ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ಶುಕ್ರವಾರ (ಡಿ.12)ದಿಂದ ಹೆಲ್ಮೆಟ್ ಕಡ್ಡಾಯಗೊಳಿಸಿ ಜಿಲ್ಲಾ ಪೊಲೀಸ್ ಇಲಾಖೆ ಆದೇಶಿಸಿದೆ. ಇಂದಿನಿಂದ ದ್ವಿಚಕ್ರ ವಾಹನ ಚಲಾಯಿಸುವವರು ಹೆಲ್ಮೆಟ್ ಧರಿಸುವುದು ಕಡ್ಡಾಯ.
ಈ ಹಿಂದಿನಿಂದಲೂ ಜಿಲ್ಲಾ ಪೊಲೀಸ್ ಇಲಾಖೆಯು ಹೆಲ್ಮೆಟ್ ಧರಿಸುವಂತೆ ಜಾಗೃತಿ ಮೂಡಿಸುತ್ತಿತ್ತು. ದಂಡವನ್ನೂ ವಿಧಿಸಲು ಆದೇಶಿಸಿತ್ತು. ಆದರೆ ಈ ನಿಯಮ ಕಡ್ಡಾಯವಾಗಿ ಜಾರಿಯಾಗಿ ಇರಲಿಲ್ಲ. ನಾಮಕಾವಸ್ತೆಗೆ ಎನ್ನುವಂತಿತ್ತು. ಆದರೆ ಈಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಜಿಲ್ಲಾ ಪೊಲೀಸ್ ಇಲಾಖೆ ಆದೇಶಿಸಿದೆ.
ಒಂದು ವೇಳೆ ಹೆಲ್ಮೆಟ್ ಧರಿಸದಿದ್ದರೆ ಅಂತಹವರಿಗೆ ದಂಡ ವಿಧಿಸಲು ಸಹ ಮುಂದಾಗಿದೆ. ಈ ಸಂಬಂಧ ಜಿಲ್ಲೆಯಾದ್ಯಂತ ಈಗಾಗಲೇ ಪೊಲೀಸರು ಜಾಗೃತಿ ಸಹ ಮೂಡಿಸಿದ್ದಾರೆ.
ನಿತ್ಯವೂ ಒಂದಲ್ಲಾ ಒಂದು ಠಾಣೆಯಲ್ಲಿ ಹೆಲ್ಮೆಟ್ ಧರಿಸುವ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಶುಕ್ರವಾರವೂ ನಗರದಲ್ಲಿ ಈ ಬಗ್ಗೆ ಜಾಗೃತಿ ನಡೆಯಲಿದೆ.
ಅಲ್ಲದೆ ಗುರುವಾರ ನಗರದಾದ್ಯಂತ ಹೆಲ್ಮೆಟ್ ಕಡ್ಡಾಯದ ಬಗ್ಗೆ ಆಟೊ ಪ್ರಚಾರ ಸಹ ನಡೆಸಲಾಯಿತು.
ನಗರದ ಜಿಲ್ಲಾಡಳಿತ ಭವನದ ಆವರಣಕ್ಕೆ ಬರುವವರು ಇಂದಿನಿಂದ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಹೆಲ್ಮೆಟ್ ಹಾಗೂ ವಾಹನದ ದಾಖಲೆಗಳು ಇಟ್ಟುಕೊಂಡು ಬರಬೇಕು. ಇಲ್ಲದಿದ್ದರೆ ಪ್ರವೇಶ ನಿರ್ಬಂಧಿಸಬೇಕಾಗುತ್ತದೆ. ದಂಡ ಕಟ್ಟಬೇಕಾಗುತ್ತದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.
ನಗರಕ್ಕೆ ನಿತ್ಯ ಬೆಳಿಗ್ಗೆ ರೈತರು ಹೂ ಮಾರುಕಟ್ಟೆಗೆ ಬರುವರು. ಇಲ್ಲಿಯೂ ಈಗಾಗಲೇ ಜಾಗೃತಿ ಮೂಡಿಸಲಾಗಿದೆ. ಮಾರುಕಟ್ಟೆಗೆ ಹೂ ತರುವ ರೈತರು ಸಹ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಪೊಲೀಸ್ ಇಲಾಖೆ ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.