ಚಿಕ್ಕಬಳ್ಳಾಪುರ: ‘ಕನ್ನಡ ದಿನ ಪತ್ರಿಕೆಗಳನ್ನು ಓದುವ ಹವ್ಯಾಸ ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು. ಇದರಿಂದ ಜ್ಞಾನ ವೃದ್ಧಿಯಾಗುತ್ತದೆ’ ಎಂದು ಚಿಂತಾಮಣಿಯ ಶಿಡ್ಲಘಟ್ಟ ರಸ್ತೆಯ ತಿಮ್ಮಸಂದ್ರದಲ್ಲಿರುವ ದೊಡ್ಡನಾರಾಯಣ ರೆಡ್ಡಿ ಪೆಟ್ರೋಲ್ ಬಂಕ್ ಮಾಲೀಕ ದೊಡ್ಡನಾರಾಯಣ ರೆಡ್ಡಿ ಅಭಿಪ್ರಾಯಪಟ್ಟರು.
ಶನಿವಾರ ಬಂಕ್ನಲ್ಲಿ ಮೊದಲ 100 ಗ್ರಾಹಕರಿಗೆ ಉಚಿತವಾಗಿ ‘ಪ್ರಜಾವಾಣಿ’ ಪತ್ರಿಕೆಯನ್ನು ವಿತರಿಸಿ ಅವರು ಮಾತನಾಡಿದರು.
‘ಸುಮಾರು 70 ವರ್ಷಗಳಿಂದ ಪ್ರಚಲಿತ ವಿದ್ಯಮಾನಗಳ ಬಗ್ಗೆ ಕಾಲಕ್ಕೆ ತಕ್ಕಂತೆ ಓದುಗರಿಗೆ ಸುದ್ದಿಯನ್ನು ಹಂಚುತ್ತಿರುವ ಪ್ರಜಾವಾಣಿ ಅಭಿನಂದನಾರ್ಹವಾದ ಕೆಲಸ ಮಾಡುತ್ತಿದೆ. ಮುಂಚೆಯಿಂದಲೂ ಬಂಕ್ನಲ್ಲಿ ಉಚಿತವಾಗಿ ಪತ್ರಿಕೆಯನ್ನು ಹಂಚುವ ಉದ್ದೇಶವಿತ್ತು. ಅದರಲ್ಲೂ ಪ್ರಜಾವಾಣಿಯನ್ನೇ ಹಂಚಬೇಕು ಎನ್ನುವ ಆಶಯ ನನ್ನದಾಗಿತ್ತು’ ಎಂದು ಹೇಳಿದರು.
‘ಬಂಕ್ಗಳಲ್ಲಿ ಪತ್ರಿಕೆ ಹಂಚುವುದರಿಂದ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಜನರಿಗೆ ಸುದ್ದಿ ಮುಟ್ಟುವ ಮೂಲಕ ಅವರೂ ಪ್ರಚಲಿತ ವಿದ್ಯಮಾನ ತಿಳಿಯಲು, ಜ್ಞಾನ ವೃದ್ಧಿಗೆ ಸಹಕಾರಿಯಾಗುತ್ತದೆ. ಪ್ರತಿಯೊಬ್ಬರೂ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು’ ಎಂದರು.
‘ಕಳೆದ ಕೆಲ ತಿಂಗಳಿಂದ ಬಂಕ್ನಲ್ಲಿ ‘ಪ್ರಜಾವಾಣಿ’ ಪತ್ರಿಕೆ ಉಚಿತವಾಗಿ ವಿತರಿಸಲು ಆರಂಭಿಸಿದ್ದು ಇದರಿಂದಾಗಿ ಪ್ರಚಲಿತ ವಿದ್ಯಮಾನಗಳನ್ನು ಅರಿಯುವ ಆಸಕ್ತಿಯುಳ್ಳವರು ನಿತ್ಯ ಬಂಕ್ಗೆ ಬರುವಂತಾಗಿದೆ. ಇಂತಹ ಕಾರ್ಯಗಳು ಹೆಚ್ಚು ನಡೆಯಲಿ. ಬೇರೆ ಬೇರೆ ಕಡೆಗೂ ಪತ್ರಿಕೆಯನ್ನು ಗ್ರಾಹಕರಿಗೆ ವಿತರಿಸುವ ಪ್ರಕ್ರಿಯೆ ನಡೆಯಬೇಕು’ ಎಂದು ಆಶಯ ವ್ಯಕ್ತಪಡಿಸಿದರು.
ಬಂಕ್ ಸಿಬ್ಬಂದಿ ತುಳಸಿರಾಮ್ ನರಸಿಂಹಮೂರ್ತಿ, ಮಂಜುನಾಥ್, ನರೇಂದ್ರ ರೆಡ್ಡಿ, ಜಗನ್ನಾಥ್, ದೇವರಾಜ್, ಅರುಣ್, ವಿನೋದ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.