ADVERTISEMENT

ಬಾಗೇಪಲ್ಲಿ: ಸರ್ವ ಧರ್ಮೀಯರಿಗೆ ಮಸೀದಿ ದರ್ಶನ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2024, 16:24 IST
Last Updated 3 ಮಾರ್ಚ್ 2024, 16:24 IST
ಬಾಗೇಪಲ್ಲಿ ಪಟ್ಟಣದ ಫಾರೂಕ್ ಮಸೀದಿಗೆ ಪ್ರವೇಶಿದ ಮಹಿಳೆಯರಿಗೆ ಮಸೀದಿಯಲ್ಲಿನ ಪ್ರಾರ್ಥನೆ‌ ಬಗ್ಗೆ‌ ವಿವರಿಸಿದರು
ಬಾಗೇಪಲ್ಲಿ ಪಟ್ಟಣದ ಫಾರೂಕ್ ಮಸೀದಿಗೆ ಪ್ರವೇಶಿದ ಮಹಿಳೆಯರಿಗೆ ಮಸೀದಿಯಲ್ಲಿನ ಪ್ರಾರ್ಥನೆ‌ ಬಗ್ಗೆ‌ ವಿವರಿಸಿದರು   

ಬಾಗೇಪಲ್ಲಿ: ಸೌಹಾರ್ದ, ಸಹಬಾಳ್ವೆ ಹಾಗೂ ಸಮಾನತೆಗಾಗಿ ಪಟ್ಟಣದ ಜಮಿಯತ್-ಎ- ಉಲಮಾ ಹಾಗೂ ಫಾರೂಕ್ ಮಸೀದಿ ಸಮಿತಿಯಿಂದ ಪಟ್ಟಣದ ನೇತಾಜಿ ವೃತ್ತದ ರಸ್ತೆಯಲ್ಲಿನ ಫಾರೂಕ್ ಮಸೀದಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಸೀದಿ ದರ್ಶನ ಹಿಂದೂ, ಮುಸ್ಲಿಂ, ಕ್ರೈಸ್ತರ ಸಂಗಮವಾಗಿತ್ತು.

ತಾಲ್ಲೂಕಿನ ಐತಿಹಾಸದಲ್ಲಿಯೇ ಮೊದಲ ಬಾರಿಗೆ ಎಲ್ಲ ಧರ್ಮದ ಪುರುಷರು, ಮಕ್ಕಳು, ಮಹಿಳೆಯರು ಮಸೀದಿಯ ಪ್ರಾರ್ಥನಾ ಆವರಣಕ್ಕೆ ಪ್ರವೇಶ ಮಾಡಿದರು. ಸರತಿ ಸಾಲಿನಲ್ಲಿ ನಿಂತು ಪ್ರಾರ್ಥನೆ ಮಾಡಿದರು.

ಮಸೀದಿ ದರ್ಶನದ ವಿಭಿನ್ನ ಕಾರ್ಯಕ್ರಮ ಮಾಡುವ ಮೂಲಕ ಪಟ್ಟಣದ ಫಾರೂಕ್ ಮಸೀದಿ ಸಮಿತಿಯವರು ಹಾಗೂ ವಿವಿಧ ಮಸೀದಿಗಳ ಧರ್ಮಗುರುಗಳು, ಮುಸ್ಲಿಮರು ಗಮನ ಸೆಳೆದರು.

ADVERTISEMENT

‘ಬಾಗೇಪಲ್ಲಿ ಇತಿಹಾಸದಲ್ಲಿ‌ ಮಸೀದಿಗೆ ಪ್ರವೇಶ ಮಾಡಲು ಅವಕಾಶ ಕಲ್ಪಿಸಿರುವುದು ಸಂತಸ ತಂದಿದೆ. ಪ್ರಸ್ತುತ ಸನ್ನಿವೇಶದಲ್ಲಿ ಒಂದು ಧರ್ಮದ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ಒಬ್ಬರು ಮಾಡಿದ ತಪ್ಪಿಗೆ ಇಡೀ ಸಮುದಾಯಕ್ಕೆ ಅವಮಾನ ಮಾಡುವುದು ಒಳ್ಳೆಯದಲ್ಲ. ದೇಶದಲ್ಲಿ ಎಲ್ಲ ಜನರು ಸೌಹಾರ್ದತೆ, ಸಹಬಾಳ್ವೆಯಿಂದ‌ ಇರಬೇಕು. ಇಡೀ ದೇಶದಲ್ಲಿ ಮಸೀದಿಗಳಿಗೆ ಮಹಿಳೆಯರು ಸೇರಿದಂತೆ‌‌ ಸರ್ವರನ್ನು ಪ್ರವೇಶ ಮಾಡಿಸಬೇಕು’ ಎಂದು ಶಿಕ್ಷಕಿ, ಚಿಂತಕಿ ಸಲ್ಮಾ ವಹೀದಾ ಹೇಳಿದರು.

