ಚಿಕ್ಕಬಳ್ಳಾಪುರ: ಲಾಕ್ಡೌನ್ ಕಾರಣಕ್ಕೆ ವಿಳಂಬಗೊಂಡಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಜಿಲ್ಲೆಯಲ್ಲಿ ಕೋವಿಡ್ ಭೀತಿ, ಪೋಷಕರ ಆತಂಕದ ನಡುವೆ ಸುಸೂತ್ರವಾಗಿ ನಡೆವು. ಶುಕ್ರವಾರ ನಡೆದ ತೃತೀಯ ಭಾಷೆ ಪರೀಕ್ಷೆಯೊಂದಿಗೆ ಒಟ್ಟಾರೆ ಪರೀಕ್ಷೆ ಪ್ರಕ್ರಿಯೆ ಸಾಂಗವಾಗಿ ಕೊನೆಗೊಂಡಿತು.
ಶುಕ್ರವಾರ ನಡೆದ ಹಿಂದಿ ಪರೀಕ್ಷೆಗೆ ಜಿಲ್ಲೆಯಲ್ಲಿ 15,885 ಹೊಸ ವಿದ್ಯಾರ್ಥಿಗಳು, 357 ಖಾಸಗಿ ನೂತನ ಪುನರಾವರ್ತಿತ ಅಭ್ಯರ್ಥಿಗಳು ಸೇರಿ ಒಟ್ಟು 16,242 ಜನರು ನೋಂದಾಯಿಸಿಕೊಂಡಿದ್ದರು. ಈ ಪೈಕಿ 15,538 ಮಂದಿ ಪರೀಕ್ಷೆಗೆ ಹಾಜರಾದರೆ, 704 ಜನರು ಪರೀಕ್ಷೆಗೆ ಗೈರಾದರು.
ಪರೀಕ್ಷೆಗಾಗಿ ಜಿಲ್ಲೆಯಲ್ಲಿ 64 ಕೇಂದ್ರಗಳನ್ನು ತೆರೆಯಲಾಗಿತ್ತು. ಈ ಬಾರಿ ಒಂದೇ ಒಂದು ಡಿಬಾರ್, ಅಹಿತಕರ ಪ್ರಕರಣಗಳು ವರದಿಯಾಗಿಲ್ಲ. ಪರೀಕ್ಷೆಗೆ ಹಾಜರಾದ ಯಾವೊಬ್ಬ ವಿದ್ಯಾರ್ಥಿಯ ಆರೋಗ್ಯದಲ್ಲಿ ಏರುಪೇರಾಗದಿರುವುದು ಅಧಿಕಾರಿಗಳು ಮತ್ತು ಪೋಷಕರ ವಲಯದಲ್ಲಿ ನೆಮ್ಮದಿ ತಂದಿದೆ.
ಕೋವಿಡ್ ಭಯದ ಕಾರಣಕ್ಕೆ ಈ ಬಾರಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರ ಪ್ರವೇಶಕ್ಕೂ ಮುನ್ನ ಆರೋಗ್ಯ ತಪಾಸಣಾ ವ್ಯವಸ್ಥೆ ಮಾಡಲಾಗಿತ್ತು. ಆದಕ್ಕಾಗಿಯೇ ವಿದ್ಯಾರ್ಥಿಗಳು ಪ್ರತಿ ಪರೀಕ್ಷೆಗೆ ನಿಗದಿತ ಸಮಯಕ್ಕಿಂತ ಎರಡು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಿ, ತಪಾಸಣೆಗೆ ಒಳಗಾಗಿ ಪರೀಕ್ಷೆ ಬರೆದರು.
ಕೋವಿಡ್ ಕಾರಣಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಎರಡು ಮಾಸ್ಕ್ ನೀಡಲಾಗಿತ್ತು. ಪ್ರತಿ ಕೇಂದ್ರದಲ್ಲಿ ವಿದ್ಯಾರ್ಥಿಗಳ ತಪಾಸಣೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸುವ ಜತೆಗೆ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು.
ಪರೀಕ್ಷೆಗಾಗಿ ಜಿಲ್ಲೆಯಲ್ಲಿ 986 ಕೊಠಡಿಗಳನ್ನು ಬಳಸಲಾಗಿತ್ತು. ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಪ್ರತಿ ಪರೀಕ್ಷೆಗೂ ಮುನ್ನ ಅವುಗಳನ್ನು ವೈರಸ್ ನಾಶಕ ದ್ರಾವಣ ಸಿಂಪಡಿಸಿ ಸಜ್ಜಗೊಳಿಸಲಾಗುತ್ತಿತ್ತು. ಕೋವಿಡ್ ಸೋಂಕಿತ ಪ್ರದೇಶದ ಮತ್ತು ಹೊರ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಕೊಠಡಿಗಳ ವ್ಯವಸ್ಥೆ ಮಾಡಲಾಗಿತ್ತು.
ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರಲು ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಕೆಎಸ್ಆರ್ಟಿಸಿ, ಖಾಸಗಿ ಸೇರಿ 128 ಬಸ್ಗಳ ವ್ಯವಸ್ಥೆ ಮಾಡಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.