ಚಿಂತಾಮಣಿ: ‘ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಆಶಯದಂತೆ ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ದಲಿತರಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯ ದೊರಕಿಸಿಕೊಡಲು ಪ್ರಾಮಾಣಿಕವಾಗಿ ಹೋರಾಟ ಮಾಡಲಾಗುವುದು’ ಎಂದು ಡಾ.ಬಿ.ಆರ್. ಅಂಬೇಡ್ಕರ್ ಸ್ವಾಭಿಮಾನಿ ಸಮಿತಿಯ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಕೈವಾರ ಎಂ. ರಾಮಣ್ಣ ಹೇಳಿದರು.
ತಾಲ್ಲೂಕಿನ ಕೈವಾರದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ವಾಭಿಮಾನಿ ಸಮಿತಿಯ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಸಮಿತಿಯ ಪದಾಧಿಕಾರಿಗಳು ಕೇವಲ ಲೆಟರ್ಹೆಡ್ಗಾಗಿ ಪದಾಧಿಕಾರಿ ಗಳಾಗಬಾರದು. ಜನ ಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಬೇಕು. ಜನತೆಯ ವಿಶ್ವಾಸಗಳಿಸಬೇಕು. ಸಂಘದ ಅಭಿವೃದ್ಧಿ ಹಾಗೂ ಸಂಘಟನೆಯನ್ನು ಬಲಪಡಿಸಲು ಶ್ರಮಿಸಬೇಕು. ಹಕ್ಕುಗಳಿಗಾಗಿ ಹೋರಾಟ ನಡೆಸಬೇಕು ಎಂದು ಸಲಹೆ
ನೀಡಿದರು.
ಛಲವಾದಿ ಮಹಾಸಭಾದ ಸಂಘಟನಾ ಕಾರ್ಯದರ್ಶಿ ಗಣೇಶ್ ಮಾತನಾಡಿ, ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳು ಸ್ವಾರ್ಥಕ್ಕಾಗಿ ಸಂಘಟನೆಯನ್ನು ಬಳಸಿಕೊಳ್ಳಬಾರದು. ದಮನಿತರ ಪರವಾಗಿ ಹೋರಾಟ ಮಾಡಿ ಸರ್ಕಾರದಿಂದ ಸಿಗುವ ಸೌಲಭ್ಯ ಕೊಡಿಸಲು ಮುಂದಾಗಬೇಕು ಎಂದು
ಹೇಳಿದರು.
ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ಹಾಗೂ ಗುರುತಿನ ಚೀಟಿ ವಿತರಿಸಲಾಯಿತು.
ನೂತನ ಪದಾಧಿಕಾರಿಗಳು: ನರಸಿಂಹಮೂರ್ತಿ (ಗೌರವಾಧ್ಯಕ್ಷ), ಆಂಜಿನಪ್ಪ (ಪ್ರಧಾನ ಕಾರ್ಯದರ್ಶಿ), ಬೈರಪ್ಪ (ಕಾರ್ಯದರ್ಶಿ) ಲಕ್ಷ್ಮಿದೇವಮ್ಮ (ಮಹಿಳಾ ಘಟಕದ ಅಧ್ಯಕ್ಷೆ), ಸಿ. ಮಂಜುನಾಥ್ (ಖಜಾಂಚಿ), ದೇವರಾಜ್ (ಉಪಾಧ್ಯಕ್ಷ), ರಾಮಮೂರ್ತಿ (ಅಂಗವಿಕಲರ ಘಟಕದ ಕಾರ್ಯಾಧ್ಯಕ್ಷ), ಟಿ.ಕೆ. ಮಂಜುನಾಥ್ (ಅಧ್ಯಕ್ಷ), ಅಂಬರೀಶ್ (ಕಾರ್ಯದರ್ಶಿ), ಪಾರ್ವತಮ್ಮ (ಉಪಾಧ್ಯಕ್ಷೆ), ಮುನಿರಾಜು (ಸಂಘಟನಾ ಕಾರ್ಯದರ್ಶಿ), ನಾಗರಾಜ್ (ಕಾರ್ಯದರ್ಶಿ), ಷೇಕ್ ಶಫೀಉಲ್ಲಾ (ಸಹ ಕಾರ್ಯದರ್ಶಿ) ಹಾಗೂ ಪ್ರಶಾಂತ ಕುಮಾರ್ (ಸಂಚಾಲಕ) ಅವರು ಆಯ್ಕೆಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.