ADVERTISEMENT

ಗುಡಿಬಂಡೆ: ಕೆರೆಯಲ್ಲಿ ಹೂತಿಟ್ಟಿದ್ದ ಶವ ಪತ್ತೆ

ವಿದ್ಯುತ್ ದುರಸ್ತಿ ಕಾಮಗಾರಿ ವೇಳೆ ಮೃತಪಟ್ಟಿದ್ದ ಕಾರ್ಮಿಕ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 6:32 IST
Last Updated 12 ಸೆಪ್ಟೆಂಬರ್ 2025, 6:32 IST
ಕೆರೆಯಲ್ಲಿ ಹೂತಿದ್ದ ವಿದ್ಯುತ್ ಕಾರ್ಮಿಕನ ಶವ ಹೊರತೆಗೆದ ಪೊಲೀಸರು
ಕೆರೆಯಲ್ಲಿ ಹೂತಿದ್ದ ವಿದ್ಯುತ್ ಕಾರ್ಮಿಕನ ಶವ ಹೊರತೆಗೆದ ಪೊಲೀಸರು   

ಗುಡಿಬಂಡೆ: ತಾಲ್ಲೂಕಿನ ಮೇಡಿಮಾಕಲಹಳ್ಳಿ ಕ್ರಾಸ್ ಬಳಿಯ ಕೋಳಿಫಾರ್ಮ್‌ನಲ್ಲಿ ವಿದ್ಯುಕ್ ಕೆಲಸ ಮಾಡುವಾಗ ವಿದ್ಯುತ್ ತಂತಿ ತಗುಲಿ ಮೃತಪಟ್ಟ ವ್ಯಕ್ತಿಯ ಶವವನ್ನು ಯಾರಿಗೂ ತಿಳಿಯದಂತೆ ಕೆರೆಯಲ್ಲಿ ಹೂತು ಹಾಕಲಾಗಿತ್ತು. ಆ ಶವವನ್ನು ಪೊಲೀಸರು ಮತ್ತು ಕಂದಾಯ ಅಧಿಕಾರಿಗಳ ಸಮ್ಮುಖದಲ್ಲಿ ಗುರುವಾರ ಕೆರೆಯಿಂದ ಹೊರತೆಗೆಯಲಾಗಿದೆ.

ಮೃತನನ್ನು ಬೀಚಗಾನಹಳ್ಳಿ ಗ್ರಾಮದ ರವಿ ಎಂದು ಗುರುತಿಸಲಾಗಿದೆ. 

ಮೇಡಿಮಾಕಲಹಳ್ಳಿ ಕ್ರಾಸ್ ಬಳಿ ಇರುವ ಕೋಳಿ ಫಾರ್ಮ್‌ನಲ್ಲಿ ವಿದ್ಯುತ್ ಕಾಮಗಾರಿ ಮಾಡಲು ಬೀಚಗಾನಹಳ್ಳಿ ಗ್ರಾಮದ ಲೈನ್‌ಮನ್ ಚಂದ್ರಶೇಖರ್ ಎಂಬುವರು ರವಿ ಅವರನ್ನು ಇತ್ತೀಚೆಗೆ ಕರೆದೊಯ್ದಿದ್ದರು. ಈ ವೇಳೆ ರವಿ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದು, ಅವರ ಶವವನ್ನು ಬಂದಾರ್ಲಹಳ್ಳಿ ಕೆರೆಯಲ್ಲಿ ಹೂತುಹಾಕಿ, ಚಂದ್ರಶೇಖರ್ ಪರಾರಿಯಾಗಿದ್ದ. ಮತ್ತೊಂದೆಡೆ ರವಿ ಕಾಣೆಯಾಗಿದ್ದಾನೆ ಎಂದು ಅವರ ಕುಟುಂಬಸ್ಥರು ಗುಡಿಬಂಡೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ತನಿಖೆಗೆಳಿದ ಪೊಲೀಸರು, ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಚಂದ್ರಶೇಖರ್‌ನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದು, ರವಿಯ ಶವವನ್ನು ತಾನೇ ಕೆರೆಯಲ್ಲಿ ಹೂತಿಟ್ಟಿದ್ದಾಗಿ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ADVERTISEMENT

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಡಿವೈಎಸ್‌ಪಿ ಶಿವಕುಮಾರ್, ತಹಶೀಲ್ದಾರ್ ಸಿಗ್ಬತ್‌ ಉಲ್ಲಾ, ಗುಡಿಬಂಡೆ ಸಬ್ ಇನ್‌ಸ್ಪೆಕ್ಟರ್ ಗಣೇಶ್, ವಿಧಿ ವಿಜ್ಞಾನ ತಂತ್ರಜ್ಞರು, ಜಿಲ್ಲಾ ಸರ್ಜನ್ ಸೇರಿದಂತೆ ಇತರರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.

ರವಿ ಅವರ ಸಾವಿನ ಕುರಿತು ಪೋಷಕರು ಅನುಮಾನ ವ್ಯಕ್ತಪಡಿಸಿದ್ದು, ಕೇವಲ ಒಬ್ಬರಿಂದ ಶವವನ್ನು ಹೂತಿಡಲು ಸಾಧ್ಯವಿಲ್ಲ. ಈ ಕೃತ್ಯದಲ್ಲಿ ಇತರರು ಭಾಗಿಯಾಗಿರುವ ಸಾಧ್ಯತೆ ಇದೆ. ಈ ಸಂಬಂಧ ಪೊಲೀಸರು ಸಮದ್ರ ತನಿಖೆ ಕೈಗೊಂಡು, ತಪ್ಪಿತಸ್ಥರೆಲ್ಲರಿಗೂ ಶಿಕ್ಷೆ ಕೊಡಿಸಬೇಕು. ಈ ಮೂಲಕ ತಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮೃತನ ಕುಟುಂಬಸ್ಥರು ಒತ್ತಾಯಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.