ಚಿಂತಾಮಣಿ: ‘ನಮ್ಮ ಕುಟುಂಬದಲ್ಲಿ ಒಬ್ಬರು ವೈದ್ಯರಾಗಬೇಕು ಎಂದು ಕನಸು ಕಾಣುತ್ತಿದ್ದೆವು. ನಮ್ಮ ಕನಸ್ಸು ನುಚ್ಚು ನೂರಾಗಿದೆ’–ತಾಲ್ಲೂಕಿನ ಕುರುಟಹಳ್ಳಿ ಗ್ರಾಮದ ಕೃಷ್ಣಪ್ಪ ಅವರು ತಮ್ಮ ಮೊಮ್ಮಗನ ಶವದ ಮುಂದೆ ಬಿಕ್ಕಿ ಬಿಕ್ಕಿ ರೋದಿಸುತ್ತಿದ್ದರೆ ನೆರೆದಿದ್ದವರ ಕಣ್ಣಾಲಿಗಳಲ್ಲಿಯೂ ನೀರು ಜಿನುಗಿತ್ತು.
ಅಯ್ಯೊ, ಛೇ, ಎಂತಹ ದುರಂತ, ಹೀಗೆ ಆಗಬಾರದಿತ್ತು...ಹೀಗೆ ನೆರೆದಿದ್ದವರು ಸಹ ನೋವು ವ್ಯಕ್ತಪಡಿಸುತ್ತಿದ್ದರು.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬುಧವಾರ ಆರ್ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟ 11 ಮಂದಿಯಲ್ಲಿ ಚಿಂತಾಮಣಿ ತಾಲ್ಲೂಕಿನ ಇಬ್ಬರು ಯುವಕರೂ ಇದ್ದಾರೆ. ಈ ದುರಂತ ಈ ಎರಡು ಹಳ್ಳಿಗಳ ಜನರಷ್ಟೇ ಅಲ್ಲ ತಾಲ್ಲೂಕಿನ ಜನರಲ್ಲಿಯೂ ಬೇಸರಕ್ಕೆ ಕಾರಣವಾಗಿದೆ.
ತಾಲ್ಲೂಕಿನ ಗೋಪಲ್ಲಿ ಗ್ರಾಮದ ಪ್ರಜ್ವಲ್ (25) ಹಾಗೂ ಕುರುಟಹಳ್ಳಿ ಗ್ರಾಮದ ಕೆ.ಟಿ ಶ್ರವಣ್ (20) ಕಾಲ್ತುಳಿತದಲ್ಲಿ ಪ್ರಾಣಕಳೆದುಕೊಂಡವರು.
ಪ್ರಜ್ವಲ್ ಇತ್ತೀಚೆಗೆ ಎಂಜಿನಿಯರಿಂಗ್ ಮುಗಿಸಿ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದರು. ಶ್ರವಣ್ ಬೆಂಗಳೂರಿನ ಅಂಬೇಡ್ಕರ್ ದಂತ ವೈದ್ಯಕೀಯ ಕಾಲೇಜಿನಲ್ಲಿ ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಗೋಪಲ್ಲಿಯಲ್ಲಿ ಜನವೊ ಜನ: ಗೋಪಲ್ಲಿ ಗ್ರಾಮದ ಬಡ ಕುಟುಂಬದ ಗಣೇಶ್ ಮತ್ತು ಪವಿತ್ರಾ ದಂಪತಿ ಪುತ್ರ ಪ್ರಜ್ವಲ್ (25). ಪ್ರಜ್ವಲ್ಗೆ ತಂಗಿ ಸಹ ಇದ್ದಾರೆ.
ದಂಪತಿ ಕೂಲಿ ಮಾಡಿ ಇಬ್ಬರು ಮಕ್ಕಳಿಗೂ ಉತ್ತಮ ವಿದ್ಯಾಭ್ಯಾಸ ಕೊಡಿಸಿದ್ದಾರೆ. ಪ್ರಜ್ವಲ್ ಎಂಜಿನಿಯರಿಂಗ್ ಮುಗಿಸಿ ಇತ್ತೀಚೆಗೆ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು. ಪ್ರಜ್ವಲ್ ತಂಗಿ ಡಿಪ್ಲೊಮ ಪೂರ್ಣಗೊಳಿಸಿ ಎಂಜಿನಿಯರಿಂಗ್ಗೆ ದಾಖಲಾಗಲು ಸಿಇಟಿ ಬರೆದಿದ್ದಾರೆ.
