ಗೌರಿಬಿದನೂರು: ಕೃಷಿ ಎಂದರೆ ಪುರುಷರ ಕ್ಷೇತ್ರ ಎಂಬ ಸಾಮಾನ್ಯ ಗ್ರಹಿಕೆಯನ್ನು ಮೀರಿ ನಿಲ್ಲುವ ಸಾಧನೆ ಮಾಡಿ ತೋರಿಸಿದವರು ರೈತ ಮಹಿಳೆ ಸುಶೀಲಮ್ಮ.
ಗೆದರೆ ಗ್ರಾಮದ ಸುಶೀಲಮ್ಮ ತಮಗಿದ್ದ 3 ಎಕರೆ ಜಮೀನಿನ ಜತೆಗೆ 3 ಎಕರೆ ಜಮೀನನ್ನು ಇತ್ತೀಚೆಗೆ ಖರೀದಿಸಿ ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡಿದ್ದಾರೆ.
ಇವರ ಜಮೀನಿನಲ್ಲಿ ತೆಂಗು, ಅಡಿಕೆ, ಮಾವು, ಬಾಳೆ, ಕಿತ್ತಳೆ, ಹಲಸು, ನೇರಳೆ, ಹುಣಸೆ ಹೀಗೆ ಹಲವಾರು ರೀತಿಯ ತೋಟಗಾರಿಕಾ ಬೆಳೆಗಳನ್ನು ಬೆಳೆದಿದ್ದಾರೆ. ತರಕಾರಿ, ರಾಗಿ, ಬೆಳೆಗಳನ್ನೂ ಸಹ ಬೆಳೆಯುತ್ತಿದ್ದಾರೆ. ಟ್ರ್ಯಾಕ್ಟರ್, ಪವರ್ ಟಿಲ್ಲರ್ ಮೂಲಕ ತಮ್ಮ ಮಕ್ಕಳೊಂದಿಗೆ ತಾವೇ ಉಳುಮೆ ಮಾಡುವುದರಿಂದ ಕೂಲಿ ಆಳುಗಳ ಖರ್ಚನ್ನು ತಗ್ಗಿಸಿದ್ದಾರೆ.
ಹಸು, ಕುರಿ ಮತ್ತು ನಾಟಿ ಕೋಳಿಗಳನ್ನು ಸಾಕಾಣೆ ಮಾಡುತ್ತಿದ್ದಾರೆ. ತೋಟಗಾರಿಕೆ ಬೆಳೆಯಿಂದ ಹೆಚ್ಚು ಆದಾಯ ಗಳಿಸುತ್ತಿದ್ದಾರೆ. ಜಮೀನಿನಲ್ಲಿ ದೇಸಿ ಕೀಟನಾಶಕ ಬಳಕೆ ಮತ್ತು ಸಾವಯವ ಪದ್ಧತಿ ಮೂಲಕ ಬೇಸಾಯ ಮಾಡುತ್ತಿದ್ದಾರೆ. ಶೂನ್ಯ ಬಂಡವಾಳದಿಂದಲೇ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ.
ಕೃಷಿ ಎಂದರೆ ಹೊಲದಲ್ಲಿ ಹೊತ್ತು ಬಿತ್ತುವ ಕಾಯಕವಷ್ಟೇ ಅಲ್ಲ, ಕೋಳಿ ಸಾಕಣೆಯಿಂದ ಹಿಡಿದು ಹೈನುಗಾರಿಕೆವರೆಗೆ ತೊಡಗಿಸಿಕೊಂಡಿದ್ದಾರೆ.
ಎರಡು ಕೊಳವೆ ಬಾವಿ ಹೊಂದಿದ್ದು, ಹಸುಗಳಿಗೆ ಮೇವು ಸಹ ಬೆಳೆಯುತ್ತಿದ್ದಾರೆ. ಸಾವಯವ ಗೊಬ್ಬರ ತಯಾರಿಸಿಕೊಳ್ಳುವ ಮೂಲಕ ಕೃಷಿಭೂಮಿಯ ಫಲವತ್ತತೆಯನ್ನು ಸಂರಕ್ಷಿಸಿದ್ದಾರೆ.
ಕನಕಾಂಬರ ಕಾಕಡ ಗುಂಡು ಮಲ್ಲಿಗೆ ಸುಗಂಧ ರಾಜ ಹೂವಿನಿಂದ ನಿರಂತರ ಆದಾಯ ಬರುತ್ತಿದೆ. ಹಬ್ಬ ಹರಿದಿನಗಳಲ್ಲಿ ಹೂವಿಗೆ ಉತ್ತಮ ಬೆಳೆ ದೊರಕುತ್ತಿದೆಸುಶೀಲಮ್ಮ ಕೃಷಿಕ ಮಹಿಳೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.