ADVERTISEMENT

ರೈತರಿಂದ ಪರಿಕರಗಳ ಮಾರಾಟ

ರೈತರ ಸಮಾವೇಶದಲ್ಲಿ ಶಾಸಕ ಸುಬ್ಬಾರೆಡ್ಡಿ ವಿಷಾದ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 2:27 IST
Last Updated 20 ನವೆಂಬರ್ 2020, 2:27 IST
ಬಾಗೇಪಲ್ಲಿ ತಾಲ್ಲೂಕು ಕೃಷಿ ಇಲಾಖೆಯಿಂದ ಅರ್ಹ ಫಲಾನುಭವಿ ರೈತರಿಗೆ ಪರಿಕರಗಳನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ವಿತರಿಸಿದರು
ಬಾಗೇಪಲ್ಲಿ ತಾಲ್ಲೂಕು ಕೃಷಿ ಇಲಾಖೆಯಿಂದ ಅರ್ಹ ಫಲಾನುಭವಿ ರೈತರಿಗೆ ಪರಿಕರಗಳನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ವಿತರಿಸಿದರು   

ಬಾಗೇಪಲ್ಲಿ: ರೈತರು ಸರ್ಕಾರದ ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಳ್ಳುವುದು ಬೇಡ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮನವಿ ಮಾಡಿದರು.

ತಾಲ್ಲೂಕು ಕೃಷಿ ಇಲಾಖೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರೈತರ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕೆಲ ರೈತರು ಸರ್ಕಾರದ ಅನುದಾನ
ಗಳನ್ನು ಹಾಗೂ ಪರಿಕರಗಳನ್ನು ಪಡೆದು ಮಾರಾಟ ಮಾಡಿಕೊಳ್ಳುತ್ತಿರುವುದು ವಿಷಾದನೀಯವಾಗಿದೆ. ರೈತರು ಬೆಳೆಗಳಿಗೆ ಹೆಚ್ಚಾಗಿ ರಾಸಾಯನಿಕ ಗೊಬ್ಬರಗಳಿಗಿಂತ ಸಾವಯುವ ಗೊಬ್ಬರಗಳನ್ನು ಹಾಕಿ ಉತ್ತಮ ಇಳುವರಿಯನ್ನು ಪಡೆಯಬೇಕು’ ಎಂದರು.

ADVERTISEMENT

‘ರಾಸಾಯನಿಕ ಸಿಂಪಡಣೆಯಿಂದ ಅನಾರೋಗ್ಯ ಹೆಚ್ಚಾಗುತ್ತದೆ. ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳಿಂದ ಹಾಗೂ ಕೃಷಿ ತಜ್ಞರಿಂದ ಹೆಚ್ಚಾಗಿ ಮಾಹಿತಿಗಳನ್ನು ಪಡೆದು, ಉತ್ತಮವಾದ ಪೌಷ್ಟಿಕಾಂಶಗಳುಳ್ಳ ಬೆಳೆಗಳನ್ನು ಬೆಳೆಯಬೇಕು’ ಎಂದು ಕರೆ ನೀಡಿದರು.

‘ಸರ್ಕಾರಗಳಿಂದ ಬರುವ ವಿಮೆ ಸೌಲಭ್ಯ ಹಾಗೂ ಸಾಲ, ಸಬ್ಸಿಡಿ ಸೌಲಭ್ಯಗಳನ್ನು ಪಡೆಯಬೇಕು. ನರೇಗಾ ಕಾಮಗಾರಿಯನ್ನು ರೈತರು ಸಮರ್ಪಕವಾಗಿ ಬಳಿಸಿಕೊಳ್ಳಬೇಕು. ರೈತರು ತಮ್ಮ ಹೊಲ-ಗದ್ದೆಗಳಲ್ಲಿ ಕೆಲಸ ಮಾಡಿಕೊಂಡರೆ ಸರ್ಕಾರ ಹಣ ನೀಡುತ್ತದೆ. ಇದರಿಂದ ರೈತರು ಪ್ರಗತಿ ಹೊಂದಲು ಸಾಧ್ಯವಾಗುತ್ತದೆ. ನರೇಗಾದ ಕೂಲಿ ಹಣ ಹಾಗೂ ಪರಿಕರಗಳ ಬಿಲ್ ಗಳು ಬರದಿದ್ದಲ್ಲಿ ನನ್ನ ಗಮನಕ್ಕೆ ತಂದರೆ, ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಬಿಲ್ ಗಳನ್ನು ಸಮರ್ಪಕವಾಗಿ ಮಾಡಿಸಲಾಗುವುದು’ ಎಂದು ತಿಳಿಸಿದರು.

ಕೃಷಿ ವಿಜ್ಞಾನಿ ಡಾ.ವಿಶ್ವನಾಥ್ ಅವರು ಸಮಗ್ರ ಕೃಷಿಯಡಿಯಲ್ಲಿ ಉತ್ತಮವಾದ ಬೆಳೆಗಳನ್ನು ಬರಲು, ಗೊಬ್ಬರಗಳ ಬಳಕೆಯ ಬಗ್ಗೆ ರೈತರಿಗೆ ತಿಳಿಸಿದರು.

ಸಸ್ಯ ಸಂರಕ್ಷಣೆ ಯೋಜನೆಯಡಿಯಲ್ಲಿ ಸುರಕ್ಷಿತ ಕೀಟನಾಶಕದ ಬಳಕೆ ಹಾಗೂ ಆತ್ಮಯೋಜನೆಯಡಿ ಸಮಗ್ರ ಕೃಷಿ ಪದ್ಧತಿಗಳ ಬಗ್ಗೆ ರೈತರಿಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ವಿವಿಧ ಯೋಜನಯಡಿಯಲ್ಲಿ ಪ್ರಗತಿಪರ ರೈತರಿಗೆ ಹಾಗೂ ಕೃಷಿ ಬಳಕೆಯ ಪರಿಕರಗಳನ್ನು ಅರ್ಹ ಫಲಾನುಭವಿಗಳಿಗೆ ಚೆಕ್ ಗಳನ್ನು ಹಾಗೂ ಪರಿಕರಗಳನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ವಿತರಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮೀನರಸಿಮಹಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಆರ್.ನರೇಂದ್ರಬಾಬು, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವಿ.ಮಂಜುನಾಥ್, ಕೃಷಿ ಇಲಾಖೆ ಉಪನಿರ್ದೇಶಕಿ ಎಲ್.ರೂಪ, ತಾಲ್ಲೂಕು ಸಹಾಯಕ ನಿರ್ದೇಶಕ ಮಂಜುನಾಥ್, ಪಿಎಲ್‌ಡಿ ಬ್ಯಾಂಕಿನ ಉಪಾಧ್ಯಕ್ಷ ಪ್ರಭಾಕರರೆಡ್ಡಿ, ಮುಖಂಡ ಶಿವರಾಮರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.