ಶಿಡ್ಲಘಟ್ಟ: ತಾಲ್ಲೂಕಿನ ರಾಯಪ್ಪನಹಳ್ಳಿಯ ಡಾ.ಆರ್.ಎ.ನವೀನ್ ಕುಮಾರ್ ಬೆಂಗಳೂರಿನ ವಿಕ್ಟೊರಿಯಾ ಆಸ್ಪತ್ರೆಯ ಕೋವಿಡ್ 19 ವಾರ್ಡ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ನವೀನ್ ಅವರು ಸುಮಾರು 300ರಿಂದ 400 ಸೋಂಕಿತರಿಗೆ ಚಿಕಿತ್ಸೆ ನೀಡಿದ್ದಾರೆ. ಅವರಲ್ಲಿ ಅನೇಕರು ಗುಣಮುಖರಾಗಿದ್ದು, ಸದ್ಯ
150 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
‘ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವಾಗ ಮಾನಸಿಕ ಒತ್ತಡದ ಜೊತೆಗೆ ದೈಹಿಕ ಒತ್ತಡವಿರುತ್ತದೆ. ಒಮ್ಮೆ ರಕ್ಷಾಕವಚ ಧರಿಸಿದರೆ 6ರಿಂದ 7 ಗಂಟೆ ಕೆಲಸ ಮಾಡುತ್ತೇವೆ. ಪಿಪಿಇ ಕಿಟ್ ಧರಿಸಿದಾಗ ಏನೂ ಸೇವಿಸುವಂತಿಲ್ಲ. ಮೂತ್ರ ವಿಸರ್ಜನೆಗೂ ಹೋಗುವಂತಿಲ್ಲ. ಬೇಸಿಗೆಯಲ್ಲಿ ಉಸಿರಾಡಲು ಕಷ್ಟವಾಗುತ್ತದೆ. ಆದರೂ ಅನಿವಾರ್ಯ’ ಎಂದು ನವೀನ್ ಅನುಭವ ಹಂಚಿಕೊಂಡರು.
ತಾಯಿ ಮತ್ತು ಮಗನಿಗೆ ಸೋಂಕು ತಗುಲಿತ್ತು. ತಾಯಿ ಗುಣಮುಖರಾಗಿ ತೆರಳಿದ ನಂತರ ಏಳು ವರ್ಷದ ಬಾಲಕ ಒಬ್ಬನೇ ಇದ್ದ. ಆತನಿಗೆ ನಾವೇ ಕುಟುಂಬದ ಸದಸ್ಯರಾಗಿದ್ದೆವು. ಅವನೊಂದಿಗೆ ಹೆಚ್ಚು ಕಾಲ ಕಳೆಯುತ್ತಿದ್ದೆವು. ರೋಗಿಗಳೊಂದಿಗೆ ನಾವು ಭಾವನಾತ್ಮಕವಾಗಿ ಬೆರೆತುಬಿಡುತ್ತೇವೆ. ರೋಗಿಗಳು ಗುಣಮುಖರಾಗಿ ಸಂತಸದಿಂದ ಹೋಗುವಾಗ ಅವರನ್ನು ಕಂಡು ನಮಗೂ ಸಾರ್ಥಕ ಭಾವ ಮೂಡುತ್ತದೆ ಎಂದರು.
ರಾಜ್ಯದಲ್ಲಿ ಸೋಂಕಿನಿಂದ ಗುಣಮುಖರಾಗುವವರ ಸಂಖ್ಯೆ ಹೆಚ್ಚಿದೆ. ಶೇ 3ರಿಂದ 4ರಷ್ಟು ರೋಗಿಗಳು ಸಾಯುತ್ತಾರೆ. ಇನ್ನುಳಿದಂತೆ ಭಯಪಡುವ ಅಗತ್ಯವಿಲ್ಲ. ವಯಸ್ಸಾದವರು ಅದರಲ್ಲೂ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ ಇರುವವರು ಗುಣಮುಖರಾಗಿದ್ದಾರೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.