ADVERTISEMENT

ಪ್ರಗತಿಗಾಗಿ ಯಾವ ತ್ಯಾಗಕ್ಕೂ ಸಿದ್ಧ

ಪ್ರಚಾರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಭರವಸೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2019, 9:16 IST
Last Updated 2 ಡಿಸೆಂಬರ್ 2019, 9:16 IST
ಪ್ರಚಾರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಮಾತನಾಡಿದರು.
ಪ್ರಚಾರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಮಾತನಾಡಿದರು.   

ಚಿಕ್ಕಬಳ್ಳಾಪುರ: ‘ಈ ಹಿಂದೆ ಕುಮಾರಸ್ವಾಮಿ ಅವರು 10 ಕೆ.ಜಿ. ಬದಲು 8 ಕೆ.ಜಿ. ಅಕ್ಕಿ ಕೊಡುತ್ತೇನೆ ಎಂದು ಹೇಳಿದಾಗ ಅದರ ವಿರುದ್ಧ ಸದನದಲ್ಲಿ ಗಲಾಟೆ ಮಾಡಿದವನು ನಾನು. ನಿಮಗಾಗಿ ಅವರ ಸರ್ಕಾರವನ್ನೇ ಕಿತ್ತು ಹಾಕಿದ್ದೇನೆ. ನಿಮ್ಮ ಪ್ರಗತಿಗೆ ನಾನು ಯಾವ ತ್ಯಾಗಕ್ಕೂ ಸಿದ್ಧ. ಕೇಂದ್ರ ಸರ್ಕಾರ ನಿಮಗೆ ನೀಡುವ ಅಕ್ಕಿಗೆ ಹಣ ನೀಡುತ್ತಿದೆ. ಸುಳ್ಳು ಮಾತಿಗೆ, ಭರವಸೆಗೆ ನಂಬಬೇಡಿ’ ಎಂದು ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರ ಪ್ರತಿಯೊಬ್ಬ ಬಡವನೂ ಸ್ವಂತ ಸೂರಿನ ಕನಸು ನನಸಾಗಿಸಿಕೊಳ್ಳುವ ಸದವಕಾಶವನ್ನು ನೀಡಿದೆ. ಇದರ ಸದ್ಬಳಕೆ ಕ್ಷೇತ್ರದ ಪ್ರತಿಯೊಬ್ಬ ಬಡವನಿಗೂ ತಲುಪಿಸುವ ಕಾರ್ಯ ಮಾಡಲು ನಾನು ಬದ್ಧವಾಗಿದ್ದೇನೆ. ನನಗೆ ಬಿ.ಆರ್.ಅಂಬೇಡ್ಕರ್ ಅವರೇ ಆದರ್ಶ. ನಾನು ನಿಮಗೆ ನಿವೇಶನ ಖಚಿಡಿತವಾಗಿ ಕೊಡುತ್ತೇನೆ. ಇಂದು ನಿಮ್ಮ ದಿಕ್ಕು ತಪ್ಪಿಸುವ ಮಾತನ್ನಾಡಿದವರು ಡಿ.5ರ ನಂತರ ಇತ್ತ ಬರಲ್ಲ. ನಿಮ್ಮ ಕಷ್ಟ ಸುಖಗಳಿಗೆ ನಾನು ಸ್ಪಂದಿಸುತ್ತೇನೆ’ ಎಂದು ತಿಳಿಸಿದರು.

‘ನಾನು ಈಗಾಗಲೇ ವಸತಿ ಸಚಿವರ ಜತೆ ಮಾತನಾಡಿದ್ದೇನೆ. ವಿಶೇಷ ಪ್ರಕರಣ ಎಂದು ಒಂದು ಮನೆಗೆ ₨5 ಲಕ್ಷ ಮನೆ ಕೊಡಿಸುತ್ತೇನೆ. 500 ಮನೆಗಳ ಒಂದು ಹೊಸ ಕಾಲೊನಿ ನಿರ್ಮಾಣವಾಗಲಿದೆ. ನಿಜವನ್ನು ಅರ್ಥ ಮಾಡಿಕೊಳ್ಳಿ, ಸುಳ್ಳನ್ನು ನಂಬಲು ಹೋಗಬೇಡಿ. ಸುಳ್ಳು ಬಹಳ ಸಿಹಿ ಆಗಿರುತ್ತದೆ. ಇದನ್ನು ತಿಂದರೆ ನಿಮ್ಮ ಭವಿಷ್ಯ ಮಂಕಾಗುತ್ತದೆ’ ಎಂದರು.

ADVERTISEMENT

‘ಈ ಚುನಾವಣೆ ನಿಮ್ಮ ಭವಿಷ್ಯ ರೂಪಿಸುವ ಚುನಾವಣೆ. ವೈದ್ಯಕೀಯ ಕಾಲೇಜು, ಆಸ್ಪತ್ರೆ ನಿಮಗಾಗಿ ತಂದಿದ್ದೇನೆ. ಇದು ನಾನು ಮಾಡದಿದ್ದರೆ ಕನಕಪುರಕ್ಕೆ ಹೋಗುತ್ತಿತ್ತು. ನಿಮಗಾಗಿ ನಾನು ಸ್ಥಾನವನ್ನು ತ್ಯಾಗ ಮಾಡಿದ್ದೇನೆ. ನಿಮಗೆ ಲಕ್ಷ್ಮಿ ಬೇಕು ಎಂದರೆ ಕಮಲಕ್ಕೆ ನೀವು ಮತ ಕೊಡಿ’ ಎಂದು ತಿಳಿಸಿದರು.

ಬಿಜೆಪಿ ಮುಖಂಡ ಚಕ್ರಪಾಣಿ ಆನಂದ್ ಮಾತನಾಡಿ, ‘ಸುಧಾಕರ್ ಅವರನ್ನು ಹೇಗಾದರೂ ಮಾಡಿ ಸೋಲಿಸಬೇಕು ಎಂದು ದೊಡ್ಡ ಷಡ್ಯಂತ್ರ ನಡೆದಿದೆ. ಅವರ ಮೇಲೆ ಹಲ್ಲೆ ಕೂಡ ನಡೆಯಬಹುದು ಎಂದು ನನಗೆ ಮಾಹಿತಿ ದೊರೆತಿದೆ. ಕ್ಷೇತ್ರದ ಜನರ ಹಿತಕ್ಕಾಗಿ ಶಾಸಕ ಸ್ಥಾನ ಮಾಡಿದ ಸುಧಾಕರ್ ಅವರನ್ನು ಜನರು ಬೆಂಬಲಿಸಬೇಕು. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಇದರಿಂದ ಸಹಕಾರಿಯಾಗಲಿದೆ’ ಎಂದು ಹೇಳಿದರು.

ಸಭೆಯಲ್ಲಿ ಅಪ್ಪಾಲು ಮಂಜಣ್ಣ, ಶ್ವೇತಾ ಮಂಜುನಾಥ್, ಬಾಬು ಮುಜಾಮಿಲ್, ರಘು, ಆಯುಬ್, ನಾರಾಯಣಸ್ವಾಮಿ, ಮಣಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.