ADVERTISEMENT

ಮಹಾತ್ಮ ಗಾಂಧೀಜಿಯ ಆದರ್ಶ, ತತ್ವ ಇಂದಿಗೂ ಪ್ರಸ್ತುತ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2020, 2:29 IST
Last Updated 3 ಅಕ್ಟೋಬರ್ 2020, 2:29 IST
ಚಿಂತಾಮಣಿಯಲ್ಲಿ ತಾಲ್ಲೂಕು ಆಡಳಿತದಿಂದ ಹಮ್ಮಿಕೊಡಿದ್ದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದ್ಧೂರ್ ಜಯಂತಿ ಕಾರ್ಯಕ್ರದಲ್ಲಿ ಪಾಲ್ಗೊಂಡಿದ್ದ ಗಣ್ಯರು.
ಚಿಂತಾಮಣಿಯಲ್ಲಿ ತಾಲ್ಲೂಕು ಆಡಳಿತದಿಂದ ಹಮ್ಮಿಕೊಡಿದ್ದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದ್ಧೂರ್ ಜಯಂತಿ ಕಾರ್ಯಕ್ರದಲ್ಲಿ ಪಾಲ್ಗೊಂಡಿದ್ದ ಗಣ್ಯರು.   

ಚಿಂತಾಮಣಿ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಗರದ ತಾಲ್ಲೂಕು ಕಚೇರಿಯಲ್ಲಿ ಮಹಾತ್ಮಗಾಂಧಿ ಮತ್ತು ಲಾಲ್ ಬಹದ್ದೂರ್‌ಶಾಸ್ತ್ರಿ ಅವರ ಜನ್ಮದಿನಾಚರಣೆ ನಡೆಯಿತು.

ತಹಶೀಲ್ದಾರ್ ಹನುಮಂತರಾಯಪ್ಪ ಇಬ್ಬರು ಮಹನೀಯರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಮಾತನಾಡಿ, ‘ಉಭಯರಜಯಂತಿಯನ್ನು ಶ್ರಮದಾನದ ಮೂಲಕ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಸ್ಮರಿಸಲಾಗಿದೆ. ಮಹಾತ್ಮ ಗಾಂಧಿಯ ನೇತೃತ್ವದಲ್ಲಿ ಸ್ವಾತಂತ್ರ್ಯಪಡೆದ ದೇಶ ಇಂದು ಸ್ವತಂತ್ರವಾಗಿ ಆಡಳಿತ ನಡೆಸುತ್ತಿದೆ. ಅಂತಹ ಮಹಾತ್ಮನಿಗೆ ಕೃತಜ್ಞತೆ ಸಲ್ಲಿಸುವುದು ದೇಶದ ಪ್ರತಿಯೊಬ್ಬರ ಕರ್ತವ್ಯ’ ಎಂದರು.

‘ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆಯಂತೆ ಲಾಲ್ ಬಹದ್ದೂರ್‌ ಶಾಸ್ತ್ರಿ ಅತ್ಯಂತ ಕಡಿಮೆ ಅವಧಿಯಲ್ಲಿ ದಕ್ಷ, ಪ್ರಾಮಾಣಿಕ ಹಾಗೂ ಅತ್ಯುತ್ತಮ ಆಡಳಿತ ನಡೆಸಿ ದೇಶದ ಪ್ರಗತಿಗೆ ಕಾರಣರಾಗಿದ್ದಾರೆ. ಇಬ್ಬರು ಮಹಾನ್ ವ್ಯಕ್ತಿಗಳ ಜನ್ಮ ದಿನಾಚರಣೆ ಒಟ್ಟಿಗೆ ಬಂದಿರುವುದು ಸ್ಮರಣೆಗೆ ಅನುಕೂಲವಾಗಿದೆ’ ಎಂದರು.

ADVERTISEMENT

ಗ್ರೇಡ್-2 ತಹಶೀಲ್ದಾರ್ ಶೋಭಾ ಹಾಗೂ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ: ‘ಸ್ವಚ್ಛವಾದ ಪರಿಸರಕ್ಕೆ ಮಾತ್ರ ಸಕಲ ಜೀವರಾಶಿಯನ್ನು ಆರೋಗ್ಯವಾಗಿಡುವ ಪ್ರಬಲ ಶಕ್ತಿ ಇದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಜಿ.ಸುರೇಶಗೌಡ ತಿಳಿಸಿದರು.

ಗಾಂಧಿ ಜಯಂತಿ ಅಂಗವಾಗಿ ಕಚೇರಿ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಗಾಂಧಿಜಿ ಸತ್ಯ, ಅಹಿಂಸೆಯ ಪ್ರತಿಪಾದನೆಯ ಜತೆಗೆ ಶ್ರಮದಾನಕ್ಕೆ ಆದ್ಯತೆ ನೀಡಿದ್ದರು. ಸ್ವತಃ ಚರಕ ಹಿಡಿದು ನೂಲು ತೆಗೆದು ತಮ್ಮ ಬಟ್ಟೆಯನ್ನು ತಾವೇ ತಯಾರಿಸಿಕೊಳ್ಳುವ ಮೂಲಕ ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಿದ್ದರು. ಅವರು ಇಲ್ಲದಿದ್ದರೂ ಆದರ್ಶವನ್ನು ನಮಗೆ ಬಿಟ್ಟು ಹೋಗಿದ್ದಾರೆ ಎಂದರು.

ಶಿಕ್ಷಕರ ಮುಖಂಡರಾದ ಕೆ.ಎನ್.ವಸಂತರೆಡ್ಡಿ, ಎಸ್.ಸುಬ್ಬಾರೆಡ್ಡಿ, ಮೂಡಲ ಗೊಲ್ಲಹಳ್ಳಿ ಕೆ.ನರಸಿಂಹಪ್ಪ, ಎನ್.ಗಂಗಾಧರ್, ಬೈರಾರೆಡ್ಡಿ, ಶಿನಪ್ರಸಾದ್, ಎಸ್.ಅಬ್ದುಲ್ ಬಷೀರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.