ADVERTISEMENT

ಗೌರಿಬಿದನೂರಿನ ಬಂಡಿರಾಮನಹಳ್ಳಿ ಅಲೆಮಾರಿಗಳಿಗೆ ದೊರಕಿತು ಸೂರು

ಬುಡಕಟ್ಟು ಅಲೆಮಾರಿ ಜನಾಂಗಕ್ಕೆ ತಾತ್ಕಾಲಿಕ ಮನೆ ನಿರ್ಮಿಸಿಕೊಟ್ಟ ‘ನಿವಾಸ್’ ಸಂಸ್ಥೆ

ಎ.ಎಸ್.ಜಗನ್ನಾಥ್
Published 21 ಜೂನ್ 2020, 19:31 IST
Last Updated 21 ಜೂನ್ 2020, 19:31 IST
ಗೌರಿಬಿದನೂರು ತಾಲ್ಲೂಕಿನ ಬಂಡಿರಾಮನಹಳ್ಳಿಯ ಬೆಟ್ಟದ ತಪ್ಪಲಿನಲ್ಲಿ‌ ನಿರ್ಮಾಣ ಮಾಡಿರುವ ಮನೆಗಳನ್ನು ಬುಡಕಟ್ಟು ಜನತೆಗೆ ನೀಡಲಾಯಿತು
ಗೌರಿಬಿದನೂರು ತಾಲ್ಲೂಕಿನ ಬಂಡಿರಾಮನಹಳ್ಳಿಯ ಬೆಟ್ಟದ ತಪ್ಪಲಿನಲ್ಲಿ‌ ನಿರ್ಮಾಣ ಮಾಡಿರುವ ಮನೆಗಳನ್ನು ಬುಡಕಟ್ಟು ಜನತೆಗೆ ನೀಡಲಾಯಿತು   

ಗೌರಿಬಿದನೂರು: ಊರೂರು ಸುತ್ತುತ್ತಾ ಕೂಲಿ‌ ಮಾಡಿಕೊಂಡು ಬದುಕಿನ ಬಂಡಿ ಸಾಗಿಸುತ್ತ ಬೆಟ್ಟದ ತಪ್ಪಲಿನಲ್ಲಿ ದಶಕಗಳಿಂದ ಅರೆಬರೆ ಗುಡಿಸಲನ್ನು ನಿರ್ಮಿಸಿಕೊಂಡು ಜೀವಿಸುತ್ತಿದ್ದ ಬುಡಕಟ್ಟು ಅಲೆಮಾರಿಗಳಿಗೆ ಸೂರು ನೀಡಲು ಬೆಂಗಳೂರಿನ ‘ನಿವಾಸ್’ ಸ್ವಯಂ ಸೇವ ಸಂಸ್ಥೆ ಮುಂದಾಗಿದೆ.

ತಾಲ್ಲೂಕಿನ ಮಂಚೇನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಬಂಡಿರಾಮನಹಳ್ಳಿ ಗ್ರಾಮದ ಹೊರ ವಲಯದಲ್ಲಿರುವ ಕೋಡಿ ಬ್ರಹ್ಮ ದೇವರ ಬೆಟ್ಟದ ತಪ್ಪಲಿನಲ್ಲಿ ಸುಮಾರು ಒಂದೂವರೆ ದಶಕಕ್ಕೂ ಅಧಿಕ ಕಾಲದಿಂದಲೂ ಅಲೆಮಾರಿಗಳು ಬದುಕುತ್ತಿದ್ದಾರೆ. ಸುಮಾರು 83 ಮಂದಿ ಯುಳ್ಳ 19 ಕುಟುಂಬಗಳು ಇಲ್ಲೇ ನೆಲೆಸಿವೆ.

ನೆರೆಯ ಗ್ರಾಮಗಳಲ್ಲಿ ಕೂಲಿ ಕೆಲಸ, ಜೇನು ಬಿಡಿಸುವುದು, ಕರಕುಶಲ ವಸ್ತುಗಳ ತಯಾರಿಕೆ, ಗಾರೆ ಕೆಲಸಗಳನ್ನು ಮಾಡಿ ಜೀವನ ಸಾಗಿಸುತ್ತಿದ್ದಾರೆ. ಬಹುತೇಕರು ನೆರೆಯ ಆಂಧ್ರಪ್ರದೇಶ, ತಮಿಳುನಾಡು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಕೂಲಿಯನ್ನರಸಿ‌ ಬಂದಿದ್ದಾರೆ.

ADVERTISEMENT

ಅವರ ಬದುಕಿನ ಬವಣೆ ಅರಿತ ಬೆಂಗಳೂರಿನ ‌‘ನಿವಾಸ್’ ಸ್ವಯಂ ಸೇವಾ ಸಂಸ್ಥೆಯ ಪದಾಧಿಕಾರಿಗಳು ಸ್ಥಳೀಯ ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ ಹಾಗೂ ಮುಖಂಡರ ಸಹಕಾರದೊಂದಿಗೆ ಬೆಟ್ಟದ ತಪ್ಪಲಿನಲ್ಲಿಯೇ ಮಿತವ್ಯಯದಲ್ಲಿ ಆಧುನಿಕ ಶೈಲಿಯ 5 ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ.

ಜಿಲ್ಲಾಧಿಕಾರಿ ಗುರುತಿಸಿದ್ದು: ಬುಡಕಟ್ಟು ಅಲೆಮಾರಿ ಜನಾಂಗದವರು ಜೀವಿಸುತ್ತಿರುವ ಬೆಟ್ಟದ ತಪ್ಪಲಿನ ಈ ಪ್ರದೇಶದಲ್ಲಿ ಕಳೆದ ಒಂದೂವರೆ ವರ್ಷದ ಹಿಂದೆ ಗುಡಿಸಲು‌ ಮನೆಯಲ್ಲಿ ಮಗುವೊಂದು ಸಜೀವವಾಗಿ ದಹನವಾದ ಘಟನೆ ನಡೆಯಿತು. ಈ‌ ವೇಳೆ ಅಂದಿನ ಜಿಲ್ಲಾಧಿಕಾರಿ ಅನಿರುದ್ ಶ್ರವಣ್ ಖುದ್ಧು ಸ್ಥಳಕ್ಕೆ ಭೇಟಿ‌ ನೀಡಿ‌ ಇಲ್ಲಿನ ಬುಡಕಟ್ಟು ಜನರ ಬದುಕಿನ ಬವಣೆಯನ್ನು ಪರಿಶೀಲಿಸಿದರು.

ಕೂಡಲೇ ಅವರ ಆಶ್ರಯಕ್ಕಾಗಿ 1.20 ಕುಂಟೆ ಭೂಮಿಯನ್ನು ಮೀಸಲಿಟ್ಟು ಸರ್ವೆ ಮಾಡಿಸಲಾಗಿತ್ತು. ಇಲ್ಲಿನ ಕುಟುಂಬಗಳಿಗೆ ಪಡಿತರ ಚೀಟಿ, ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು‌ ಒದಗಿಸುವಂತೆ ತಿಳಿಸಲಾಗಿತ್ತು. ಸ್ಥಳೀಯ ‌ಗ್ರಾಮ ಪಂಚಾಯಿತಿ ಕುಡಿಯುವ ನೀರು ಮತ್ತು‌ ವಿದ್ಯುತ್ ‌ಸೌಲಭ್ಯ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.