ADVERTISEMENT

ಕಂದಾಚಾರ ಖಂಡಿಸಿದ್ದ ಮಡಿವಾಳ ಮಾಚಿದೇವ: ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಅಮರೇಶ್

ಜಿಲ್ಲಾಡಳಿತದಿಂದ ಜಯಂತಿ ಆಚರಣೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಅಮರೇಶ್ ಅಭಿಮತ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2021, 1:07 IST
Last Updated 2 ಫೆಬ್ರುವರಿ 2021, 1:07 IST
ಮಡಿವಾಳ ಮಾಚೀದೇವರ ಜಯಂತಿಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಮತ್ತು ಮುಖಂಡರು
ಮಡಿವಾಳ ಮಾಚೀದೇವರ ಜಯಂತಿಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಮತ್ತು ಮುಖಂಡರು   

ಚಿಕ್ಕಬಳ್ಳಾಪುರ: 12ನೇ ಶತಮಾನದಲ್ಲಿ ಸಮಾಜದಲ್ಲಿನ ಮೂಢನಂಬಿಕೆ, ಧಾರ್ಮಿಕ ಕಂದಾಚಾರಗಳನ್ನು ಖಂಡಿಸಿ, ಸಮಾಜಕ್ಕೆ ಸನ್ಮಾರ್ಗ ತೋರಿದ ಶರಣರಲ್ಲಿ ಮಡಿವಾಳ ಮಾಚಿದೇವ ಪ್ರಮುಖರಾಗಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಅಮರೇಶ್ ಅವರು ಹೇಳಿದರು.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಮಾಚಿದೇವರ ಭಾವಚಿತ್ರಕ್ಕೆ ಪುಷ್ಟನಮನ ಸಲ್ಲಿಸಿ ಅವರು ಮಾತನಾಡಿದರು.

ಮಹಾನ್ ಶರಣರು ನಡೆಸಿದ ವಚನ ಚಳುವಳಿಯು ಅದ್ಭುತ ಕಾರ್ಯವಾಗಿತ್ತು. ಮಡಿವಾಳ ಮಾಚಿದೇವ ಶರಣರ ಬಟ್ಟೆಗಳನ್ನು ಮಡಿ ಮಾಡುವ ಕಾರ್ಯ ಬಹಳ ನಿಷ್ಠೆಯಿಂದ ಮಾಡುತ್ತಿದ್ದರು. ಅವರ ಕಾರ್ಯ ನಿಷ್ಠೆಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಆಗ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ADVERTISEMENT

ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಚಿಕ್ಕಬಳ್ಳಾಪುರದ ಸರ್ ಎಂ.ವಿಶ್ವೇಶ್ವರಯ್ಯ ಕಾಲೇಜಿನ ಉಪನ್ಯಾಸಕರಾದ ರಾಜಶೇಖರ್, ಮೇಲು-ಕೀಳು, ತುಳಿತಕ್ಕೆ ಒಳಗಾದ ಸಮಾಜವನ್ನು ತಮ್ಮ ವಚನಗಳ ಮೂಲಕ ತಿದ್ದಿ, ಸಮಾಜವನ್ನು ಎತ್ತಿ ಹಿಡಿದ 12ನೇ ಶತಮಾನ ಸುವರ್ಣಾಕ್ಷರಗಳಿಂದ ಬರೆದಿಡುವ ಕಾಲವಾಗಿತ್ತು. ಕ್ರಾಂತಿಕಾರಿ ಶರಣ ಮಡಿವಾಳ ಮಾಚಿದೇವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ದೇವರ ಹಿಪ್ಪರಗಿಯ ಪರ್ವತಯ್ಯ ಮತ್ತು ಸುಜ್ಞಾನಮ್ಮ ದಂಪತಿಗೆ ಜನಿಸಿದರು ಎಂಬುದಾಗಿ ಇತಿಹಾಸದಿಂದ ತಿಳಿದು ಬರುತ್ತದೆ ಎಂದರು.

ವಚನಗಳ ರಕ್ಷಕನಾದ ಮಡಿವಾಳ ಮಾಚಿದೇವರು ಅನುಭವ ಮಂಟಪಕ್ಕೆ ಬರುವ ಶರಣರನ್ನು ಬರಮಾಡಿಕೊಳ್ಳುವ ಕಾಯಕವು ಇಂದಿನ ವಿದೇಶಾಂಗ ರಕ್ಷಣಾ ಸಚಿವರ ಕಾಯಕದಂತೆ ಇತ್ತು. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ತತ್ವ ವಚನ ಚಳವಳಿಯ ಮೂಲಕ ತಿಳಿಸಿದರು. ಅಂತಹ ಶರಣರ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

ದೇವರಿಗೆ ಬಲಿಕೊಡುವ ಕಂದಾಚಾರದ ಆಚರಣೆಗಳನ್ನು ಖಂಡಿಸಿದರು. ಸತ್ಯ ನಿತ್ಯ ಅಳವಡಿಸಿಕೊಂಡಾಗ ಸಮಾಜ ಸುಧಾರಣೆ ಸಾಧ್ಯ ಎಂದ ಅವರು, ಅರಸುತನ ಮೇಲಲ್ಲ, ಅಗಸತನ ಕೀಳಲ್ಲ ಎಂದು ಸಮಾಜದಲ್ಲಿನ ಗೊಂದಲಗಳಿಗೆ ಕಿವಿಗೊಡದೆ, ವೈಚಾರಿಕತೆಯ ಹಿನ್ನೆಲೆಯಲ್ಲಿ ಸಮಾಜವನ್ನು ಶುಚಿಮಾಡುವ ಕಾಯಕದ ಜತೆಗೆ ಅನುಭವ ಮಂಟಪದ ಶರಣರ ಬಟ್ಟೆಗಳನ್ನು ಮಡಿ ಮಾಡಿ ಕೊಡುತ್ತಿದ್ದರು. ನೇರನುಡಿಯ ವ್ಯಕ್ತಿತ್ವದ ಮಡಿವಾಳ ಮಾಚಿದೇವ ಬಸವಣ್ಣನವರನ್ನೇ ಪ್ರಶ್ನೆ ಮಾಡುತ್ತಿದ್ದರು. ಪ್ರಶ್ನೆ ಮಾಡುವುದರ ಮೂಲಕ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ನಂಬಿದ್ದ ಅವರು ಕಲಿದೇವರ ದೇವಾ ಎಂಬ ಅಂಕಿತನಾಮದಿಂದ ಹಲವು ವಚನಗಳನ್ನು ರಚಿಸಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಎಂ.ರೇಣುಕಾ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಗಿರಿಜಾಶಂಕರ್, ಮಡಿವಾಳ ಸಮಾಜದ ಮುಖಂಡ ಡಾ.ರಂಗಯ್ಯ, ಮಡಿವಾಳ ಮಾಚಿದೇವರ ಸಂಘದ ಜಿಲ್ಲಾಧ್ಯಕ್ಷರಾದ ಪದ್ಮಾವತಮ್ಮ, ತಾಲ್ಲೂಕು ಅಧ್ಯಕ್ಷರಾದ ಮುನಿನಾರಾಯಣಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇತರೆ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.