ADVERTISEMENT

ನೆಮ್ಮದಿ ಬದುಕಿಗೆ ರಾಮನ ಸ್ಮರಣಿ ಅಗತ್ಯ

ಶ್ರೀರಾಮಕೋಟಿ ಜಪಯಜ್ಞ ಸಪ್ತಾಯದಲ್ಲಿ ಮಂಗಳಾನಂದನಾಥ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 14:51 IST
Last Updated 25 ಏಪ್ರಿಲ್ 2019, 14:51 IST
ಶ್ರೀರಾಮಕೋಟಿ ಜಪಯಜ್ಞ ಸಪ್ತಾಯದಲ್ಲಿ ಮಂಗಳಾನಂದನಾಥ ಸ್ವಾಮೀಜಿ ಮಾತನಾಡಿದರು.
ಶ್ರೀರಾಮಕೋಟಿ ಜಪಯಜ್ಞ ಸಪ್ತಾಯದಲ್ಲಿ ಮಂಗಳಾನಂದನಾಥ ಸ್ವಾಮೀಜಿ ಮಾತನಾಡಿದರು.   

ಚಿಕ್ಕಬಳ್ಳಾಪುರ: ಈ ಕಲಿಯುಗದಲ್ಲಿ ಪ್ರತಿಯೊಬ್ಬರು ಧಾರ್ಮಿಕ ನಿಷ್ಠೆ ಮೈಗೂಡಿಸಿಕೊಳ್ಳಬೇಕು. ಇದು ಕಡಿಮೆಯಾದರೆ ಮುಂದಿನ ದಿನಗಳಲ್ಲಿ ಬರ, ಕ್ಷಾಮಗಳು ಎಲ್ಲರಿಗೂ ಎದುರಾಗಲಿವೆ ಎಂದು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ ತಿಳಿಸಿದರು.

ತಾಲೂಕಿನ ದಿನ್ನೆಹೊಸಹಳ್ಳಿ ರಸ್ತೆಯ ಅಂಕಣಗೊಂದಿಯ ಬಯಲಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಗುರುವಾರದಿಂದ ಹಮ್ಮಿಕೊಂಡಿರುವ ಶ್ರೀರಾಮಕೋಟಿ ಜಪಯಜ್ಞ ಸಪ್ತಾಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾನವ ಜನ್ಮ ಶ್ರೇಷ್ಠ ಜನ್ಮ. ಮಾನವ ಎಷ್ಟೇ ತಂತ್ರಜ್ಞಾನ, ಬುದ್ಧಿವಂತನಾದರೂ ಮಾಡುವ ಕಾಯಕದಲ್ಲಿ ಭಗವಂತನ ಆಶೀವಾದ ಇರಬೇಕು. ಪ್ರತಿಯೊಬ್ಬರು ಶ್ರದ್ಧಾ ಭಕ್ತಿಯಿಂದ ದೇವರನ್ನು ಆರಾಧಿಸಿದರೆ ಇಡೀ ಸಮಾಜ ಶಾಂತಿ ಪ್ರಿಯವಾಗಿರುತ್ತದೆ. ಲೋಕಕಲ್ಯಾಣಕ್ಕಾಗಿ ಏರ್ಪಡಿಸುವಂತಹ ರಾಮಕೋಟಿ ಜಪಯಜ್ಞದಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕು. ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡದೆ ಶ್ರೀರಾಮನನ್ನು ಜಪಿಸುವ ಮೂಲಕ ಭಗವಂತನನ್ನು ಕಾಣಬೇಕು ಎಂದು ಹೇಳಿದರು.

ADVERTISEMENT

ಶ್ರೀರಾಮಕೋಟಿ ಜಪಯಜ್ಞ ಸಪ್ತಾಹದ ಭಕ್ತ ಮಂಡಳಿ ಸಮಿತಿ ಅಧ್ಯಕ್ಷ ಪುರದಗಡ್ಡೆ ಕೃಷ್ಣಪ್ಪ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಭಗವಂತನ ಸ್ಮರಣಿ ಜನರಲ್ಲಿ ವಿರಳವಾಗುತ್ತಿದೆ. ಇದರಿಂದಲೇ ಮನುಷ್ಯ ಅನೇಕ ಕಾಯಿಲೆಗಳಿಗೆ ಒಳಗಾಗುತ್ತಿದ್ದಾನೆ. ಮಳೆ, ಬೆಳೆಗಳು ದೂರವಾಗುತ್ತಿದೆ. ಬರಗಾಲದ ಬೇಗೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ಅಳಿವು-ಉಳಿವು ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಮಕೋಟಿ ಜಪವೂ 168 ಗಂಟೆ ಸತತವಾಗಿ ನಡೆಯಲಿದೆ. ಪ್ರತಿ ಹಳ್ಳಿಗಳಲ್ಲಿ ಜನರು ಭಗವಂತನನ್ನು ಸ್ಮರಿಸಲು ರಾಮನ ಜಪ ಮಾಡುವ ಆಸಕ್ತಿ ಬೆಳೆಸಿಕೊಳ್ಳಬೇಕು. ನಿತ್ಯ ತಾರಕ ಮಂತ್ರಗಳನ್ನು ಜಪಿಸುವ ಮೂಲಕ ಕಾಲಕಾಲಕ್ಕೆ ಸಮೃದ್ಧಿ ಜೀವನ ನಡೆಸಲು ಸಾಧ್ಯ. ಜೊತೆಗೆ ಲೋಕಶಾಂತಿಗಾಗಿ ಇದೊಂದು ಉತ್ತಮ ಕೆಲಸವಾಗುತ್ತದೆ. ಇಂದಿನ ಯುವಪೀಳಿಗೆ ಹೆಚ್ಚು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀರಾಮಕೋಟಿ ಜಪಯಜ್ಞ ಸಪ್ತಾಹದ ಭಕ್ತ ಮಂಡಳಿ ಸಮಿತಿ ಉಪಾಧ್ಯಕ್ಷ ರಂಗಪ್ಪ ಅಂಕಣಗೊಂದಿ, ಕಾರ್ಯಾಧ್ಯಕ್ಷ ಗೊಲ್ಲಹಳ್ಳಿ ನಾರಾಯಣಪ್ಪ, ಖಜಾಂಚಿ ಸಾಧುಮಠ ಕೃಷ್ಣಮೂರ್ತಿ, ದಾಸ ಸಾಹಿತ್ಯ ಪರಿಷತ್ ಗುಡಿಬಂಡೆ ತಾಲೂಕು ಅಧ್ಯಕ್ಷ ಗಂಗಾಧರಪ್ಪ, ಸಮಿತಿಯ ಪದಾಧಿಕಾರಿಗಳಾದ ಲಕ್ಷ್ಮಣ್, ಕೇಶವಪ್ಪ, ನಾರಾಯಣಸ್ವಾಮಿ, ಚಲಪತಿ, ಗೋಪಾಲಚಾರಿ, ಗಂಗಾಧರಪ್ಪ, ಆನಂದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.