ADVERTISEMENT

ಮಳೆ ಸಂತ್ರಸ್ತರಿಗೆ ವರ್ಷಾಂತ್ಯಕ್ಕೆ ಪರಿಹಾರ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 2:04 IST
Last Updated 25 ನವೆಂಬರ್ 2021, 2:04 IST
ಗುಡಿಬಂಡೆ ತಾಲ್ಲೂಕು ಕಚೇರಿಯಲ್ಲಿ ಮಳೆಹಾನಿ ಕುರಿತ ಸಭೆ ನಡೆಯಿತು. ಲೋಡಲ್ ಅಧಿಕಾರಿ ಡಾ.ಅಶೋಕ, ತಹಶೀಲ್ದಾರ್ ಸಿಗಬತ್‌ಉಲ್ಲಾ, ಇಒ ರವೀಂದ್ರ ಇದ್ದರು
ಗುಡಿಬಂಡೆ ತಾಲ್ಲೂಕು ಕಚೇರಿಯಲ್ಲಿ ಮಳೆಹಾನಿ ಕುರಿತ ಸಭೆ ನಡೆಯಿತು. ಲೋಡಲ್ ಅಧಿಕಾರಿ ಡಾ.ಅಶೋಕ, ತಹಶೀಲ್ದಾರ್ ಸಿಗಬತ್‌ಉಲ್ಲಾ, ಇಒ ರವೀಂದ್ರ ಇದ್ದರು   

ಗುಡಿಬಂಡೆ: ಮಳೆ ಅತಿವೃಷ್ಟಿಯಿಂದ ಹಾನಿಯಾದ ಮನೆಗಳಿಗೆ ₹5 ಲಕ್ಷ, ಕೃಷಿ ಬೆಳೆಗಳಿಗೆ ಹೆಕ್ಟೇರ್‌ಗೆ ₹ 6,800, ತೋಟಗಾರಿಕೆ ಬೆಳೆಗಳಿಗೆ ಹೆಕ್ಟೇರ್‌ಗೆ ₹13,500 ಪರಿಹಾರದ ಹಣವನ್ನು ಸಂತ್ರಸ್ತರ ಖಾತೆಗಳಿಗೆ ನೇರವಾಗಿ ಡಿಸೆಂಬರ್ ಮೊದಲವಾರದಲ್ಲಿ ಜಮಾ ಮಾಡಲಾಗುವುದು ಎಂದು ಜಿಲ್ಲಾ ಲೋಡಲ್‌ ಅಧಿಕಾರಿ ಡಾ.ಅಶೋಕ ತಿಳಿಸಿದರು.

ತಾಲ್ಲೂಕು ಕಚೇರಿಯಲ್ಲಿ ನಡೆದಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಈಗಾಗಲೇ ಪ್ರಾಥಮಿಕ ಹಂತದಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿದ್ದು ಮತ್ತೊಮ್ಮೆ ಕ್ಷೇತ್ರವಾರು ಅಧ್ಯಯನ ನಡೆಸಲು 8 ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತಂಡ ಮಾಡಲಾಗಿದೆ. ತಂಡದಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಗ್ರಾಮ ಪಂಚಾಯಿತಿ, ಕಂದಾಯ ಅಧಿಕಾರಿಗಳಿದ್ದು ಬೆಳೆ ಹಾನಿಯಾಗಿರುವ ಬಗ್ಗೆ ಪರಿಶೀಲನೆ ಮಾಡಿ ರೈತರಿಗೆ ನಿಗದಿತ ಅವಧಿಯೊಳಗೆ ಪರಿಹಾರ ಒದಗಿಸಲು ಸೂಕ್ತ ನಿರ್ದೇಶನ ನೀಡಲಾಗಿದೆ ಎಂದರು.

ADVERTISEMENT

ಗುಡಿಬಂಡೆ ತಾಲ್ಲೂಕಿನಲ್ಲಿ ಮಳೆಯಿಂದ 39 ಮನೆಗಳು ಬಿದ್ದಿದ್ದು ಕೆಲವು ಶಿಥಿಲವಾಗಿವೆ.11,127 ಹೆಕ್ಟೇರ್ ಕೃಷಿ ಪ್ರದೇಶದಲ್ಲಿ ರಾಗಿ, ಜೋಳ ಬಿತ್ತನೆಯಾಗಿದೆ. 5,509 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ಹಾನಿಯಾಗಿದೆ. 519 ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ ಎಂದು ತಿಳಿಸಿದರು.

ತಹಶೀಲ್ದಾರ್ ಸಿಗಬತ್‌ಉಲ್ಲಾ, ಇಒ ರವೀಂದ್ರ, ಎಡಿಎ ಅನಿಸ್ ಸಲ್ಮಾ, ಶಂಕರಯ್ಯ, ಎಡಿಎಚ್ ದಿವಾಕರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ, ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.