ಚಿಂತಾಮಣಿ: ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಸೋನೆ ಮಳೆಯಿಂದ ನಗರದ 25 ನೇ ವಾರ್ಡ್ ನ ಅಂಬೇಡ್ಕರ್ ನಗರದಲ್ಲಿ ಶನಿವಾರ ರಾತ್ರಿ ಹೆಂಚಿನ ಮನೆಯೊಂದು ಕುಸಿದುಬಿದ್ದಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರು ಇಲ್ಲದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.
ಅಂಬೇಡ್ಕರ್ ನಗರದಲ್ಲಿ ವಾಸವಾಗಿರುವ ಸುಶೀಲಮ್ಮ ಬಿನ್ ಲೇಟ್ ರಾಮಕೃಷ್ಣಪ್ಪ ಅವರಿಗೆ ಸೇರಿದ ಹೆಂಚಿನ ಮನೆ ನಿರಂತರವಾಗಿ ಸುರಿಯುತ್ತಿರುವ ಜಡಿ ಮಳೆಗೆ ನೆನೆದು ರಾತ್ರಿಯಲ್ಲಿ ಕುಸಿದುಬಿದ್ದಿದೆ. ಅವರು ಬೇರೆ ಸಂಬಂಧಿಕರ ಮನೆಗೆ ಹೋಗಿದ್ದು ಮನೆಯಲ್ಲಿ ಯಾರು ಇಲ್ಲದ ಕಾರಣ ಯಾವುದೇ ಪ್ರಾಣಾಪಾಯವಾಗಿಲ್ಲ.
ವಾರ್ಢಿನ ನಗರಸಭೆ ಸದಸ್ಯ ಮಧು ಸ್ಥಳಕ್ಕೆ ಭೇಟಿ ನೀಡಿದ್ದರು. ವಾರ್ಡಿನಲ್ಲಿ ಹೆಚ್ಚಿನ ನಿವಾಸಿಗಳು ಬಡವರಾಗಿದ್ದಾರೆ. ಒಂದು ವಾರದಿಂದ ಜಡಿಮಳೆ ಬೀಳುತ್ತಿದೆ. ಹಳೆಯ ಮನೆಗಳ ಗೋಡೆಗಳು ಕುಸಿದು ಬೀಳುವ ಸಂಭವವಿರುತ್ತದೆ. ಈಗ ಕುಸಿದು ಬಿದ್ದಿರುವ ಹೆಂಚಿನ ಮನೆಯ ನಿವಾಸಿಯೂ ಸಹ ಬಡವಳಾಗಿದ್ದು ಮನೆಯನ್ನು ಕಳೆದುಕೊಂಡಿದ್ದಾರೆ.
ನಗರಸಭೆ ಮತ್ತು ತಾಲ್ಲೂಕು ಆಡಳಿತ ಅಧಿಕಾರಿಗಳು ಸರ್ಕಾರದಿಂದ ಪ್ರಕೃತಿ ವಿಕೋಪದಡಿ ಪರಿಹಾರವನ್ನು ಕೊಡಿಸಬೇಕು. ಶೀಘ್ರವಾಗಿ ಸರ್ಕಾರಕ್ಕೆ ಪ್ರಸ್ತವನೆಯನ್ನು ಸಲ್ಲಿಸಿ ನಿಗಾ ವಹಿಸಬೇಕು ಎಂದು ಮನವಿ ಮಾಡಿದರು.ನಗರಸಭೆ ಸದಸ್ಯ ದೇವಳಂ ಶಂಕರ್, ಮುಖಂಡರಾದ ಸಾಧಿಕ್, ಚಾಂದ್ ಪಾಷಾ, ವಿಜಯಶಂಕರ್, ಶೇಖ್, ಲೋಕೇಶ್, ಗೋವಿಂದ ಇದ್ದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.