ADVERTISEMENT

ಸಾಧನೆಗೆ ಬಡತನ ಅಡ್ಡಿಯಾಗದು: ಬಿ.ಎನ್. ವರಪ್ರಸಾದರೆಡ್ಡಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 6:59 IST
Last Updated 4 ಡಿಸೆಂಬರ್ 2020, 6:59 IST
ಗೌರಿಬಿದನೂರು ತಾಲ್ಲೂಕಿನ ನಂದಿಗಾನಹಳ್ಳಿಯ ಚಿನ್ನದ ಪದಕ ವಿಜೇತೆ ಎನ್.ವಿ. ಶ್ವೇತಾ ಅವರನ್ನು ಅಭಿನಂದಿಸಲಾಯಿತು
ಗೌರಿಬಿದನೂರು ತಾಲ್ಲೂಕಿನ ನಂದಿಗಾನಹಳ್ಳಿಯ ಚಿನ್ನದ ಪದಕ ವಿಜೇತೆ ಎನ್.ವಿ. ಶ್ವೇತಾ ಅವರನ್ನು ಅಭಿನಂದಿಸಲಾಯಿತು   

ಗೌರಿಬಿದನೂರು: ‘ಗ್ರಾಮೀಣ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಬಡತನ ಹಾಗೂ ಆರ್ಥಿಕ ಸ್ಥಿತಿಗತಿ ಎಂದಿಗೂ ಸಮಸ್ಯೆಯಾಗಲಾಗುವುದಿಲ್ಲ ಎಂಬುದಕ್ಕೆ 4 ಚಿನ್ನದ ಪದಕ ಪಡೆದ ವಿದ್ಯಾರ್ಥಿನಿಯ ಸಾಧನೆ ಮಾದರಿಯಾಗಿದೆ’ ಎಂದು ಕೆಎಎಸ್ ಅಧಿಕಾರಿಗಳ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಿ.ಎನ್. ವರಪ್ರಸಾದರೆಡ್ಡಿ ತಿಳಿಸಿದರು.

ತಾಲ್ಲೂಕಿನ ನಂದಿಗಾನಹಳ್ಳಿಯಲ್ಲಿ ಕೃಷಿ ವಿಶ್ವವಿದ್ಯಾಲಯದಿಂದ 4 ಚಿನ್ನದ ಪದಕ ಪಡೆದ ಎನ್.ವಿ. ಶ್ವೇತಾ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.

ರಾಜ್ಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಬಹುತೇಕ ಮಂದಿ ಗ್ರಾಮೀಣ ಭಾಗದಿಂದ ಬಂದಂತಹ ವಿದ್ಯಾರ್ಥಿಗಳೇ ಆಗಿದ್ದಾರೆ ಎಂದರು.

ADVERTISEMENT

ಬಡತನ, ಆರ್ಥಿಕ ಸಂಕಷ್ಟ ಹಾಗೂ ಇನ್ನಿತರ ಯಾವುದೇ ಸಮಸ್ಯೆಗಳಿಗೆ ಹೆದರದೆ ಕೆಚ್ಚೆದೆಯಿಂದ ಜೀವನದಲ್ಲಿ ನಿರ್ದಿಷ್ಟ ಗುರಿ ಹೊಂದಿದ್ದಾರೆ. ಅದಕ್ಕೆ ಪೂರಕವಾಗಿ ಛಲದಿಂದ ಬದುಕು ಸಾಗಿಸಿ ಕೃಷಿ ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ ಹಾಗೂ ಪಿಎಚ್.ಡಿ ಪದವಿ ಪಡೆದು ಅವರ ವಿಶಿಷ್ಟ ಸಾಧನೆಗೆ 4 ಚಿನ್ನದ ಪದಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಆ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾದ ಶ್ವೇತಾ ಅವರ ಬದುಕು ಮಾದರಿಯಾಗಿದೆ. ಅವರ ಸಾಧನೆ ಜನ್ಮ ನೀಡಿದ ಪೋಷಕರು ಹಾಗೂ ವಿದ್ಯಾಭ್ಯಾಸಕ್ಕೆ ನೆರವಾದ ಹಿತೈಷಿಗಳಿಗೆ ಸಾರ್ಥಕತೆ ನೀಡಿದೆ ಎಂದು ಹೇಳಿದರು.

ಗ್ರಾಮೀಣ ವಿದ್ಯಾರ್ಥಿಗಳು ಸೌಲಭ್ಯ ಬಳಸಿಕೊಂಡು ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.

ಲಯನ್ಸ್ ಸಂಸ್ಥೆಯ ತಾಲ್ಲೂಕು ಘಟಕದ ‌ಅಧ್ಯಕ್ಷ ಆರ್.ಜೆ. ಶ್ರೇಣಿಕ್ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸಾಧನೆ ಗುರುತಿಸಿ ಪ್ರೋತ್ಸಾಹಿಸಿದಲ್ಲಿ ಮುಂದೆ ಅವರ ಮಾರ್ಗದರ್ಶನದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಲಿದ್ದಾರೆ. ಅವರ ಆದರ್ಶ ಜೀವನ ಇತರರಿಗೆ ಪ್ರೇರಣೆಯಾಗಬೇಕು ಎಂದು ಹೇಳಿದರು.

ಮುಖಂಡರಾದ ಜಿ.ಎನ್. ಸೂರಜ್, ವೇಣುಗೋಪಾಲ್, ಸಂಕೇತ್ ಶ್ರೀರಾಮ್, ಜಿ.ಕೆ. ಪ್ರಸಾದ್, ಕೆ.ಆರ್. ಸಪ್ತಗಿರಿ, ಮಂಜುನಾಥ್, ಅನಿಲ್, ಉದಯಕುಮಾರ್, ರವಿ, ಕೋದಂಡಪ್ಪ, ಶಿವಾರೆಡ್ಡಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.