
ಚಿಂತಾಮಣಿ: ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜಾನಪದದ ಬಗ್ಗೆ ಆಸಕ್ತಿ ಮೂಡಿಸುವುದು ಹಾಗೂ ತಮ್ಮ ಪ್ರತಿಭೆಯನ್ನು ಹೊರಹಾಕಲು ವಿದ್ಯಾರ್ಥಿಗಳಿಗೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ ಎಂದು ಇಸಿಒ ನಾಗೇಶ್ ಹೇಳಿದರು.
ತಾಲ್ಲೂಕಿನ ಕೈವಾರ ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಶುಕ್ರವಾರ ಕೈವಾರ ಕೆಪಿಎಸ್ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರವಣಪ್ಪ ಮಾತನಾಡಿ, ಪ್ರತಿಭೆ ಯಾರೊಬ್ಬರ ಸ್ವತ್ತು ಅಲ್ಲ, ಅದು ಸಾಧಕನ ಆಸ್ತಿ. ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆ ಇರುತ್ತದೆ. ಅದನ್ನು ಹೊರತೆಗೆಯಲು ಪ್ರತಿಭಾ ಕಾರಂಜಿಯಂತಹ ವೇದಿಕೆ ಬೇಕು. ಆ ವೇದಿಕೆಯನ್ನು ಸರ್ಕಾರ ಕಲ್ಪಿಸಿದೆ ಎಂದು ಹೇಳಿದರು.
ಕೆಪಿಎಸ್ ಶಾಲೆಯ ಪ್ರಭಾರಿ ಮುಖ್ಯಶಿಕ್ಷಕ ಯಲ್ಲಪ್ಪ, ಸರ್ಕಾರಿ ಶಾಲಾ ಮಕ್ಕಳ ಪ್ರತಿಭೆಯನ್ನು ಗುರುತಿಸಲು ಸಹಕಾರಿಯಾಗಿದೆ ಎಂದರು.
ಸ್ಪಂದನ ಶಾಲೆಯ ಅಂಗವಿಕಲ ಮಕ್ಕಳ ನೃತ್ಯ ಮತ್ತು ಅಂಬೇಡ್ಕರ್ ಶಾಲೆಯ ಕೋಮಲ ಹಾಕಿದ ಸಾಲುಮರದ ತಿಮ್ಮಕ್ಕ ಛದ್ಮವೇಶ ನೋಡುಗರ ಗಮನ ಸೆಳೆಯಿತು. ಸಂಸ್ಕೃತ, ಅರೇಬಿಕ್ ಧಾರ್ಮಿಕ ಪಠಣ, ಕನ್ನಡ, ಇಂಗ್ಲಿಷ್, ಹಿಂದಿ ಭಾಷಣ, ಭಕ್ತಿ ಗೀತೆ, ಜಾನಪದ ಗೀತೆ, ಭಾವಗೀತೆ ಹಾಡುವ, ಕ್ಲೇ ಮಾಡೆಲಿಂಗ್, ಛದ್ಮವೇಶ, ಕವ್ವಾಲಿ, ಗಝಲ್, ಜಾನಪದ ನೃತ್ಯ, ಚಿತ್ರಕಲೆ ಮತ್ತು ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು.
ಚಂದ್ರಪ್ಪ, ಅಂಬರೀಶ್, ರಾಜೇಶ್, ರಾಯಲ್ ರಮೇಶ್, ಶ್ರೀನಿವಾಸ, ಬಾಲಕೃಷ್ಣ, ಶ್ರೀರಾಮ್, ಮಂಜು ಭಾರ್ಗವಿ, ಮಸ್ತಾನವಲ್ಲಿ, ಶ್ರೀಧರ್ ಹಿರೇಮಠ್, ದೇವಪ್ಪ, ನಾಗೇಶ್, ಮಂಜುನಾಥ್ ನಾರಾಯಣ, ನಾರಾಯಣಸ್ವಾಮಿ, ಮಂಜುಳಾ, ರಹೀಮ್ ಖಾನ್, ಎಜಾಜ್ ಬೇಗ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.