ADVERTISEMENT

ಶಿಡ್ಲಘಟ್ಟ | ಐ.ಬಿಯಲ್ಲಿ ನಿಂತ ನಗರಸಭೆ ವಾಹನಗಳು: ಸಾರ್ವಜನಿಕರ ಆಕ್ರೋಶ

ಐದು ತಿಂಗಳಿನಿಂದ ನಿರುಪಯುಕ್ತವಾದ ವಾಹನಗಳು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 2:14 IST
Last Updated 19 ನವೆಂಬರ್ 2025, 2:14 IST
ಶಿಡ್ಲಘಟ್ಟದ ಪ್ರವಾಸಿ ಮಂದಿರದ ಆವರಣದಲ್ಲಿ ನಿಂತಿರುವ ನಗರಸಭೆ ವಾಹನಗಳು
ಶಿಡ್ಲಘಟ್ಟದ ಪ್ರವಾಸಿ ಮಂದಿರದ ಆವರಣದಲ್ಲಿ ನಿಂತಿರುವ ನಗರಸಭೆ ವಾಹನಗಳು   

ಶಿಡ್ಲಘಟ್ಟ: ನಗರ ಶುಚಿತ್ವಕ್ಕಾಗಿ ಸಾರ್ವಜನಿಕರ ತೆರಿಗೆ ಹಣ ವೆಚ್ಚ ಮಾಡಿ ನಗರಸಭೆಗೆ ಆಟೊ ಟಿಪ್ಪರ್ ವಾಹನಗಳು, ಎರಡು ಟ್ರ್ಯಾಕ್ಟರ್‌ಗಳು, ಕಾಂಪ್ಯಾಕ್ಟರ್ ವಾಹನ ಮತ್ತು ಸೊಳ್ಳೆ ನಿಯಂತ್ರಣಕ್ಕಾಗಿ ಫಾಗಿಂಗ್ ಯಂತ್ರಗಳನ್ನು ನೀಡಲಾಗಿದೆ. ಆದರೆ, ನಗರಸಭೆಯ ಈ ವಾಹನಗಳು ಮಾತ್ರ ನಗರದ ಸ್ವಚ್ಛತೆಗೆ ನಿಯೋಜನೆಯಾಗುವ ಬದಲಿಗೆ ಕಳೆದ ಐದು ತಿಂಗಳಿನಿಂದ ನಗರದ ಪ್ರವಾಸಿ ಮಂದಿರ ಆವರಣದಲ್ಲಿ ಬೀಡುಬಿಟ್ಟಿವೆ.

15ನೇ ಹಣಕಾಸು ಯೋಜನೆಯ ಉಳಿಕೆ ಹಣದ ಪೈಕಿ ₹97 ಲಕ್ಷ ವೆಚ್ಚದಲ್ಲಿ ಘನತ್ಯಾಜ್ಯ ಸಂಗ್ರಹಣೆಗೆ 10 ಆಟೊ ಟಿಪ್ಪರ್ ವಾಹನಗಳು, ₹18 ಲಕ್ಷ ವೆಚ್ಚದಲ್ಲಿ ಎರಡು ಟ್ರ್ಯಾಕ್ಟರ್‌ಗಳು, ₹42 ಲಕ್ಷ ವೆಚ್ಚದಲ್ಲಿ ಕಾಂಪ್ಯಾಕ್ಟರ್ ವಾಹನ ಮತ್ತು ಸೊಳ್ಳೆಗಳ ನಿಯಂತ್ರಣಕ್ಕಾಗಿ ₹10 ಲಕ್ಷ ವೆಚ್ಚದಲ್ಲಿ ಫಾಗಿಂಗ್ ಯಂತ್ರಗಳನ್ನು ನೀಡಲಾಗಿದೆ. ಇವುಗಳಿಗೆ ಇದೇ ವರ್ಷದ ಜೂನ್ 6ರಂದು ಶಾಸಕ ಬಿ.ಎನ್. ರವಿಕುಮಾರ್ ಅವರು ಅಧಿಕೃತ ಚಾಲನೆ ನೀಡಿದ್ದಾರೆ. 

ಆದರೆ ಐದು ತಿಂಗಳುಗಳಿಂದ ಈ ವಾಹನಗಳು ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಗೊಂಬೆಗಳಂತೆ ನಿಂತಿವೆ. ಇದರಿಂದ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದರೂ, ಇವುಗಳ ಖರೀದಿ ಉದ್ದೇಶ ಈಡೇರದಂತಾಗಿದೆ. ಸಾರ್ವಜನಿಕರು ನಗರಸಭೆಯ ಕಾರ್ಯವೈಖರಿಯ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. 

