ಶಿಡ್ಲಘಟ್ಟ: ಕೆರೆಗಳಲ್ಲಿ ತ್ಯಾಜ್ಯವನ್ನು ಸುರಿದು ಮಲಿನ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಅವರಿಗೆ ಸೋಮವಾರ ಮನವಿ ಮಾಡಿದರು.
ಚಿಕ್ಕಬಳ್ಳಾಪುರದಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿದ ರೈತ ಸಂಘದ ಪದಾಧಿಕಾರಿಗಳು, ‘ಜಿಲ್ಲೆಯ ಕೆಲವು ಕೆರೆಗಳಿಗೆ ಕೆಲವರು ತ್ಯಾಜ್ಯಗಳನ್ನು ಸುರಿದ ಮಲಿನ ಮಾಡುತ್ತಿದ್ದಾರೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಕೆರೆಗಳು ಕಲುಷಿತವಾಗಿ, ಪರಿಸರ ಕೆಡುತ್ತಿದೆ. ಕೆರೆಗಳಿಗೆ ತ್ಯಾಜ್ಯ ಸುರಿಯುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಬೇಕು’ ಎಂದು ಒತ್ತಾಯಿಸಿದರು.
ರೈತರಿಂದ ಬಲವಂತವಾಗಿ ಸಾಲ ವಸೂಲಾತಿ ಮಾಡಬಾರದು ಎಂದು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ್ದರೂ, ಜಿಲ್ಲೆಯ ಕೆಲವು ಖಾಸಗಿ ಫೈನಾನ್ಸ್ ಸಂಸ್ಥೆಗಳು, ಸಾಲ ವಸೂಲಾತಿ ನೆಪದಲ್ಲಿ ಮಹಿಳೆಯರಿಗೆ ಕಿರುಕುಳು ನೀಡುತ್ತಿವೆ. ಆರ್ಬಿಐನ ಸುತ್ತೋಲೆಗಳನ್ನು ಗಾಳಿಗೆ ತೂರಿ ಬಡವರ ರಕ್ತ ಹೀರುತ್ತಿವೆ. ಅಂಥ ಖಾಸಗಿ ಬ್ಯಾಂಕ್ ಮತ್ತು ಸಂಸ್ಥೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದರು.
ರೈತರು ಮತ್ತು ಮಹಿಳೆಯರ ಪರವಾಗಿ ಕೆಲಸ ಮಾಡಬೇಕಿರುವ ಕೆಲವು ಪೊಲೀಸರು ಸಹ, ಖಾಸಗಿ ಫೈನಾನ್ಸ್ಗಳ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಸಾಲಗಾರರು ಆತ್ಮಹತ್ಯೆಗೆ ಶರಣಾಗುತ್ತಿರುವ ಘಟನೆಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ದೂರುದಾರರಿಗೆ ಸೂಕ್ತ ರಕ್ಷಣೆ ಒದಗಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಸಚಿವರಿಗೆ ಕೋರಿಕೊಂಡರು.
ಹಲವು ವರ್ಷಗಳಿಂದ ರೈತರ ಸ್ವಾಧೀನದಲ್ಲಿದ್ದು, ಕೃಷಿ ಮಾಡಿಕೊಂಡು ಮಂಜೂರಾತಿಗಾಗಿ ನಮೂನೆ 50, 51, 53ರ ಅಡಿ ರೈತರು ಅರ್ಜಿ ಸಲ್ಲಿಸಿದ್ದರೂ, ಈವರೆಗೆ ಮಂಜೂರಾತಿ ಮಾಡಿಲ್ಲ. ಹೀಗಾಗಿ, ಕೂಡಲೇ ಅರ್ಹ ಫಲಾನುಭವಿಗಳಿಗೆ ಭೂಮಿ ಮಂಜೂರು ಮಾಡಬೇಕು. ತಾಲ್ಲೂಕಿನಲ್ಲಿ ಬಗರ್ ಹುಕ್ಕುಂ ಸಾಗುವಳಿ ಸಮಿತಿ ರಚನೆಯಾಗದ ಕಾರಣ, ಅಲ್ಲಿನ ತಹಶೀಲ್ದಾರ್ ಅವರಿಗೆ ಮಂಜೂರು ಮಾಡಲು ಅವಕಾಶ ನೀಡಬೇಕು ಎಂದರು.
