ಬಾಗೇಪಲ್ಲಿ: ಕೊರೊನಾ ಹೆಚ್ಚುತ್ತಿರುವ ಸಂದರ್ಭದಲ್ಲಿ ಎಲ್ಲ ಶೈಕ್ಷಣಿಕ ಪರೀಕ್ಷೆಗಳನ್ನು ರದ್ದುಪಡಿಸಬೇಕು. 6 ತಿಂಗಳ ಕಾಲ ಶೈಕ್ಷಣಿಕ ಶುಲ್ಕಗಳನ್ನು ಮನ್ನಾ ಮಾಡಬೇಕು. ಎಲ್ಲ ವಿದ್ಯಾರ್ಥಿಗಳ ಮನೆಗೆ ಮಧ್ಯಾಹ್ನದ ಬಿಸಿಊಟವನ್ನು ಸರಬರಾಜು ಮಾಡಬೇಕು ಎಂದು ಎಸ್ಎಫ್ಐ ಜಿಲ್ಲಾಧ್ಯಕ್ಷ ಎ.ಸೋಮಶೇಖರ್ ಒತ್ತಾಯಿಸಿದರು.
ಕೋವಿಡ್-19 ಸೋಂಕು ಸಂದರ್ಭದಲ್ಲಿ ವಿದ್ಯಾರ್ಥಿ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸಬೇಕು ಎಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ) ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಬುಧವಾರ ತಾಲ್ಲೂಕು ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ
ಮಾತನಾಡಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಮೇಲೆ ಬೀರುವ ತೊಂದರೆಗಳನ್ನು ಬಗೆಹರಿಸುವಂತೆ ರಾಜ್ಯದಾದ್ಯಾಂತ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಕೇರಳ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರವು ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ 10 ಕೆ.ಜಿ ಆಹಾರ ಧಾನ್ಯಗಳನ್ನು 6 ತಿಂಗಳು ವಿತರಿಸಬೇಕು. ₹7,500ನ್ನು ವಿದ್ಯಾರ್ಥಿ ಕುಟುಂಬಗಳಿಗೆ ವಿತರಿಸಬೇಕು. ಹಾಗೂ ಪ್ರೀಕೆಜಿಯಿಂದ ಕಾಲೇಜು ಶಿಕ್ಷಣದವರಿಗೂ ಆನ್ಲೈನ್ ತರಗತಿ ಕಡ್ಡಾಯ ಮಾಡಬಾರದು ಎಂದರು.
ಎಸ್ಎಫ್ಐ ತಾಲ್ಲೂಕು ಅಧ್ಯಕ್ಷ ವಿ.ಸತೀಶ್ ಮಾತನಾಡಿ, ‘ಉದ್ಯೋಗ ನಷ್ಟ, ಬೆಳೆ ಹಾನಿ, ಲಾಕ್ಡೌನ್ ಸಂಕಷ್ಟದಿಂದ ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಶುಲ್ಕಗಳು ಕಟ್ಟಲು ಆಗುತ್ತಿಲ್ಲ. ಶಿಕ್ಷಣಕ್ಕೆ ನೀಡುವ ವಿದ್ಯಾರ್ಥಿ ವೇತನ, ಫೆಲೋಶಿಪ್ಗಳನ್ನು ಅವಲಂಬಿಸಿದ್ದಾರೆ. ವಿಶ್ವವಿದ್ಯಾಲಯಗಳ ಯುಜಿಸಿ ಮತ್ತು ಉಪಕುಲಪತಿಗಳು ಫೆಲೋಶಿಪ್ಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು
ಒತ್ತಾಯಿಸಿದರು.
ಶಿಕ್ಷಣ ಸಂಸ್ಥೆಗಳ, ವಿದ್ಯಾಲಯಗಳಲ್ಲಿ ಕೆಲಸ ಮಾಡುವ ಅತಿಥಿ ಶಿಕ್ಷಕರು, ಉಪನ್ಯಾಸಕರು, ಸಿಬ್ಬಂದಿಯವರ ಬಾಕಿ ಇರುವ ವೇತನ ಬಿಡುಗಡೆ ಮಾಡಬೇಕು. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸ್ಥಳಾಂತರ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಸ್ಎಫ್ಐ ತಾಲ್ಲೂಕು ಉಪಾಧ್ಯಕ್ಷ ಬಿ.ವಿಜಯ್ ಕುಮಾರ್, ದಿವಾಕರ್, ರಾಕೇಶ್, ರಾಜೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.