ADVERTISEMENT

ಬಾಗೇಪಲ್ಲಿ: ಕೃಷಿ ಇಲಾಖೆಯಲ್ಲಿ 28 ಹುದ್ದೆ ಖಾಲಿ!

ಹುದ್ದೆ ಭರ್ತಿ ಮಾಡದಿದ್ದರೆ ಹೋರಾಟ; ರೈತ ಸಂಘಟನೆ ಎಚ್ಚರಿಕೆ

ಪಿ.ಎಸ್.ರಾಜೇಶ್
Published 22 ಮೇ 2025, 6:24 IST
Last Updated 22 ಮೇ 2025, 6:24 IST
<div class="paragraphs"><p>ಬಾಗೇಪಲ್ಲಿ ಕೃಷಿ ಇಲಾಖೆ ಕಚೇರಿ</p></div>

ಬಾಗೇಪಲ್ಲಿ ಕೃಷಿ ಇಲಾಖೆ ಕಚೇರಿ

   

ಬಾಗೇಪಲ್ಲಿ: ತಾಲ್ಲೂಕಿನಲ್ಲಿ ಸತತವಾಗಿ ಮಳೆಯಾಗುತ್ತಿದೆ. ರೈತರು ಹೊಲ ಗದ್ದೆಗಳಲ್ಲಿ ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದಾರೆ. ಆದರೆ ರೈತರಿಗೆ ಬಿತ್ತನೆ ಬೀಜ ವಿತರಿಸಲು ಹಾಗೂ ಅಗತ್ಯ ಮಾಹಿತಿ ನೀಡಬೇಕಾದ ತಾಲ್ಲೂಕಿನ ಕೃಷಿ ಇಲಾಖೆಯಲ್ಲಿ ಕೃಷಿ ಅಧಿಕಾರಿ, ಸಿಬ್ಬಂದಿ ಕೊರತೆ ಇದೆ.

ಖಾಲಿ ಇರುವ ಕೃಷಿ ಅಧಿಕಾರಿ, ಸಿಬ್ಬಂದಿಯನ್ನು ಭರ್ತಿ ಮಾಡದಿದ್ದರೆ ಕಚೇರಿ ಮುಂದೆ ಅನಿರ್ದಿಷ್ಟ ಕಾಲ ಪ್ರತಿಭಟನೆ ಮಾಡಲಾಗುವುದು ಎಂದು ರೈತ ಸಂಘಟನೆಗಳ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಬಾಗೇಪಲ್ಲಿ ಹಾಗೂ ಚೇಳೂರು ತಾಲ್ಲೂಕುಗಳ ಪೈಕಿ ಕಸಬಾ, ಪಾತಪಾಳ್ಯ, ಗೂಳೂರು, ಮಿಟ್ಟೇಮರಿ, ಚೇಳೂರು ಹೋಬಳಿ ಕೇಂದ್ರ ಇವೆ. ಈ ಪೈಕಿ 23 ಕೃಷಿ ಸಹಕಾರ ಕೇಂದ್ರ ಇವೆ. 39,592 ಮಂದಿ ರೈತರ ಪೈಕಿ, 6,086 ದೊಡ್ಡ ರೈತರು, 23,773 ಮಂದಿ ಸಣ್ಣ ರೈತರು ಇದ್ದಾರೆ.

160 ಬಾವಿ, 4,345 ಕೊಳವೆಬಾವಿ ಇವೆ. 18 ಬ್ಯಾಂಕ್‌, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 23, ಬಿತ್ತನೆ ಬೀಜ ವಿತರಕರು 19, ರಸಗೊಬ್ಬರ ಕೇಂದ್ರಗಳು 17, ಕೀಟನಾಶಕ ವಿತರಕರು 33 ಹಾಗೂ ರೈತ ಸಂಪರ್ಕ ಕೇಂದ್ರ 5 ಹಾಗೂ ಮಳೆ ಮಾಪನ ಕೇಂದ್ರ 5 ಇವೆ.

