ADVERTISEMENT

ಆರಂಭವಾಗದ ಉತ್ಪಾದನಾ ಕ್ಲಸ್ಟರ್

ಚಿಕ್ಕಬಳ್ಳಾಪುರ ಜಿಲ್ಲೆಗೆ 2020ರ ಬಜೆಟ್‌ನಲ್ಲಿ ಘೋಷಿಸಿದ್ದ ಯೋಜನೆ

ಡಿ.ಎಂ.ಕುರ್ಕೆ ಪ್ರಶಾಂತ
Published 28 ಮೇ 2022, 16:28 IST
Last Updated 28 ಮೇ 2022, 16:28 IST

ಚಿಕ್ಕಬಳ್ಳಾಪುರ: ಕೈಗಾರಿಕೀರಣದ ವಿಚಾರದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಇನ್ನೂ ಶೈಶವಾವಸ್ಥೆಯಲ್ಲಿ ಇದೆ. ಸುತ್ತಲಿನ ಜಿಲ್ಲೆಗಳು ಕೈಗಾರಿಕೆ ಅಭಿವೃದ್ಧಿಯಲ್ಲಿ ನಾಗಾ ಲೋಟದಲ್ಲಿ ಇದ್ದರೆ ಜಿಲ್ಲೆಗೆ ಘೋಷಿಸಿದ್ದ ಯೋಜನೆಗಳೇ ಜಾರಿಯಾಗುತ್ತಿಲ್ಲ.

2020ರ ಬಜೆಟ್‌ನಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಿಲ್ಲೆಗೆ ಘೋಷಿಸಿದ್ದ ‘ಉತ್ಪಾದನಾ ನಿರ್ದಿಷ್ಟ ಕೈಗಾರಿಕಾ ಕ್ಲಸ್ಟರ್‌’ ಯೋಜನೆ ಇಂದಿಗೂ ಜಾರಿಯೇ ಆಗಿಲ್ಲ. ಜಿಲ್ಲೆಯ ಕೈಗಾರಿಕೀರಣದ ವಿಚಾರದಲ್ಲಿ ಈ ಕ್ಲಸ್ಟರ್ ಮಹತ್ವದ ಯೋಜನೆ ಆಗಿತ್ತು.

ಜಿಲ್ಲೆಯ‌ಲ್ಲಿ ಅಭಿವೃದ್ಧಿಯ ಯೋಜನೆಗಳು ಬರಿ ಬಜೆಟ್‌ನಲ್ಲಿ ಘೋಷಣೆಗೆ ಮಾತ್ರ ಸೀಮಿತ ಎನ್ನುವಂತಾಗಿದೆ ಎನ್ನುವ ಆರೋಪಕ್ಕೆ ಈ ಯೋಜನೆ ಜಾರಿ ಆಗದಿರುವುದು ಪುಷ್ಟಿ ನೀಡಿದಂತೆ ಆಗಿದೆ.

ADVERTISEMENT

ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ‘ಉತ್ಪಾದನಾ ನಿರ್ದಿಷ್ಟ ಕೈಗಾರಿಕಾ ಕ್ಲಸ್ಟರ್‌’ಗಳನ್ನು ನಿರ್ಮಿಸುವ ಕುರಿತು 2020ರ ಬಜೆಟ್‌ನಲ್ಲಿ ಯಡಿಯೂರಪ್ಪ ‌ಘೋಷಿಸಿದ್ದರು. ಶಿವಮೊಗ್ಗ, ಚಿತ್ರದುರ್ಗ, ಕಲಬುರ್ಗಿ, ಮೈಸೂರು, ಕೊಪ್ಪಳ, ಚಾಮರಾಜನಗರ, ಧಾರ ವಾಡ, ಚಿಕ್ಕಬಳ್ಳಾಪುರ ಮತ್ತು ಬೀದರ್‌ ಜಿಲ್ಲೆಗಳಲ್ಲಿ ಕ್ಲಸ್ಟರ್‌ಗಳನ್ನು ಅಭಿವೃದ್ಧಿಪ ಡಿಸಲಾಗುವುದು ಎಂದಿದ್ದರು. ಈ ಯೋಜನೆಯಡಿ ಕೊಪ್ಪಳದಲ್ಲಿ ಆಟಿಕೆ ಕ್ಲಸ್ಟರ್‌ಗೆ ಚಾಲನೆ ಸಹ ದೊರೆಯಿತು.

ಯೋಜನೆಯಡಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಮೊಬೈಲ್ ಬಿಡಿಭಾಗಗಳ ಉತ್ಪಾದನಾ ಘಟಕಗಳು ಕಾರ್ಯಾರಂಭ ಆಗಬೇಕಾಗಿತ್ತು. ಬೆಂಗಳೂರಿಗೆ ನಿತ್ಯವೂ ಕೆಲಸಗಳಿಗಾಗಿ ಜಿಲ್ಲೆಯಿಂದ ತೆರಳುವವರಿಗೆ ಈ ಉತ್ಪಾದನಾ ಘಟಕಗಳಿಂದ ಒಂದಿಷ್ಟು ಉದ್ಯೋಗದ ಅವಕಾಶಗಳು ದೊರೆಯುವ ನಿರೀಕ್ಷೆ ಸಹ ಇತ್ತು. ಮೊಬೈಲ್ ಬಿಡಿ ಭಾಗಗಳ ಉತ್ಪಾದನೆಯ ಕುರಿತ ಕೌಶಲವನ್ನು ಹೊಂದಿರುವವರಿಗೆ ಉದ್ಯೋಗ ದೊರೆಯುತ್ತಿತ್ತು. ಪರೋಕ್ಷವಾಗಿ ಜಿಲ್ಲೆಯ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೂ ಈ ಘಟಕಗಳು ಕಾರಣವಾಗುತ್ತಿದ್ದವು. ಆದರೆ ಯೋಜನೆ ಬಜೆಟ್‌ನಲ್ಲಿ ಘೋಷಣೆಗೆ ಮಾತ್ರ ಸೀಮಿತವಾಯಿತು!

ಏಕೆ ಜಾರಿಯಿಲ್ಲ: ಯೋಜನೆಯಡಿ ಜಿಲ್ಲೆಗೆ ಮೊಬೈಲ್ ಬಿಡಿಭಾಗಳ ತಯಾರಿಕೆಯ ಘಟಕಗಳ ಆರಂಭಕ್ಕೆ ಸರ್ಕಾರ ನಿರ್ಧರಿಸಿತ್ತು. ಆರಂಭದಲ್ಲಿ ಜಿಲ್ಲಾ ಕೈಗಾರಿಕಾ ಇಲಾಖೆಯ ವ್ಯಾಪ್ತಿಯಲ್ಲಿ ಯೋಜನೆ ಇತ್ತು. ಆದರೆ ನಂತರ ಮೊಬೈಲ್ ಬಿಡಿಭಾಗಗಳ ಉತ್ಪಾದನಾ ಘಟಕಗಳ ಜತೆಗೆ ಎಲೆಕ್ಟ್ರಾನಿಕ್ ಸಿಸ್ಟಂ ಡಿಸೈನ್ ಮತ್ತು ಮ್ಯಾನಿಪ್ಯಾಚ್ಚರಿಂಗ್ (ಇಎಸ್‌ಡಿಎಂ) ಘಟಕದ ಯೋಜನೆಯೂ ಸೇರಿತು. ಇದನ್ನು ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಸುಪರ್ದಿಗೆ ನೀಡಲಾಯಿತು ಎನ್ನುತ್ತವೆ ಮೂಲಗಳು.

‘ಈ ಯೋಜನೆಯನ್ನು ಜಿಲ್ಲೆಯ ಯಾವುದೊ ಒಂದು ಕೈಗಾರಿಕಾ ವಲಯದಲ್ಲಿ ಮಾತ್ರ ಜಾರಿಗೊಳಿ ಸಲು ಸಾಧ್ಯವಿಲ್ಲ. ಇಡೀ ಜಿಲ್ಲೆಯನ್ನೇ ಘಟಕವನ್ನಾಗಿಸಿಕೊಂಡು ಯೋಜನೆ ಯನ್ನು ಜಾರಿಗೊಳಿಸ ಬೇಕಾಗಿತ್ತು. ಬೇರೆ ಬೇರೆ ಕಡೆಗಳಲ್ಲಿ ಘಟಕ ನಿರ್ಮಾಣಕ್ಕೆ ಅಷ್ಟೊಂದು ಬಂಡವಾಳ ಹೂಡುವವರು ಬರುವುದಿಲ್ಲ ಎನ್ನುವ ಚರ್ಚೆಗಳು ಆರಂಭವಾದವು. ಹೀಗೆ ಚರ್ಚೆಯ ಹಂತದಿಂದ ಯೋಜನೆ ನಿಂತಿತು’ ಎಂದು ಕೈಗಾರಿಕಾ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.