ಶಿಡ್ಲಘಟ್ಟ: ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಮದ ರೈತ ಎಸ್.ಆರ್.ಮಂಜುನಾಥ್ ಅವರು ತಮ್ಮ ತೋಟದಲ್ಲಿ ಬೆಳೆದಿದ್ದ ಶಾಮಂತಿ ಹೂವು ಔಷಧಿ ಸಿಂಪಡಣೆ ನಂತರ ಏಕಾಏಕಿ ಬಾಡತೊಡಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಇದರಿಂದ ಹೂವು ಬೆಳೆದು ಲಾಭ ಗಳಿಸುವ ನಿರೀಕ್ಷೆಯಲ್ಲಿದ್ದ ರೈತ ಕಂಗಾಲಾಗಿದ್ದಾನೆ.
ಮಂಜುನಾಥ್ ಅವರು ತಮ್ಮ 25 ಗುಂಟೆ ಜಮೀನಿನಲ್ಲಿ ತ್ರಿಶಾಂಕಮ್ ಎಂಬ ತಳಿಯ ಶಾಮಂತಿ ಹೂ ಗಿಡ ನಾಟಿ ಮಾಡಿದ್ದರು. ಖಾಸಗಿ ಅಂಗಡಿಯಲ್ಲಿ ಖರೀದಿಸಿದ ಕೀಟ ನಾಶಕ ಸಿಂಪಡಣೆ ನಂತರ ಏಕಾಏಕಿ ಹೂ ಮತ್ತು ಗಿಡಗಳು ಬೆಂಕಿಗೆ ಸುಟ್ಟಂತೆ ಸುಟ್ಟು ಬಾಡತೊಡಗಿದ್ದವು.
ತೋಟಗಾರಿಕೆ, ಕೃಷಿ ಇಲಾಖೆ ಹಾಗೂ ಜಾಗೃತ ದಳದ ಅಧಿಕಾರಿಗಳು ತೋಟಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು. ಹೂವಿನ ಸಸಿ ತಂದ ವಿವರ, ಕೀಟ ನಾಶಕ ಖರೀದಿಸಿದ ದಾಖಲೆಗಳನ್ನು ಪರಿಶೀಲಿಸಿದರು. ಈ ಸಂಬಂಧ ಕಂಪನಿ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಕ್ರಮ ವಹಿಸುವುದಾಗಿ ಅಧಿಕಾರಿಗಳು ರೈತನಿಗೆ ಭರವಸೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.