ADVERTISEMENT

ಚಿಕ್ಕಬಳ್ಳಾಪುರದ ಸಿಜೆಎಂ ಹಿರಿಯ ಶ್ರೇಣಿ ನ್ಯಾಯಾಲಯದ ಅಟೆಂಡರ್ ಅನುಮಾನಾಸ್ಪದ ಸಾವು

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2020, 14:59 IST
Last Updated 18 ಆಗಸ್ಟ್ 2020, 14:59 IST
ಪೊಲೀಸರು ಘಟನಾ ಸ್ಥಳದ ಪರಿಶೀಲನೆ ನಡೆಸಿದರು. ಒಳಚಿತ್ರದಲ್ಲಿ ಮೃತ ನವೀನ್
ಪೊಲೀಸರು ಘಟನಾ ಸ್ಥಳದ ಪರಿಶೀಲನೆ ನಡೆಸಿದರು. ಒಳಚಿತ್ರದಲ್ಲಿ ಮೃತ ನವೀನ್   

ಚಿಕ್ಕಬಳ್ಳಾಪುರ: ನಗರದ ಸಿಜೆಎಂ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ಮೈಸೂರು ಮೂಲದ ನವೀನ್ (32) ಎಂಬುವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವುದು ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

ಅವಿವಾಹಿತರಾಗಿರುವ ನವೀನ್‌ ಅವರು ಪ್ರಶಾಂತ್‌ ನಗರದಲ್ಲಿ ಕೆಎಸ್‌ಆರ್‌ಟಿ ಡಿಪೋ ಹಿಂಭಾಗದ ರಸ್ತೆಯ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಅವರು ಕರ್ತವ್ಯಕ್ಕೆ ಹಾಜರಾಗದೆ, ಪೋನ್‌ ಕರೆಗಳನ್ನು ಸ್ವೀಕರಿಸದ ಕಾರಣಕ್ಕೆ ಅವರ ಸಹದ್ಯೋಗಿ ಒಬ್ಬರು ಅವರನ್ನು ಹುಡುಕಿಕೊಂಡು ಮಂಗಳವಾರ ಬೆಳಿಗ್ಗೆ ಮನೆ ಬಳಿಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.

ಕೊರಳಿಗೆ ಶರ್ಟ್‌ ಮತ್ತು ಪ್ಯಾಂಟ್ ಸುತ್ತಿಕೊಂಡು ಅಂಗಾತ ಮಲಗಿದ ಸ್ಥಿತಿಯಲ್ಲಿ ನವೀನ್‌ ಅವರ ಮೃತದೇಹ ಪತ್ತೆಯಾಗಿದೆ. ಅವರ ಕುಟುಂಬದವರಿಗೆ ಮಾಹಿತಿ ತಿಳಿಸಲಾಗಿದೆ. ಮೃತದೇಹವನ್ನುಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಯ ಬಳಿಕವಷ್ಟೇ ಸಾವಿನ ನಿಖರ ಕಾರಣ ಹೇಳಲು ಸಾಧ್ಯ ಎಂದು ಪೊಲೀಸರು ತಿಳಿಸಿದರು.

ADVERTISEMENT

ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಶ್ವಾನದಳ ಮತ್ತು ವಿಧಿ ವಿಜ್ಞಾನ ತಜ್ಞರೊಂದಿಗೆ ಬಂದು ಘಟನಾ ಸ್ಥಳ ಪರಿಶೀಲನೆ ನಡೆಸಿದರು. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಕೆ.ಎನ್.ರೂಪಾ ಅವರು ಸಹ ಘಟನಾ ಸ್ಥಳಕ್ಕೆ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.