ADVERTISEMENT

ಸಾಮಾಜಿಕ ಕಾರ್ಯಕರ್ತ ಮತ್ತು ರೈತ ಮುಖಂಡ ಜೆ.ಎಸ್.ವೆಂಕಟಸ್ವಾಮಿ ಮಾತನಾಡಿ, ‘ಶಿಡ್ಲಘಟ್ಟ ನಗರ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವುದು ನಗರಸಭೆ ಅಧಿಕಾರಿಗಳ ಜವಾಬ್ದಾರಿ. ನಗರ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗಾಗಿ ವಾಹನಗಳ ಖರೀದಿ ಮಾಡಿರುವ ಹೊರತಾಗಿಯೂ, ನಗರದ ಸ್ವಚ್ಛತೆಗೆ ಆ ವಾಹನಗಳನ್ನು ತೊಡಗಿಸುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

‘ಇದರಿಂದ ಸಾರ್ವಜನಿಕರ ತೆರಿಗೆ ಹಣದಿಂದ ಖರೀದಿ ಮಾಡಲಾಗಿರುವ ವಾಹನಗಳು ಪ್ರವಾಸಿ ಮಂದಿರದ ಆವರಣದಲ್ಲಿ ಬಿಸಿಲು, ಮಳೆಗೆ ತುಕ್ಕು ಹಿಡಿಯುವಂತಾಗಿದೆ. ಇದು ಅಧಿಕಾರಿಗಳ ಬೇಜವಾಬ್ದಾರಿಯಾಗಿದೆ’ ಎಂದು ದೂರಿದರು. 

ಕಸ ವಿಲೇವಾರಿ ವಾಹನಗಳಿಗೆ ಚಾಲಕರ ಕೊರತೆ ಇದೆ. ಜೊತೆಗೆ ಅವರಿಗೆ ಸಂಬಳ ನೀಡಲು ಹಣದ ಕೊರತೆಯೂ ಇದೆ. ಹೊಸ ಚಾಲಕರನ್ನು ನೇಮಕ ಮಾಡಿಕೊಳ್ಳಲು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ
ಅಮೃತ, ನಗರಸಭೆ ಪೌರಾಯುಕ್ತೆ

‘ಚಾಲಕರು ಇಲ್ಲ ಎಂಬ ಸಬೂಬು’

ಸಾರ್ವಜನಿಕರ ಕೋಟ್ಯಂತರ ರೂಪಾಯಿ ವಿನಿಯೋಗ ಮಾಡಿಕೊಂಡ ಹೊರತಾಗಿಯೂ ನಗರ ಸ್ವಚ್ಛತೆ ಮಾಡದ ಬಗ್ಗೆ ನಗರಸಭೆ ಆಯುಕ್ತರಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದ್ದೇನೆ. ಇದಕ್ಕೆ ವಾಹನಗಳನ್ನು ಓಡಿಸಲು ಚಾಲಕರು ಇಲ್ಲ. ಈ ಕುರಿತು ಮೇಲಿನ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂಬ ಸಬೂಬು ಹೇಳುತ್ತಾರೆ.  ನಗರ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಕಸ ವಿಲೇವಾರಿ ಆಗುತ್ತಿಲ್ಲ. ಕಂದಾಯ ವಸೂಲಾತಿಯಲ್ಲಿ ತಾರತಮ್ಯ ಅನುಸರಿಸಲಾಗುತ್ತಿದೆ. ರೈಲ್ವೆ ನಿಲ್ದಾಣದ ಕೆಳ ಭಾಗದಲ್ಲಿರುವ ವಾರ್ಡ್‌ಗಳಲ್ಲಿ ಸುಮಾರು ಶೇ 80ರಷ್ಟು ಕಂದಾಯ ವಸೂಲಿ ಆಗುತ್ತಿದ್ದು ಮೇಲ್ಭಾಗದಲ್ಲಿ ಕಂದಾಯ ವಸೂಲಾತಿಯೇ ಆಗುತ್ತಿಲ್ಲ.  ಜೆ.ಎಸ್.ವೆಂಕಟಸ್ವಾಮಿ ರೈತ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.