರ್.ಎಲ್., ಲಕ್ಷ್ಮಿನರಸಿಂಹಪ್ಪ, ಆಕಾಶ್, ನವೀನ್ ಕೆ.ವಿ, ನಾಗರಾಜು, ಮೌನಿಕಾ, ಕೆ.ವಿ, ನಾಗರಾಜು, ಸೋನಿಯಾ, ನಂದಿನಿ, ಯಶೋದಾ, ಗಂಗಾದೇವಿ, ಪ್ರತಿಭಾ ಸೇರಿದಂತೆ ಹಲವು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.