ADVERTISEMENT

ಶಾಸಕರ ವಿರುದ್ಧ ಮುನಿಯಪ್ಪ ಆರೋಪ

ಸಾಲ ನೀಡುವ ಕಾರ್ಯಕ್ರಮವನ್ನು ರಾಜಕೀಯಕ್ಕೆ ಬಳಸಿಕೊಂಡ ಶಾಸಕ– ಆರೋಪ

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 8:21 IST
Last Updated 10 ಜುಲೈ 2020, 8:21 IST
ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಬಂಕ್ ಮುನಿಯಪ್ಪ ಮಾತನಾಡಿದರು
ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಬಂಕ್ ಮುನಿಯಪ್ಪ ಮಾತನಾಡಿದರು   

ಶಿಡ್ಲಘಟ್ಟ: ಸರ್ಕಾರಿ ಹಣದಲ್ಲಿ ಹೆಣ್ಣುಮಕ್ಕಳಿಗೆ ಸಾಲ ನೀಡುವ ಕಾರ್ಯಕ್ರಮದಲ್ಲಿ ತಮ್ಮ ಸ್ವಂತ ಹಣವನ್ನು ನೀಡಿದ ಹಾಗೆ ಶಾಸಕ ವಿ.ಮುನಿಯಪ್ಪ ಕೀಳು ರಾಜಕೀಯದ ಮಾತುಗಳನ್ನು ಆಡುವುದು ಅವರ ಘನತೆಗೆ ತಕ್ಕುದಲ್ಲ ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಬಂಕ್ ಮುನಿಯಪ್ಪ ತಿಳಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಡಿಸಿಸಿ ಬ್ಯಾಂಕ್ ಮೂಲಕ ಸ್ವಸಹಾಯಗುಂಪುಗಳಿಗೆ ಸಾಲ ನೀಡುವ ಕಾರ್ಯಕ್ರಮವನ್ನು ತಮ್ಮ ರಾಜಕೀಯ ಪ್ರಚಾರಕ್ಕೆ ಶಾಸಕ ವಿ.ಮುನಿಯಪ್ಪ ಬಳಸಿಕೊಂಡಿದ್ದಾರೆ. ಕೊರೊನಾ ಸಂಕಷ್ಟದಲ್ಲಿ ಕ್ಷೇತ್ರದ ಜನರಿಗೆ ಎಳ್ಳಷ್ಟೂ ನೆರವಾಗದೆ, ನಂಜು ಕಾರಿಕೊಳ್ಳುತ್ತಾ ತಮ್ಮ ವ್ಯಕ್ತಿತ್ವ ಅನಾವರಣ ಮಾಡುತ್ತಿದ್ದಾರೆ ಎಂದು ಹೇಳಿದರು.

ಜೆಡಿಎಸ್ ಮುಖಂಡ ಬಿ.ಎನ್.ರವಿಕುಮಾರ್ ಅವರ ನೇತೃತ್ವದಲ್ಲಿ ಈ ಹಿಂದೆ ಓಂ ಶಕ್ತಿಗೆ ಕ್ಷೇತ್ರದ ಹೆಣ್ಣುಮಕ್ಕಳನ್ನು ಪ್ರವಾಸಕ್ಕೆ ಕಳುಹಿಸಲಾಗಿತ್ತು. ಅದನ್ನು ಈಗ ಲೇವಡಿ ಮಾಡುವ ಮೂಲಕ ಶಾಸಕರು ತಮ್ಮ ಅಸಹಾಯಕತೆಯ ಪ್ರದರ್ಶನ ಮಾಡುತ್ತಿದ್ದಾರೆ. ಹಣವಿರುವವರೆಲ್ಲಾ ಸಮಾಜ ಸೇವಕರಾಗುವುದಿಲ್ಲ. ಸಮಾಜದಿಂದ ಕೇವಲ ಗಳಿಸುತ್ತಾ ಇರುವ ಶಾಸಕರು ಅದನ್ನು ಅರ್ಥಮಾಡಿಕೊಳ್ಳಬೇಕು. ಶಾಸಕರಿಗೆ ನಮ್ಮ ನಾಯಕ ಬಿ.ಎನ್.ರವಿಕುಮಾರ್ ಅವರ ಬಗ್ಗೆ ಮಾತನಾಡಲು ನೈತಿಕವಾಗಿ ಹಕ್ಕಿಲ್ಲ. ಶಾಸಕರ ಕೀಳು ರಾಜಕೀಯದ ಮಾತುಗಳನ್ನು ಖಂಡಿಸುತ್ತೇವೆ ಎಂದರು.

ADVERTISEMENT

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜಶೇಖರ್ ಮಾತನಾಡಿ, ಕಮಿಷನ್ ಕೊಡದ ಹೊರತು ಯಾವುದೇ ಕಾಮಗಾರಿಗಳು ನಡೆಯುವಂತಿಲ್ಲ ಎಂದು ಕಾಂಗ್ರೆಸ್ ಪಕ್ಷದ ಮುಖಂಡರೇ ದೂರುತ್ತಿದ್ದಾರೆ.
ಕಮಿಷನ್ ಕೊಟ್ಟು ಚೆಕ್ ಡ್ಯಾಂ ಕಾಮಗಾರಿ ಮಾಡಿಸಿ ಲಕ್ಷ ರುಪಾಯಿಗಳ ಕೆಲಸವೂ ನಡೆಸದೇ ಹಣ ಲೂಟಿ ಮಾಡುತ್ತಿದ್ದಾರೆ. ಇದು ಈ ಶಾಸಕರ ಸಾಧನೆ ಎಂದು
ಆರೋಪಿಸಿದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನಾರಾಯಣಸ್ವಾಮಿ, ನಿರ್ದೇಶಕ ಸಿ.ನಾರಾಯಣಸ್ವಾಮಿ, ಮುಂಖಡ ತಾದೂರು ರಘು, ಚೀಮನಹಳ್ಳಿ ಗೋಪಾಲ್, ಗಂಜಿಗುಂಟೆ ನರಸಿಂಹಮೂರ್ತಿ, ಚಂದ್ರಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.