ADVERTISEMENT

ಚನ್ನಪಟ್ಟಣದವರೆಗೆ ಪ್ಯಾಸೆಂಜರ್ ರೈಲು ಸಂಚಾರ ವಿಸ್ತರಿಸಲು ಪ್ರಯಾಣಿಕರ ಮನವಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 6:57 IST
Last Updated 5 ಜನವರಿ 2021, 6:57 IST
ಚಿಂತಾಮಣಿಗೆ ಬಂದ ಪ್ಯಾಸೆಂಜರ್ ರೈಲು
ಚಿಂತಾಮಣಿಗೆ ಬಂದ ಪ್ಯಾಸೆಂಜರ್ ರೈಲು   

ಚಿಂತಾಮಣಿ: ಬಂಗಾರಪೇಟೆ–ಯಶವಂತಪುರ ಪ್ಯಾಸೆಂಜರ್ ರೈಲನ್ನು ಈ ಮೊದಲು ಇದ್ದಂತೆ ಮೆಜೆಸ್ಟಿಕ್ ಮೂಲಕ ಚನ್ನಪಟ್ಟಣದವರೆಗೂ ಮುಂದುವರೆಸಬೇಕು ಎಂದು ರೈಲು ಪ್ರಯಾಣಿಕರು ಸಂಸದರು ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಈಪ್ಯಾಸೆಂಜರ್ ರೈಲು 9 ತಿಂಗಳ ನಂತರ ಪುನರಾರಂಭವಾಗಿದ್ದು, ಸೋಮವಾರ ನಗರದ ನಿಲ್ದಾಣಕ್ಕೆ ರೈಲು ಬಂದಾಗ ಪ್ರಯಾಣಿಕರು ಸ್ಟೇಷನ್ ಮಾಸ್ಟರ್ ಮೂಲಕ ಮನವಿ ಸಲ್ಲಿಸಿದರು. ಬಂಗಾರಪೇಟೆ, ಕೋಲಾರ, ಶ್ರೀನಿವಾಸಪುರ, ಚಿಂತಾಮಣಿ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ಪ್ರದೇಶಗಳ ಜನರಿಗೆ ಈ ರೈಲಿನ ಸಂಚಾರ ತುಂಬಾ ಅನುಕೂಲಕರವಾಗಿದೆ. ಬಡವರು ಹಾಗೂ ದಿನನಿತ್ಯ ಕೆಲಸಗಳಿಗೆ ಹೋಗುವ ಪ್ರಯಾಣಿಕರು ಕಡಿಮೆ ದರದಲ್ಲಿ ಪ್ರಯಾಣಿಸಬಹುದು. ಜತೆಗೆ ಈ ಭಾಗದ ರೈತರು ತಮ್ಮ ತರಕಾರಿ ಬೆಳೆಗಳ ಉತ್ಪನ್ನಗಳನ್ನು ಸಾಗಿಸಲು ಅನುಕೂಲವಾಗುತ್ತದೆ. ಹೀಗಾಗಿ ಇನ್ನೂ ಹೆಚ್ಚಿನ ರೈಲುಗಳನ್ನು ಓಡಿಸಬೇಕು ಹಾಗೂ ಮೆಜೆಸ್ಟಿಕ್ ಗೆ ಸಂಪರ್ಕ ಕಲ್ಪಿಸಬೇಕು ಎಂದು ಪ್ರಯಾಣಿಕರು ಮನವಿ ಮಾಡಿದರು.

ಈ ರೈಲು ಮೊದಲು ಯಶವಂತಪುರದಿಂದ ಮೆಜೆಸ್ಟಿಕ್ ಮಾರ್ಗವಾಗಿ ಚನ್ನಪಟ್ಟಣದವರೆಗೂ ಸಂಚರಿಸುತ್ತಿತ್ತು. ಮೆಜೆಸ್ಟಿಕ್ ತಲುಪುವ ಪ್ರಯಾಣಿಕರಿಗೆ ತುಂಬಾ ಅನುಕೂಲವಾಗಿತ್ತು. ಈ ರೈಲನ್ನು ಯಶವಂತಪುರಕ್ಕೆ ಸ್ಥಗಿತಗೊಳಿಸಿರುವುದು ಬೆಂಗಳೂರು ಕೇಂದ್ರ ನಿಲ್ದಾಣವನ್ನು ಸೇರಿ, ಅಲ್ಲಿಂದ ಬೇರೆ ಬೇರೆ ಕಡೆ ಹೋಗುವ ಪ್ರಯಾಣಿಕರಿಗೆ ತೊಂದರೆಯಾಗಿದೆ. ರೈಲ್ವೆ ಅಧಿಕಾರಿಗಳು ಹಾಗೂ ಸಂಸದರು ಕೂಡಲೇ ಗಮನಹರಿಸಿ ರೈಲು ಹಿಂದಿನಂತೆ ಸಂಚರಿಸಲು ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.