ತಾಲ್ಲೂಕಿನ ಕೃಷಿ ಇಲಾಖೆಯಲ್ಲಿ ಮಂಜೂರಾದ 32 ಹುದ್ದೆಗಳ ಪೈಕಿ 4 ಭರ್ತಿಯಾಗಿದ್ದು, ಉಳಿದಂತೆ 28 ಹುದ್ದೆ ಖಾಲಿ ಇವೆ. ತಾಲ್ಲೂಕು ಸಹಾಯಕ ಕೃಷಿ ನಿದೇರ್ಶಕ, ತಾಂತ್ರಿಕ ಅಧಿಕಾರಿ, ದ್ವಿತೀಯ ದರ್ಜೆ ಸಹಾಯಕ, ಬೆರಳಚ್ಚುಗಾರರು ಒಬ್ಬರ ಪೈಕಿ ಕೇವಲ 4 ಮಂದಿ ಅಧಿಕಾರಿಗಳು, ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಖಾಲಿ ಹುದ್ದೆಗಳ ವಿವರ: ಕೃಷಿ ಇಲಾಖೆ ಕಚೇರಿಯಲ್ಲಿ ತಾಂತ್ರಿಕ ಅಧಿಕಾರಿ 1, ಅಧೀಕ್ಷಕ 1, ಪ್ರಥಮ ದರ್ಜೆ ಸಹಾಯಕ 1, ದ್ವಿತೀಯ ದರ್ಜೆ ಸಹಾಯಕ 1, ವಾಹನ ಚಾಲಕ 1, ಬೆರಳಚ್ಚುಗಾರ 1 ಹಾಗೂ ಡಿ.ಗುಂಪು 3 ಖಾಲಿ ಹುದ್ದೆ ಇವೆ.

ರೈತ ಸಂಪರ್ಕ ಕೇಂದ್ರಗಳಲ್ಲಿ ಖಾಲಿ ಹುದ್ದೆ: ಕಸಬಾ ಹೋಬಳಿ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿ 1, ಸಹಾಯಕ ಕೃಷಿ ಅಧಿಕಾರಿ 2 ಹುದ್ದೆ, ಪಾತಪಾಳ್ಯ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿ 1, ಸಹಾಯಕ ಕೃಷಿ ಅಧಿಕಾರಿ 2 ಹುದ್ದೆ, ಗೂಳೂರಿನಲ್ಲಿ ಕೃಷಿ ಅಧಿಕಾರಿ 2, ಸಹಾಯಕ ಕೃಷಿ ಅಧಿಕಾರಿ 3, ಮಿಟ್ಟೇಮರಿಯಲ್ಲಿ ಕೃಷಿ ಅಧಿಕಾರಿ 1, ಸಹಾಯಕ ಕೃಷಿ ಅಧಿಕಾರಿ 2 ಹಾಗೂ ಚೇಳೂರು ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿ 1, ಸಹಾಯಕ ಕೃಷಿ ಅಧಿಕಾರಿ 3 ಹುದ್ದೆ ಖಾಲಿ ಇವೆ.

ತಾಲ್ಲೂಕಿನಲ್ಲಿ ಹೆಚ್ಚಾಗಿ ನೆಲಗಡಲೆ, ಭತ್ತ, ರಾಗಿ, ಅವರೆ, ಮುಸುಕಿನ ಜೋಳ ಸೇರಿದಂತೆ ಏಕದಳ, ದ್ವಿದಳ ಕಾಳು ಬೆಳೆಯುತ್ತಾರೆ. ಕೊಳವೆಬಾವಿ, ತೆರೆದಬಾವಿಗಳಿಂದ ಹನಿ ಹಾಗೂ ತುಂತುರು ನೀರಾವರಿ ಬಳಕೆ ಮಾಡಿಕೊಂಡು ಬೆಳೆಯುತ್ತಿದ್ದಾರೆ. ರೈತರು ಮತ್ತಷ್ಟು ಪರಿಣಾಮಕಾರಿಯಾಗಿ ಕೃಷಿ ಬೆಳೆ ಬೆಳೆಯಲು ಮಾಹಿತಿ ನೀಡಬೇಕಾದ ತಾಲ್ಲೂಕಿನ ಕೃಷಿ ಇಲಾಖೆಯಲ್ಲಿ ಅನೇಕ ವರ್ಷಗಳಿಂದ ಕೃಷಿ ಅಧಿಕಾರಿ, ಸಿಬ್ಬಂದಿ ಕೊರತೆ ಇದೆ. ಇಲಾಖೆಯ ಕಾರ್ಯಕ್ರಮ ಅನುಷ್ಠಾನ ಮಾಡುವುದಕ್ಕೆ ತೊಂದರೆ ಆಗಿದೆ.

ಮಳೆಯಿಂದ ಹಾನಿಗೊಳಗಾದ ಬೆಳೆಗಳ ಮಾಹಿತಿ ಪಡೆಯಲು ಕೃಷಿ ಇಲಾಖೆಯಲ್ಲಿ ಅಧಿಕಾರಿಗಳು, ಸಿಬ್ಬಂದಿ ಇಲ್ಲ. ಕಚೇರಿ ಅಧಿಕಾರಿಗಳಿಗೆ ಸಭೆ, ಸಮಾರಂಭದ ಹೆಚ್ಚುವರಿ ಕೆಲಸ ಇರುತ್ತದೆ. ಗ್ರಾಮೀಣ ಪ್ರದೇಶಗಳ ರೈತರು ಬೆಳೆಯುವ ಗದ್ದೆಗಳಿಗೆ ಭೇಟಿ ಮಾಡಿ, ಪರಿಶೀಲನೆ ಮಾಡಲು ಸಮಯ ಸಿಗುತ್ತಿಲ್ಲ. ಒಬ್ಬರು ಎಷ್ಟು ಕೆಲಸ ಮಾಡಲು ಆಗುತ್ತದೆ? ಎಂದು ಕೃಷಿ ಅಧಿಕಾರಿಯೊಬ್ಬರು ಪ್ರಶ್ನಿಸಿದರು.

