ಗೌರಿಬಿದನೂರು: ತಾಲ್ಲೂಕಿನ ಡಿ. ಪಾಳ್ಯ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವಸದಸ್ಯರ ಸಾಮಾನ್ಯ ಸಭೆಯು ಶನಿವಾರ ನಡೆಯಿತು.
ಸಂಘದ ಅಧ್ಯಕ್ಷ ತಿಪ್ಪಣ್ಣ ಮಾತನಾಡಿ, ‘ಉತ್ಪಾದಕರು ರಾಸುಗಳಿಗೆ ಪೌಷ್ಟಿಕ ಆಹಾರ ನೀಡುವ ಮೂಲಕ ಹಾಲಿನ ಗುಣಮಟ್ಟವನ್ನು ಕಾಪಾಡಬೇಕಾಗಿದೆ. ಸಾಕಾಣಿಕೆದಾರರು ರಾಸುಗಳ ಪೋಷಣೆಯನ್ನು ಸರಿಯಾಗಿ ಮಾಡಿದರೆ ಮಾತ್ರ ಗುಣಮಟ್ಟದ ಹಾಲು ಪಡೆಯಲು ಸಾಧ್ಯ. ಇದರಿಂದ ಸಂಘದ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ’ ಎಂದು ಹೇಳಿದರು.
ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಗಜರಾಜ್ ಶಿ. ರಣತೂರ್ ಮಾತನಾಡಿ, ಒಕ್ಕೂಟದಿಂದ ಸಿಗುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು.
ಕೋವಿಡ್ ಸಂದರ್ಭದಲ್ಲಿ ಒಕ್ಕೂಟವು ಹಾಲು ಉತ್ಪಾದಕರ ನೆರವಿಗೆ ಸದಾ ಬದ್ಧವಿದೆ. ಗುಣಮಟ್ಟದ ಹಾಲನ್ನು ನೀಡುವ ಮೂಲಕ ಸಂಘದ ಅಭಿವೃದ್ಧಿಗೆ ಎಲ್ಲ ಸದಸ್ಯರು ಶ್ರಮಿಸಬೇಕಿದೆ ಎಂದು ಹೇಳಿದರು.
ಸಭೆಯಲ್ಲಿ ಸಂಘಕ್ಕೆ ಹಾಲು ಪೂರೈಸುವ ಎಲ್ಲಾ ಹಾಲು ಉತ್ಪಾದಕರಿಗೆ 10 ಲೀಟರ್ ಸಾಮರ್ಥ್ಯದ ಸ್ಟೀಲ್ ಕ್ಯಾನ್ ವಿತರಿಸಲಾಯಿತು.
ಒಕ್ಕೂಟದ ವಿಸ್ತರಣಾಧಿಕಾರಿ ಕೆ.ಸಿ. ಕಿರಣ್ ಕುಮಾರ್, ಎ. ಮಂಜುನಾಥ್, ಸಂಘದ ಕಾರ್ಯಕಾರಿ ಮಂಡಳಿ ಸದಸ್ಯರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.