ಪ್ರಜ್ವಲ್ ಕೆಲಸಕ್ಕೆ ಸೇರಿದ್ದು ತಂದೆ-ತಾಯಿಯಲ್ಲಿ ಬಹಳಷ್ಟು ಸಂಭ್ರಮಕ್ಕೆ ಕಾರಣವಾಗಿತ್ತು. ತಮ್ಮ ಕಷ್ಟ ದೂರವಾಗುತ್ತದೆ. ಮನೆಯ ಜವಾಬ್ದಾರಿ ವಹಿಸಿಕೊಳ್ಳುತ್ತಾನೆ. ತಂಗಿಯನ್ನು ಓದಿಸುತ್ತಾನೆ ಎನ್ನುವ ಕನಸು ಕಂಡಿದ್ದರು.
ಬುಧವಾರ ನಡೆದ ಘೋರ ದುರಂತ ತಂದೆ-ತಾಯಿಯ ಆಸೆಯನ್ನು ಚಿವುಟಿದೆ. ಈ ಕುಟುಂಬಕ್ಕೆ ಯಾವುದೇ ಆಸ್ತಿಯೂ ಇಲ್ಲ. ಬಡತನದ ಬೇಗೆಯಲ್ಲೇ ಮಕ್ಕಳನ್ನು ಬೆಳೆಸಿ ವಿದ್ಯಾವಂತರನ್ನಾಗಿ ಮಾಡಿದ್ದರು. ದುಡಿದು ತಮ್ಮನ್ನು ಸಾಕುತ್ತಾನೆ ಎನ್ನುವ ಪೋಷಕರ ಆಸೆಯು ಈಗ ನುಚ್ಚುನೂರಾಗಿದೆ.
ಪ್ರಜ್ವಲ್ ಪಾರ್ಥಿವ ಶರೀರ ಗ್ರಾಮಕ್ಕೆ ಬಂದ ಕೂಡಲೇ ಗ್ರಾಮದ ಜನರು ಅವರ ಮನೆ ಮುಂದೆ ಜಮಾಯಿಸಿದ್ದರು. ಮಧ್ಯಾಹ್ನ ಮೂರು ಗಂಟೆಗೆ ಅಂತ್ಯಕ್ರಿಯೆ ನಡೆಯಿತು.
ಮನೆಯವರ ಆಸೆಗೆ ಎಳ್ಳು ನೀರು: ನಗರ ಹೊರವಲಯದ ಕುರುಟಹಳ್ಳಿ ಗ್ರಾಮದ ಕೃಷಿಕರಾದ ತಿಮ್ಮಪ್ಪ ಮತ್ತು ಲಕ್ಷ್ಮಿದೇವಮ್ಮ ದಂಪತಿ ಎರಡನೇ ಪುತ್ರ ಕೆ.ಟಿ.ಶ್ರವಣ್. ಇವರ ತಾತ ಕೃಷ್ಣಪ್ಪ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾಗಿದ್ದಾರೆ.
ಹಿರಿಯ ಪುತ್ರ ಶ್ರೀಧರ್ ಕೃಷಿ ಪದವಿ ಮುಗಿಸಿ ಸ್ನಾತಕೋತ್ತರ ಪದವಿಗೆ ದಾಖಲಾಗಲು ಪ್ರವೇಶ ಪರೀಕ್ಷೆ ಬರೆದಿದ್ದಾರೆ. ಕೃಷಿಯಿಂದಲೇ ಜೀವನ ಸಾಗಿಸುವ ಕುಟುಂಬ ಇಬ್ಬರು ಮಕ್ಕಳಿಗೂ ಉನ್ನತ ವಿದ್ಯಾಭ್ಯಾಸ ಮಾಡಿಸುತ್ತಿದ್ದರು.
