ADVERTISEMENT

ಅಂಗಡಿ ಮುಂದೆ ಸಾಬೂನು ಇಡಿ

ಎಪಿಎಂಸಿ ಯಾರ್ಡ್ ಹಮಾಲಿಗಳಿಗೆ ಸಾಮಾಗ್ರಿ ವಿತರಣೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 16:09 IST
Last Updated 31 ಮಾರ್ಚ್ 2020, 16:09 IST
ಚಿಂತಾಮಣಿಯ ಎಪಿಎಂಸಿ ಯಾರ್ಡ್‌ನಲ್ಲಿ ಮಂಗಳವಾರ ತಹಶೀಲ್ದಾರ್ ಎಸ್.ಎಲ್.ವಿಶ್ವನಾಥ್ ಉಚಿತವಾಗಿ ಮಾಸ್ಕ್ ವಿತರಿಸಿದರು
ಚಿಂತಾಮಣಿಯ ಎಪಿಎಂಸಿ ಯಾರ್ಡ್‌ನಲ್ಲಿ ಮಂಗಳವಾರ ತಹಶೀಲ್ದಾರ್ ಎಸ್.ಎಲ್.ವಿಶ್ವನಾಥ್ ಉಚಿತವಾಗಿ ಮಾಸ್ಕ್ ವಿತರಿಸಿದರು   

ಚಿಂತಾಮಣಿ: ನಗರದ ಎಪಿಎಂಸಿ ಯಾರ್ಡ್‌ನ ಅಂಗಡಿಗಳ ಮಾಲೀಕರು ಕಡ್ಡಾಯವಾಗಿ ಅಂಗಡಿಗಳ ಮುಂದೆ ನೀರು, ಸಾಬೂನು ಅನ್ನು ಇಡಬೇಕು. ಹಮಾಲಿಗಳು ಕೈತೊಳೆದುಕೊಂಡು ಬರುವಂತೆ ಪ್ರೇರೇಪಿಸಬೇಕು ಎಂದು ತಹಶೀಲ್ದಾರ್ ಎಸ್.ಎಲ್.ವಿಶ್ವನಾಥ್ ಸಲಹೆ ನೀಡಿದರು.

ನಗರದ ಎಪಿಎಂಸಿ ಯಾರ್ಡ್ ಹಾಗೂ ಸುತ್ತಮುತ್ತಲ ಕಾಲೋನಿಗಳಲ್ಲಿ ರೆಡ್ ಕ್ರಾಸ್ ಸಂಸ್ಥೆಯಿಂದ ನೀಡಿರುವ ಮಾಸ್ಕ್ ಮತ್ತು ಸಾಬೂನುಗಳನ್ನು ಹಮಾಲಿ ಮತ್ತು ಕೂಲಿಕಾರ್ಮಿಕರಿಗೆ ಮಂಗಳವಾರ ವಿತರಿಸಿ ಮಾತನಾಡಿದರು.

ಅಂಗಡಿ ಮಾಲೀಕರು ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಕೇವಲ ವ್ಯಾಪಾರದ ಒಂದೇ ಗುರಿಯಾಗಬಾರದು. ಹಮಾಲಿಗಳು, ಕೂಲಿ ಕಾರ್ಮಿಕರ ಆರೋಗ್ಯದ ಬಗ್ಗೆಯೂ ಗಮನಹರಿಸಬೇಕು. ಅಂಗಡಿಗಳ ಮುಂದೆ ಗ್ರಾಹಕರು ಮತ್ತು ಹಮಾಲಿಗಳ ಬರಲು ಹೋಗಲು ಚೌಕಗಳನ್ನು ಗುರುತಿಸಬೇಕು. ಅವರು ಚೌಕದಲ್ಲಿ ನಿಂತುಕೊಂಡು ಸಾಮಾಜಿಕ ಅಂತರವನ್ನು ಕಾಪಾಡುವಂತೆ ನೋಡಿಕೊಳ್ಳಬೇಕು. ಆಗಾಗ್ಗೆ ಸಾಬೂನು ಉಪಯೋಗಿಸಿ ಚೆನ್ನಾಗಿ ಕೈತೊಳೆದುಕೊಳ್ಳುವಂತೆ ಸಲಹೆ ನೀಡಬೇಕು ಎಂದು ಮನವಿ ಮಾಡಿದರು.

ADVERTISEMENT

ವರ್ತಕರು ಮನವಿಯನ್ನು ಕಾರ್ಯಗತಗೊಳಿಸದಿದ್ದರೆ ಅಂಗಡಿಗಳಿಗೆ ಬೀಗ ಜಡಿಯಲಾಗುವುದು. ಕೆಲಸ ಮಾಡುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ನಾಗರಿಕರು ಕಡ್ಡಾಯವಾಗಿ ಸರ್ಕಾರದ ನಿಯಮಗಳನ್ನು ಪಾಲಿಸಿ ಮನೆಗಳಲ್ಲಿರಬೇಕು. ಕೆಲವು ಕಡೆ ಅತ್ಯುತ್ಸಾಹದಿಂದ ಕೊರೊನಾ ಹೆಸರಿನಲ್ಲಿ ರಸ್ತೆಗಳಿಗೆ ಅಡ್ಡು ಹಾಕುವುದು ನಡೆಯುತ್ತಿದೆ. ಯಾರಿಗಾದರೂ ಹೆರಿಗೆ, ಹೃದಯಾಘಾತ, ಮತ್ತಿತರ ತುರ್ತು ಸಂದರ್ಭಗಳಲ್ಲಿ ತೊಂದರೆಯಾಗುತ್ತದೆ. ಹೀಗಾಗಿ ಸರ್ಕಾರಿ ನಿಯಮಗಳನ್ನು ಮೀರಿ ರಸ್ತೆಗಳಿಗೆ ತಡೆಯೊಡ್ಡಬಾರದು ಎಂದು ಸೂಚಿಸಿದರು.

ಸುತ್ತಮುತ್ತಲ ಕಾಲೋನಿಗಳಲ್ಲಿ ಸುತ್ತಾಡಿ ಮಾಸ್ಕ್ ವಿತರಿಸಿ, ಸ್ವಚ್ಛತೆಯನ್ನು ಕಾಪಾಡಬೇಕು. ಅನಗತ್ಯವಾಗಿ ಮನೆಗಳಿಂದ ಹೊರಬರಬಾರದು. ಗೌರಿಬಿದನೂರಿನಲ್ಲಿ ಆಗಿರುವಂತಹ ಅನಾಹುತವನ್ನು ತಾಲ್ಲೂಕಿನಲ್ಲಿ ಆಗಲು ಅವಕಾಶ ನೀಡಬಾರದು. ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ನಾಗರಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಎಪಿಎಂಸಿ ಅಧ್ಯಕ್ಷ ಎಂ.ಕೃಷ್ಣಮೂರ್ತಿ, ಪೌರಾಯುಕ್ತ ಹರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.