ಎಚ್.ಎನ್. ವ್ಯಾಲಿ ಯೋಜನೆಯ ನೀರು ಶಿಡ್ಲಘಟ್ಟದ ಕೆರೆಗಳಿಗೆ ಹರಿಸುತ್ತಿಲ್ಲ. ಕೆರೆಗಳು ಒಣಗುತ್ತಿವೆ. ಆದ್ದರಿಂದ ಸರ್ಕಾರದ ಎಚ್.ಎನ್.ವ್ಯಾಲಿ ಯೋಜನೆಯಂತೆ ತಾಲ್ಲೂಕಿನ ಬೆಳ್ಳೂಟಿ, ರಾಳ್ಳುಕುಂಟೆ, ಕೆರೆಗಳಿಗೆ ನೀರು ಬಿಡಬೇಕು. ಕೆರೆಗಳಲ್ಲಿನ ಜಾಲಿ ಗಿಡಗಳ ತೆರವಿಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಜಿಲ್ಲಾ ಕಾರ್ಯಾಧ್ಯಕ್ಷ ಎಚ್.ಎನ್.ಕದಿರೇಗೌಡ, ಶಿಡ್ಲಘಟ್ಟ ತಾಲ್ಲೂಕು ಅದ್ಯಕ್ಷ ಮುನೇಗೌಡ, ಕಾರ್ಯದರ್ಶಿ ನವೀನ್ ಕುಮಾರ್, ಆಂಜಿನಪ್ಪ, ಡಿ.ವಿ.ನಾರಾಯಣಸ್ವಾಮಿ ಕನ್ನಪನಹಳ್ಳಿ ಮಂಜುನಾಥ್, ಚೌಡಪ್ಪ, ಪ್ರದೀಪ್, ಚೆನ್ನಪ್ಪ, ಹಾಜರಿದ್ದರು.
‘13 ತಿಂಗಳಿನಿಂದ ಮೂಳೆ ತಜ್ಞರಿಲ್ಲ’
ಶಿಡ್ಲಘಟ್ಟ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ 13 ತಿಂಗಳಿನಿಂದ ಮೂಳೆ ವೈದ್ಯರಿಲ್ಲ. ಇದರಿಂದ ತುರ್ತು ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಹೊಗಬೇಕಾದ ಪರಿಸ್ಥಿತಿ ಇದೆ ಎಂದು ರೈತ ಸಂಘದ ಪದಾಧಿಕಾರಿಗಳು ದೂರಿದರು. ತಕ್ಷಣ ಮೂಳೆ ವೈದ್ಯರನ್ನು ನೇಮಕ ಮಾಡಬೇಕು. ಸ್ಕ್ಯಾನಿಂಗ್ ವೈದ್ಯರಿಲ್ಲದೆ ಸ್ಕ್ಯಾನಿಂಗ್ ಯಂತ್ರ ತುಕ್ಕು ಹಿಡಿಯುತ್ತಿದೆ. ಸ್ಕಾನಿಂಗ್ಗೆ ದೂರದ ಅಕ್ಕಪಕ್ಕದ ತಾಲ್ಲೂಕು ಜಿಲ್ಲೆಗಳ ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಾದ ಪರಿಸ್ಥಿತಿ ಇದೆ. ಸರ್ಕಾರಿ ಆಸ್ಪತ್ರೆಗೆ ನುರಿತ ಮೂಳೆ ವೈದ್ಯರನ್ನು ನೇಮಿಸಬೇಕು. ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ಪಲಿಚೆರ್ಲು ಗ್ರಾಮದಲ್ಲಿರುವ ಸರ್ಕಾರಿ ಆಸ್ಪತ್ರೆಗೆ 4 ತಿಂಗಳಿನಿಂದ ವೈದ್ಯರು ಬಾರದೆ ಆಸ್ಪತ್ರೆಗೆ ಬೀಗ ಹಾಕಲಾಗಿದೆ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.