ಕೃಷ್ಣಪ್ಪ ಅವರಿಗೆ ತಮ್ಮ ಮೊಮ್ಮಕ್ಕಳಲ್ಲಿ ಒಬ್ಬರು ವೈದ್ಯರಾಗಬೇಕು ಎನ್ನುವ ಆಸೆ ಇತ್ತು. ಶ್ರವಣ್ ಬೆಂಗಳೂರಿನ ಅಂಬೇಡ್ಕರ್ ದಂತ ವೈದ್ಯಕೀಯ ಕಾಲೇಜಿನಲ್ಲಿ ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಗುರುವಾರ ಬೆಳಿಗ್ಗೆ ಶ್ರವಣ್ ಪಾರ್ಥಿವ ಶರೀರ ಗ್ರಾಮಕ್ಕೆ ತಲುಪುತ್ತಿದ್ದಂತೆ ಕುಟುಂಬಸ್ಥರ ದುಃಖ ಕಟ್ಟೆ ಒಡೆಯಿತು. ಕುಟುಂಬಸ್ಥರ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತು. ಅಜ್ಜಿ-ತಾತ, ತಂದೆ-ತಾಯಿ ಹಾಗೂ ಕುಟುಂಬದ ಪ್ರತಿಯೊಬ್ಬರೂ ಶವದ ಸುತ್ತ ಕುಳಿತು ರೋದಿಸುತ್ತಿದ್ದ ದೃಶ್ಯ ಮನಕಲುಕುವಂತಿತ್ತು.
ಇಡೀ ಗ್ರಾಮಸ್ಥರು ನೋವಿನಲ್ಲಿದ್ದರು. ಯಾರು ಯಾರನ್ನೂ ಸಂತೈಸಲಾರದ ನೀರವ ಮೌನ ಆವರಿಸಿತ್ತು. ಇಡೀ ಗ್ರಾಮದ ಎಲ್ಲರೂ ಸೇರಿ ಅಂತ್ಯಕ್ರಿಯೆ ನಡೆಸಿದರು.
‘ಸರ್ಕಾರದ ವೈಫಲ್ಯವೇ ದುರಂತಕ್ಕೆ ಕಾರಣ’
ಸರ್ಕಾರ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಬೇಜವಾಬ್ದಾರಿಯಿಂದ ಕಾರ್ಯಕ್ರಮ ರೂಪಿಸಿತು. ಕ್ರಿಕೆಟ್ ಪಂದ್ಯವಿದ್ದರೆ ಮಧ್ಯಾಹ್ನದಿಂದಲೇ ಪ್ರವೇಶ ನೀಡುತ್ತಾರೆ. ಇಲ್ಲಿ ಕೊನೆಯವರೆಗೂ ಪ್ರವೇಶ ನೀಡದೆ ಕಾರ್ಯಕ್ರಮದ ಅಂತಿಮ ಸಮಯದಲ್ಲಿ ಪ್ರವೇಶ ನೀಡಿದ್ದಾರೆ. ಗಂಟೆಗೊಂದು ನಿರ್ಧಾರ ಪರಿಸ್ಥಿತಿ ಅವಲೋಕಿಸುವಲ್ಲಿ ಆಡಳಿತಗಾರರ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಸರ್ಕಾರ ವೈಫಲ್ಯವೇ ದುರಂತಕ್ಕೆ ಕಾರಣ.
–ಕುರುಟಹಳ್ಳಿ ರಾಧಾಕೃಷ್ಣ ತಾ.ಪಂ ಮಾಜಿ ಸದಸ್ಯ
ಪ್ರಜ್ವಲ್ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಿ ನಡೆಯಬಾರದ ಘೋರ ದುರಂತ ನಡೆದಿದೆ. ಆ ಬಗ್ಗೆ ಮಾತನಾಡುವುದರಿಂದ ಯಾವ ಪ್ರಯೋಜನವೂ ಇಲ್ಲ. ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕು. ಬಡಕುಟುಂಬದ ಬೆನ್ನೆಲುಬಾಗಿದ್ದ ಯುವಕ ಅಕಾಲಿಕ ಮರಣಕ್ಕೆ ತುತ್ತಾಗಿದ್ದಾನೆ. ಹೆಣ್ಣು ಮಗಳಿದ್ದಾಳೆ. ಅವರಿಗೆ ಯಾವುದೇ ಆಸ್ತಿ ಇಲ್ಲ. ಸರ್ಕಾರ ಇನ್ನೂ ಹೆಚ್ಚಿನ ಪರಿಹಾರ ನೀಡಬೇಕು.
–ರಘುನಾಥರೆಡ್ಡಿ ಗೋಪಲ್ಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.