
ಪಾತಪಾಳ್ಯ (ಬಾಗೇಪಲ್ಲಿ): ತಾಲ್ಲೂಕಿನ ಪಾತಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಂಗಪ್ಪಗಾರಿಪಲ್ಲಿ ಗ್ರಾಮದ 6 ಮಂದಿಗೆ ಶುಕ್ರವಾರ ಮತ್ತು ಶನಿವಾರ ಹುಚ್ಚುನಾಯಿ ಕಚ್ಚಿದೆ.
ಗ್ರಾಮದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ ಎಂದು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಿದ್ದಾರೆ. 2 ದಿನಗಳಷ್ಟೇ ಪಂಚಾಯಿತಿಗೆ ಅಭಿವೃದ್ಧಿ ಅಧಿಕಾರಿ ವರ್ಗಾವಣೆ ಆಗಿ ಬಂದಿದ್ದಾರೆ. ಆದರೆ ಅಧಿಕಾರಿಗಳು, ಸಿಬ್ಬಂದಿ ಭೇಟಿ ಮಾಡಿ ಪರಿಶೀಲನೆ ಮಾಡಿಲ್ಲ. ಬೀದಿನಾಯಿ ಹಾವಳಿಗೆ ತಡೆ ಮಾಡಿಲ್ಲ. ಮನೆಗಳ, ರಸ್ತೆಗಳಲ್ಲಿ ಗುಂಪಾಗಿ ನಾಯಿಗಳ ಹಿಂಡು ಕಾಣಿಸುತ್ತಿವೆ. ಮಕ್ಕಳು, ಮಹಿಳೆಯರ, ವೃದ್ಧರ ಮೇಲೆ ದಾಳಿ ಮಾಡಿ ಕಚ್ಚಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ 3 ಜನರಿಗೆ ಮತ್ತು ಶನಿವಾರ ಬೆಳಿಗ್ಗೆ 3 ಜನರಿಗೆ ಹುಚ್ಚುನಾಯಿ ರೈತ, ಮಹಿಳೆಯರ ಮೇಲೆ ದಾಳಿ ಮಾಡಿವೆ. ಕೈ, ಕಾಲು, ಮುಖ, ಬೆನ್ನಿನ ಭಾಗಗಳಿಗೆ ಕಚ್ಚಿವೆ. ಗ್ರಾಮದ ಸುರೇಶ್ ಎಂಬುವವರು ಸ್ಥಳೀಯ ಆಶಾ ಕಾರ್ಯಕರ್ತೆಗೆ ಬೀದಿನಾಯಿ ಕಡಿತದ ಬಗ್ಗೆ ಮಾಹಿತಿ ತಿಳಿಸಿದ್ದಾರೆ. ಕೂಡಲೇ ಆಶಾಕಾರ್ಯಕರ್ತೆ ನಾಯಿ ಕಚ್ಚಿದವರನ್ನು ಪಾತಪಾಳ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆಸಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಶನಿವಾರ ಬೆಳಿಗ್ಗೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಾರ್ವಜನಿಕ ಆಸ್ಪತ್ರೆಗೆ ಆಗಮಿಸಿದ ರೈತ, ಮಹಿಳೆಯರನ್ನು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ ವಿಚಾರಿಸಿದರು.
ಪಟ್ಟಣ, ಗ್ರಾಮಗಳಲ್ಲಿ ಇತ್ತೀಚೆಗೆ ಬೀದಿನಾಯಿಗಳ ಹಾವಳಿ ಹೆಚ್ಚಾಗಿವೆ. ಬೀದಿನಾಯಿಗಳ ಹಾವಳಿ ತಡೆಯುವಂತೆ ಪುರಸಭೆ ಮತ್ತು ಗ್ರಾಮಪಂಚಾಯಿತಿಗೆ ಪತ್ರ ಬರೆಯಲಾಗುವುದು. ಸಿಂಗಪ್ಪಗಾರಿಪಲ್ಲಿ ಗ್ರಾಮದಲ್ಲಿ ಬೀದಿನಾಯಿ ಕಡಿತದಿಂದ 6 ಮಂದಿಗೆ ಗಾಯ ಆಗಿವೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೀದಿನಾಯಿ ಕಚ್ಚಿದರೆ, ಕೂಡಲೇ ವೈದ್ಯರಿಂದ ಪರೀಕ್ಷೆ ಮಾಡಿಸಬೇಕು ಎಂದು ಆರೋಗ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪಾತಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿನೋದ್ಕುಮಾರ್, ಸಿಬ್ಬಂದಿ ಪಕೃದ್ದೀನ್ಸಾಬ್, ಆಶಾ ಕಾರ್ಯಕರ್ತೆ ಲಕ್ಷ್ಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.