ಇದೀಗ ಮುಂಗಾರು ಮಳೆ ಆಗಿದೆ. ರೈತರು ಹೊಲ ಗದ್ದೆ ಹದ ಮಾಡುತ್ತಿದ್ದಾರೆ. ಬಿತ್ತನೆಬೀಜ ವಿತರಣೆ ಮಾಡಬೇಕು. ಆದರೆ ಕೃಷಿ ಇಲಾಖೆಯಲ್ಲಿ ಮಾಹಿತಿ ನೀಡಬೇಕಾದ ಅಧಿಕಾರಿ, ಸಿಬ್ಬಂದಿ ಇಲ್ಲ ಎಂದು ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಕಾರ್ಯದರ್ಶಿ ಟಿ.ರಘುನಾಥರೆಡ್ಡಿ ಹೇಳಿದರು.

 ತಾಲ್ಲೂಕಿನ ಕೃಷಿ ಇಲಾಖೆಯಲ್ಲಿ ಅಧಿಕಾರಿ, ಸಿಬ್ಬಂದಿಯವರನ್ನು ನೇಮಿಸಿ, ಇಲ್ಲವಾದರೆ ಕಚೇರಿ ಮುಚ್ಚಿ ಎಂದು ವಿಧಾನಸೌಧದ ಅಧಿವೇಶನದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿದ್ದಾರೆ. ಆದರೆ ಸರ್ಕಾರ ಇದುವರೆಗೂ ನೇಮಕ ಮಾಡಿಲ್ಲ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಆರ್.ಪ್ರತಾಪ್ ಹೇಳಿದರು.

‘ಕಾಂಗ್ರೆಸ್ ಸರ್ಕಾರ ಇದೀಗ ಕೃಷಿ ಇಲಾಖೆಯಲ್ಲಿ ಕೆಪಿಎಸ್‍ಸಿ ಮೂಲಕ ಹಾಗೂ ಹೊರಗುತ್ತಿಗೆ ಮೂಲಕ ನೇಮಕ ಮಾಡುವ ಪ್ರಕ್ರಿಯೆ ಮಾಡುತ್ತಿದೆ. 2 ತಿಂಗಳ ಒಳಗೆ ಅಧಿಕಾರಿ, ಸಿಬ್ಬಂದಿ ನೇಮಕ ಮಾಡಲಾಗುವುದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಭರವಸೆ ನೀಡಿದ್ದಾರೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಈ ಹಿಂದೆ ಬಿತ್ತನೆಬೀಜ ಪಡೆಯಲು ಸೊಸೈಟಿಗಳ ಮುಂದೆ ಗಂಟೆಗಟ್ಟಲೆ ಊಟ ತಿಂಡಿ ಇಲ್ಲದೇ ಪರದಾಡಿದ್ದೇವೆ. ಈ ಬಾರಿ ಅಗತ್ಯ ಇರುವಷ್ಟು ಬಿತ್ತನೆಬೀಜ ರೈತರಿಗೆ ವಿತರಿಸಬೇಕು..
–ಕಡೇಹಳ್ಳಿ ವೆಂಕಟಶಿವಪ್ಪ ರೈತ
ಸರ್ಕಾರ ಕೃಷಿ ಇಲಾಖೆಗೆ ಸಿಬ್ಬಂದಿಯನ್ನು ನೇಮಕ ಮಾಡಬೇಕು. ಇಲ್ಲವಾದರೆ ಕೃಷಿ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು.
–ಡಿ.ಟಿ.ಮುನಿಸ್ವಾಮಿ ಪ್ರಾಂತ ರೈತ ಸಂಘದ ಸಂಚಾಲಕ
ಟಿ.ರಘುನಾಥರೆಡ್ಡಿ
ಡಿ.ಟಿ.ಮುನಿಸ್ವಾಮಿ
ಕಡೇಹಳ್ಳಿ ವೆಂಕಟಶಿವಪ್ಪ
ಆರ್.ಪ್ರತಾಪ್
ಎಸ್.ಎನ್.ಸುಬ್ಬಾರೆಡ್ಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.