ADVERTISEMENT

ಸ್ಮಶಾನಕ್ಕೆ ಸ್ಥಳ ಕಾಯ್ದಿರಿಸಲು ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2021, 6:32 IST
Last Updated 29 ಡಿಸೆಂಬರ್ 2021, 6:32 IST
ಚಿಂತಾಮಣಿ ತಾಲ್ಲೂಕಿಲ್ಲಿ ದಲಿತರ ಸ್ಮಶಾನಕ್ಕಾಗಿ ಸ್ಥಳ ಒದಗಿಸಿಕೊಡಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಮಂಗಳವಾರ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಚಿಂತಾಮಣಿ ತಾಲ್ಲೂಕಿಲ್ಲಿ ದಲಿತರ ಸ್ಮಶಾನಕ್ಕಾಗಿ ಸ್ಥಳ ಒದಗಿಸಿಕೊಡಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಮಂಗಳವಾರ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಚಿಂತಾಮಣಿ: ದಲಿತರ ಸ್ಮಶಾನಕ್ಕಾಗಿ ಕಾಯ್ದಿರಿಸಿದ್ದ ಗೋಮಾಳ ಜಮೀನು ಒತ್ತುವರಿ ತೆರವುಗೊಳಿಸಿ, ಸುತ್ತಲೂ ಆವರಣ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಮಂಗಳವಾರ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

‘ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ದಲಿತರು ಮೃತಪಟ್ಟರೆ ಹೂಳಲು ತೊಂದರೆಯಾಗುತ್ತಿದೆ. ನಗರದ ಹೊರವಲಯದ ಕನಂಪಲ್ಲಿ ಗ್ರಾಮದಲ್ಲಿ ದಲಿತರ ಸ್ಮಶಾನ ಜಾಗ ಸರ್ವೆ ನಂ 90ರಲ್ಲಿ 4 ಎಕರೆ 4 ಗುಂಟೆ ಜಮೀನು ಒತ್ತುವರಿಯಾಗಿದೆ. 2021ನೇ ಅಕ್ಟೋಬರ್ 12 ರಂದು ವ್ಯಕ್ತಿಯೊಬ್ಬ ಮೃತಪಟ್ಟಿದ್ದರು. ಶವಸಂಸ್ಕಾರ ಸಮಯದಲ್ಲಿ 10 ದಿನಗಳ ಒಳಗಾಗಿ ಸ್ಮಶಾನದ ಸಮಸ್ಯೆಯನ್ನು ಬಗೆಹರಿಸಿಕೊಡುವುದಾಗಿ ನೀಡಿದ್ದ ಆಶ್ವಾಸನೆ ಸುಳ್ಳಾಗಿದೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ತಾಲ್ಲೂಕಿನ ಚಿಲಕಲನೇರ್ಪು ಹೋಬಳಿಯ ನಂದನಹೊಸಹಳ್ಳಿ ಗ್ರಾಮದ ಸರ್ವೆ ನಂ 254ರಲ್ಲಿ 3ಎಕರೆ 12 ಗುಂಟೆ ಜಮೀನು ಸರ್ಕಾರಿ ಗೋಮಾಳವಾಗಿದೆ. ಇದರಲ್ಲಿ 5-6 ಗುಂಟೆ ಜಮೀನನ್ನು ಮಾತ್ರ ಪರಿಶಿಷ್ಟ ಜಾತಿ ಮತ್ತು ಪಂಗಡದ ಸ್ಮಶಾನಕ್ಕಾಗಿ ಪೂರ್ವಿಕರು ಉಪಯೋಗಿಸಿಕೊಳ್ಳುತ್ತಿದ್ದರು. ಸಂಪೂರ್ಣ ಜಮೀನನ್ನು ಬಲಾಢ್ಯರು ಒತ್ತುವರಿ ಮಾಡಿದ್ದಾರೆ. ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಶವಸಂಸ್ಕಾರಕ್ಕೆ ಸ್ಥಳವೇ ಇಲ್ಲ’ ಎಂದು ದೂರಿದರು.

ADVERTISEMENT

ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ಗೋಮಾಳ ಜಮೀನುಗಳಲ್ಲಿ 2 ಎಕರೆ ಜಮೀನನ್ನು ಸ್ಮಶಾನಕ್ಕೆ ಕಾಯ್ದಿರಿಸಬೇಕು. ಕಾಯ್ದಿರಿಸಿದ್ದ ಜಮೀನುಗಳ ಒತ್ತುವರಿ ತೆರವುಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ತಹಶೀಲ್ದಾರ್ ಹನುಮಂತರಾಯಪ್ಪ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಶೀಘ್ರವಾಗಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

ನಗರಸಭೆ ಸದಸ್ಯ ಕೆ.ವಿ.ರೆಡ್ಡಪ್ಪ, ಮುಖಂಡ ಕೆ.ಎನ್.ಮುನಿರಾಜು, ಸಿ.ಜನಾರ್ದನ ಬಾಬು, ಮಂಜುನಾಥ್, ಶ್ರೀನಿವಾಸ್, ವೆಂಕಟೇಶಮೂರ್ತಿ ರೂಪಮ್ಮ, ಕೃಷ್ಣಪ್ಪ, ವಿಜಯಕುಮಾರ್, ಲಲಿತಮ್ಮ, ಮುನಿಯಮ್ಮ, ಜ್ಯೋತಿ, ನಾರಾಯಣಮ್ಮ, ಲಕ್ಷ್ಮಿದೇವಮ್ಮ, ಹನುಮಕ್ಕ, ಎಂ.ವಿ.ಧನಲಕ್ಷ್ಮಿ, ಶಿವಕುಮಾರ್, ಕೆ.ಸುನಿಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.