ಚಿಕ್ಕಬಳ್ಳಾಪುರ: ರಸ್ತೆ ಸುರಕ್ಷತೆ ಕುರಿತಂತೆ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಕೆಲಸ ಮಾಡುವ ಚಾಲಕರ, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿ ಮತ್ತು ಪ್ರಯಾಣಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಬಿಎಂಟಿಸಿಯ ಕನ್ನಡ ಕೂಟದ ಕಲಾವಿದರು ನಗರದ ವಾಪಸಂದ್ರದಲ್ಲಿರುವ ಕೆಎಸ್ಆರ್ಟಿಸಿ ಘಟಕ ಮತ್ತು ನಗರದಲ್ಲಿರುವ ನಿಲ್ದಾಣದಲ್ಲಿ ‘ಬದುಕಿ ಬದುಕಿಸು’ ಎಂಬ ನಾಟಕ ಪ್ರದರ್ಶಿಸಿದರು.
ಕೆಎಸ್ಆರ್ಟಿಸಿ ಕೇಂದ್ರ ಕಚೇರಿಯ ಅಧಿಕಾರಿ, ಹಿರಿಯ ಕಲಾವಿದ ಟಿ.ಎಂ.ಬಾಲಕೃಷ್ಣ ಅವರ ರಚಿಸಿ, ನಿರ್ದೇಶಿಸಿದ ಸುಮಾರು ಒಂದೂವರೆ ಗಂಟೆಯ ನಾಟಕ ಚಾಲಕರು, ನಿರ್ವಾಹಕರು ಹಾಗೂ ತಾಂತ್ರಿಕ ಸಿಬ್ಬಂದಿ ದುಶ್ಚಟಗಳಿಂದ ಅವರ ಕುಟುಂಬಗಳ ಮೇಲಾಗುವ ಪರಿಣಾಮ, ಕೌಟುಂಬಿಕ ಸಮಸ್ಯೆಗಳಿಂದ ವೃತ್ತಿಯ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿತು.
ಜತೆಗೆ ಪ್ರಯಾಣಿಕರ ಸುರಕ್ಷತೆಗೆ ತಾಂತ್ರಿಕ ಸಿಬ್ಬಂದಿ ಕೈಗೊಳ್ಳಬೇಕಾದ ಕ್ರಮಗಳು, ಸಿಬ್ಬಂದಿಯ ಜವಾಬ್ದಾರಿ, ರಸ್ತೆ ಸುರಕ್ಷತೆ ಕುರಿತು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿತು.
ನಗರದ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಕೆಎಸ್ಆರ್ಟಿಸಿಯಿಂದ ಪ್ರಯಾಣಿಕರಿಗೆ ಸಿಗುತ್ತಿರುವ ಸೌಲಭ್ಯ, ಕೆಎಸ್ಆರ್ಟಿಸಿ ವೈಶಿಷ್ಟ್ಯತೆ, ಹಿರಿಯ ನಾಗರಿಕರಿಗೆ ನೀಡುತ್ತಿರುವ ರಿಯಾಯಿತಿ ಸೇರಿದಂತೆ ಸುರಕ್ಷತೆಗಾಗಿ ಪ್ರಯಾಣಿಕರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳುವಳಿಕೆ ಮೂಡಿಸಿತು.
ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಬಸವರಾಜ್, ಸಂಚಲನಾಧಿಕಾರಿ ಮಂಜುನಾಥ, ತಾಂತ್ರಿಕ ಶಿಲ್ಪಿ ನವೀನ್, ಪ್ರಾದೇಶಿಕ ಸಾರಿಗೆ ಇಲಾಖೆ ವಾಹನ ನಿರೀಕ್ಷಕ ಕಮಲ್ ಬಾಬು, ಆಗ್ನಿ ಶಾಮಕ ಠಾಣೆ ಅಧಿಕಾರಿ ಬಸವರಾಜು, ಸಂಚಾರಿ ಠಾಣೆ ಪಿಎಸ್ಐ ಓಂಪ್ರಕಾಶಗೌಡ, ಕೆಎಸ್ಆರ್ಟಿಸಿ ಸ್ಥಳೀಯ ಡೀಪೋದ ಆಡಳಿತಾಧಿಕಾರಿ ಶಂಕರನಾರಾಯಣ, ಅಂಕಿಅಂಶ ಅಧಿಕಾರಿ ಶ್ರೀಧರ್, ಕಾರ್ಮಿಕ ಕಲ್ಯಾಣಾಧಿಕಾರಿ ಶಾಂತಾ, ಭದ್ರತಾ ಅಧಿಕಾರಿ ಉಮೇಶ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.