ADVERTISEMENT

ಚಿಕ್ಕಬಳ್ಳಾಪುರ | ಎರಡು ಕ್ಯಾಂಪಸ್‌ ಸ್ಥಾಪನೆಗೆ ಅನುಮತಿ

ಸತ್ಯಸಾಯಿ ಮಾನವ ಅಭ್ಯುದಯ ಸಂಸ್ಥೆಗೆ ಅನುಮತಿ ಪತ್ರಗಳನ್ನು ಹಸ್ತಾಂತರಿದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 16:41 IST
Last Updated 3 ಜುಲೈ 2020, 16:41 IST
ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಸದ್ಗುರು ಮಧುಸೂಧನ ಸಾಯಿ ಅವರಿಗೆ ಅನುಮತಿ ಪತ್ರಗಳನ್ನು ಹಸ್ತಾಂತರಿಸಿದರು.
ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಸದ್ಗುರು ಮಧುಸೂಧನ ಸಾಯಿ ಅವರಿಗೆ ಅನುಮತಿ ಪತ್ರಗಳನ್ನು ಹಸ್ತಾಂತರಿಸಿದರು.   

ಚಿಕ್ಕಬಳ್ಳಾಪುರ: ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಮಾನವ ಅಭ್ಯುದಯ ಸಂಸ್ಥೆ ಹೊಸದಾಗಿ ನಲಕದಿರೇನಹಳ್ಳಿಯಲ್ಲಿ ಬಾಲಕಿಯರ ಕ್ಯಾಂಪಸ್ ಹಾಗೂ ಮುದ್ದೇನಹಳ್ಳಿಯಲ್ಲಿ ಬಾಲಕರ ಕ್ಯಾಂಪಸ್ ಸ್ಥಾಪಿಸಲು ರಾಜ್ಯ ಸರಕಾರ ಅನುಮತಿ ನೀಡಿದೆ.

ಮುದ್ದೇನಹಳ್ಳಿ ಬಳಿಯ ಸತ್ಯಸಾಯಿ ಗ್ರಾಮಕ್ಕೆ ಶುಕ್ರವಾರ ಸಂಜೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಸಂಸ್ಥೆಯ ಮುಖ್ಯಸ್ಥರಾದ ಸದ್ಗುರು ಮಧುಸೂಧನ ಸಾಯಿ ಅವರಿಗೆ ಎರಡು ಕ್ಯಾಂಪಸ್‌ಗಳ ಆರಂಭಕ್ಕೆ ಅಗತ್ಯವಾದ ಅನುಮತಿ ಪತ್ರಗಳನ್ನು ಹಸ್ತಾಂತರ ಮಾಡಿದರು.

ಈ ವೇಳೆ ಮಾತನಾಡಿದ ಅಶ್ವತ್ಥನಾರಾಯಣ, ‘ಉನ್ನತ ಶಿಕ್ಷಣಕ್ಕಾಗಿ ಸತ್ಯಸಾಯಿ ಶಿಕ್ಷಣ ಸಂಸ್ಥೆಗಳು ನೀಡುತ್ತಿರುವ ಕೊಡುಗೆ ಎಲ್ಲರಿಗೂ ಮಾದರಿ. ಈ ನಿಟ್ಟಿನಲ್ಲಿ ಇಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಅತ್ಯುತ್ತಮ, ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವೇ ಇಲ್ಲ‘ ಎಂದು ಹೇಳಿದರು.

ADVERTISEMENT

‘ಉನ್ನತ ಶಿಕ್ಷಣವನ್ನು ಹಿಂದುಳಿದ ಮತ್ತು ಗ್ರಾಮೀಣ ಪ್ರದೇಶಗಳಿಗೂ ವ್ಯಾಪಕವಾಗಿ ವಿಸ್ತರಿಸಬೇಕು ಎಂಬುದು ಸರ್ಕಾರದ ಕನಸು. ವೈಯಕ್ತಿಕವಾಗಿಯೂ ಇದು ನನಗೆ ಇಷ್ಟವಾದ ಕೆಲಸ. ಹಳ್ಳಿಗಳ ಮಕ್ಕಳಿಗೆ ಸುಲಭವಾಗಿ ಉನ್ನತ ಶಿಕ್ಷಣ ಕೈಗೆಟುಕುವಂತಿರಬೇಕು. ಅಂತಹ ಉದಾತ್ತ ಉದ್ದೇಶಕ್ಕಾಗಿ ಸರ್ಕಾರ ಹೊಸ ಕ್ಯಾಂಪಸ್‌ಗಳ ಸ್ಥಾಪನೆಗೆ ಅನುಮತಿ ನೀಡಿದೆ’ ಎಂದು ತಿಳಿಸಿದರು.

‘ಮಕ್ಕಳಿಗೆ ಒಳಿತು, ಕೆಡುಕುಗಳು ಯಾವುವು ಎಂಬುದನ್ನು ಕಲಿಕೆಯ ಹಂತದಲ್ಲೇ ಅರಿತುಕೊಂಡರೆ ಮುಂದಿನ ಜೀವನ ಉಜ್ವಲವಾಗಿರುತ್ತದೆ. ಶಿಕ್ಷಣದಿಂದ, ಅದರಲ್ಲೂ ಮೌಲಿಕವಾದ ಕಲಿಕೆಯಿಂದ ಪರಿವರ್ತನೆ ಸಾಧ್ಯ. ಅದನ್ನು ಈ ಸಂಸ್ಥೆ ತೋರಿಸಿಕೊಟ್ಟಿದೆ’ ಎಂದು ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.