ADVERTISEMENT

ಬಾಗೇಪಲ್ಲಿ: ಯಂತ್ರಗಳಿಂದ ನರೇಗಾ ಕಾಮಗಾರಿ; ಆರೋಪ

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 4:38 IST
Last Updated 26 ಜುಲೈ 2021, 4:38 IST
ಬಾಗೇಪಲ್ಲಿ ತಾಲ್ಲೂಕಿನ ಯರಯ್ಯಗಾರಿಪಲ್ಲಿ ಗ್ರಾಮದಲ್ಲಿ ನರೇಗಾ ಯೋಜನೆ ಕೆಲಸವನ್ನು ಜೆಸಿಬಿ ಯಂತ್ರಗಳಿಂದ ಮಾಡಿರುವುದು
ಬಾಗೇಪಲ್ಲಿ ತಾಲ್ಲೂಕಿನ ಯರಯ್ಯಗಾರಿಪಲ್ಲಿ ಗ್ರಾಮದಲ್ಲಿ ನರೇಗಾ ಯೋಜನೆ ಕೆಲಸವನ್ನು ಜೆಸಿಬಿ ಯಂತ್ರಗಳಿಂದ ಮಾಡಿರುವುದು   

ಬಾಗೇಪಲ್ಲಿ: ತಾಲ್ಲೂಕಿನ ಪಾಳ್ಯಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯರಯ್ಯಗಾರಪಲ್ಲಿ ಗ್ರಾಮದಲ್ಲಿ‌ ನರೇಗಾ ಯೋಜನೆಯಲ್ಲಿ ಕಾಲುವೆ ಕಾಮಗಾರಿಯನ್ನು ಜೆಸಿಬಿ ಯಂತ್ರಗಳಿಂದ ಮಾಡಲಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ಮುಖಂಡರು ಆರೋಪಿಸಿದರು.

ಲಾಕ್‌ಡೌನ್‌ನಿಂದ ಕೃಷಿ ಕೂಲಿಕಾರರಿಗೆ ಕೂಲಿ ಕೆಲಸ ಇಲ್ಲ. ಕೆಲಸ ನೀಡಿ ಕೂಲಿ ಹಣ ನೀಡಬೇಕಾದ ಪಾಳ್ಯಕೆರೆ ಗ್ರಾಮ ಪಂಚಾಯಿತಿ ಪಿಡಿಒ, ಡೇಟಾ ಆಪರೇಟರ್, ಬಿಲ್ ಕಲೆಕ್ಟರ್, ಗುತ್ತಿಗೆದಾರರು ಶಾಮೀಲಾಗಿ ರಾತ್ರೋರಾತ್ರಿ ಜೆಸಿಬಿ ಯಂತ್ರಗಳಿಂದ ಕಾಲುವೆ ಕೆಲಸ ಮಾಡಿಸಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ನರಸಿಂಹಪ್ಪ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನಲ್ಲಿ ನರೇಗಾ ಯೋಜನೆಯಡಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯಿತಿಯ ಸಿಇಒಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಕೂಲಿಕಾರರಿಂದ ಮಾಡಿಸಬೇಕಾದ ಕಾಮಗಾರಿಗಳನ್ನು ಜೆಸಿಬಿ ಯಂತ್ರಗಳ ಮೂಲಕ ನಡೆಸಲಾಗುತ್ತಿದೆ. ಕೂಲಿಕಾರರಿಗೆ ವರದಾನವಾಗಬೇಕಿದ್ದ ನರೇಗಾ ಯೋಜನೆಯು ಭ್ರಷ್ಟರಿಂದಾಗಿ ಕೂಲಿಕಾರರ ಹೊಟ್ಟೆ ಮೇಲೆ ಹೊಡೆದಂತಾಗಿದೆ ಎಂದು ಗೊಲ್ಲಪಲ್ಲಿ ಮುಖಂಡ ಮಂಜುನಾಥ ಆರೋಪಿಸಿದರು.

ಹಸಿವು ನೀಗಿಸಬೇಕಾದ ನರೇಗಾ ಯೋಜನೆ ಭ್ರಷ್ಟರಿಂದಾಗಿ ಗುತ್ತಿಗೆದಾರರಿಗೆ ವರದಾನವಾಗಿ ಪರಿಣಮಿಸಿದೆ. ಅಕ್ರಮಗಳನ್ನು ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿ ರಚಿಸಬೇಕು ಎಂದು ಮುಖಂಡರು ಒತ್ತಾಯಿಸಿದರು.

ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಎಂ.ವಿ ಲಕ್ಷ್ಮಿನರಸಿಂಹಪ್ಪ, ನರಸಿಂಹಪ್ಪ, ಜಯಂತ್, ಹೊಸಹುಡ್ಯ ಗೋಪಿ, ಕೋಟಪ್ಪ, ಎಲ್.ಎನ್.ನರಸಿಂಹಯ್ಯ, ಡಿಕೆ ರಮೇಶ್, ರವಿಕುಮಾರ್, ಬತ್ತಲವಾರಪಲ್ಲಿ ನರಸಿಂಹಪ್ಪ, ಗೊಲ್ಲಪಲ್ಲಿ ಮಂಜುನಾಥ, ಡಿವಿ ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.