ಫಾರೂಕ್ ಮಸೀದಿ ಅಧ್ಯಕ್ಷ ಮುನೀರ್ ಅಹಮದ್ ಮಾತನಾಡಿ, ‘ಮಸೀದಿಗಳಲ್ಲಿ ಕೇವಲ ಪ್ರಾರ್ಥನಾ ಮಂದಿರಗಳು ಎಂದು ತಿಳಿಯಬೇಕು. ಆದರೆ ಮಸೀದಿಗಳಲ್ಲಿ ಹಾಗೂ ಧರ್ಮಗುರುಗಳ‌ ಬಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವುದು ತಪ್ಪು’ ಎಂದರು.

ಪಟ್ಟಣದ ಮುಖ್ಯರಸ್ತೆಯಿಂದ ಫಾರೂಕ್ ಮಸೀದಿಯವರಿಗೂ ಹಾಗೂ ಮಸೀದಿಗೆ ಬಣ್ಣ ಬಣ್ಣದ‌ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಸಾಮೂಹಿಕವಾಗಿ ಭೋಜನ  ಮಾಡಲಾಯಿತು. ಸಾವಿರಾರು ಜನರು ಮಸೀದಿ ವೀಕ್ಷಣೆ ಮಾಡಿದರು. ಮಸೀದಿಯ ಹಾಗೂ ನಮಾಝ್ ಬಗ್ಗೆ ತಿಳಿಸಲಾಯಿತು.

ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಡಾ.ಅನಿಲ್ ಕುಮಾರ್, ಸರ್ಕಲ್‌‌ಇನ್‌ ಸ್ಪೆಕ್ಟರ್ ಪ್ರಶಾಂತ್ ವರ್ಣಿ, ಬಿ.ಅರ್.ನರಸಿಂಹನಾಯ್ಡು, ಎ.ಜಿ.ಸುಧಾಕರ್, ಎಂ.ಪಿ.ಮುನಿವೆಂಟಪ್ಪ, ಚನ್ನರಾಯಪ್ಪ, ಎ.ವಿ.ಪೂಜಪ್ಪ, ಪ್ರೊ.ಎನ್.ನಂಜುಂಡಪ್ಪ, ವೆಂಕಟಶಿವಾರೆಡ್ಡಿ, ಮಂಜುನಾಥರೆಡ್ಡಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸತ್ಯನಾರಾಯಣರೆಡ್ಡಿ, ಗಡಿದಂ ದೇವಾಲಯದ ಅರ್ಚಕ ಅಶ್ವತ್ಥನಾರಾಯಣ, ಫಾರೂಕ್ ಮಸೀದಿಯ ಉಪಾಧ್ಯಕ್ಷ ವಜೀರ್, ಮುಖಂಡ ಮುನೀರ್ ಅಹಮದ್, ಮಹಮದ್ ಎಸ್.ನೂರುಲ್ಲಾ, ಹೊಸ ಜೀವನ ನಿಲಯದ ಚರ್ಚ್‌ನ ಫಾಸ್ಟರ್ ಪ್ರಕಾಶ್, ಧರ್ಮಗುರು ಮೌಲಾನ ರಿಯಾಜುದ್ದೀನ್, ರಿಯಾಜ್, ಅಬ್ದುಲ್ ಕರೀಂ ಸಾಬ್, ಜಮಿಯತ್ - ಎ-ಉಲಮಾ ಸಂಘಟನೆಯ ಜುಬೇರ್ ಅಹಮದ್, ರಿಜ್ವಾನ್, ಹೈದರಾಲಿ, ಅಕ್ರಮ್, ಬಿಳ್ಳೂರು ಷಫಿ, ಮುತಾಹೀರ್, ಮುಜಾಹೀದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.