ADVERTISEMENT

ಯುವಜನತೆಯೇ ದೇಶದ ಉಜ್ವಲ ಭವಿಷ್ಯ: ದಿಗೂರು ಎ.ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 14:11 IST
Last Updated 8 ನವೆಂಬರ್ 2020, 14:11 IST
ಕಾರ್ಯಕ್ರಮದಲ್ಲಿ ತರಬೇತಿದಾರ ದಿಗೂರು ಎ.ರಾಘವೇಂದ್ರ ಮಾತನಾಡಿದರು.
ಕಾರ್ಯಕ್ರಮದಲ್ಲಿ ತರಬೇತಿದಾರ ದಿಗೂರು ಎ.ರಾಘವೇಂದ್ರ ಮಾತನಾಡಿದರು.   

ಚಿಕ್ಕಬಳ್ಳಾಪುರ: ‘ಜೀವನ ಕೌಶಲ ಭರಿತ ಯುವಜನತೆಯಿಂದ ದೇಶಕ್ಕೆ ಉಜ್ವಲ ಭವಿಷ್ಯವಿದೆ. ಆದ್ದರಿಂದ, ಯುವಜನತೆ ಕೌಶಲಗಳನ್ನು ರೂಢಿಸಿಕೊಳ್ಳುವ ಮೂಲಕ ನೈಪುಣ್ಯತೆ ರೂಪಿಸಿಕೊಂಡು ಕುಟುಂಬ ಮತ್ತು ದೇಶಕ್ಕೂ ಉಜ್ವಲ ಭವಿಷ್ಯ ನೀಡಬೇಕು’ ಎಂದು ಉಪನ್ಯಾಸಕ, ಜೀವನಕೌಶಲ ತರಬೇತಿದಾರ ದಿಗೂರು ಎ.ರಾಘವೇಂದ್ರ ಹೇಳಿದರು.

ಯುವ ಸ್ಪಂದನ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನಿಮಾನ್ಸ್ ಸಹಯೋಗದಲ್ಲಿ ತಾಲ್ಲೂಕಿನ ಚದುಲಪುರದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಿದ್ದ ಉದ್ಯಮಶೀಲತಾಭಿವೃದ್ಧಿ ತರಬೇತಿದಾರರಿಗೆ ಯುವಸ್ಪಂದನ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಯುವ ಜನರು ತಮ್ಮ ಭವಿಷ್ಯದ ಬಗ್ಗೆ ಆಲೋಚನೆ ಮಾಡಬೇಕು. ಪ್ರತಿಯೊಬ್ಬರಲ್ಲಿಯೂ ಸಾದಿಸುವ ಗುರಿ ಇರಬೇಕು. ಅದಕ್ಕೆ ಸಹಕಾರಿಯಾಗುವಂತೆ ಯುವಸ್ಪಂದನ ಕೇಂದ್ರದಿಂದ ಸಿಗುವ ಮಾರ್ಗದರ್ಶನ ಪಡೆದುಕೊಳ್ಳಬೇಕು. ಏನೇ ಸಮಸ್ಯೆ, ತೊಂದರೆ ಇದ್ದಲ್ಲಿ ಯುವಸ್ಪಂದನ ಉಚಿತವಾಗಿ ಮಾರ್ಗದರ್ಶನ ನೀಡುವ ಮೂಲಕ ಯುವಜನರಿಗೆ ನೆರವಾಗಲಿದೆ’ ಎಂದು ತಿಳಿಸಿದರು.

ADVERTISEMENT

'ಯುವಜನರು ಮಾನಸಿಕವಾಗಿ ಒತ್ತಡಕ್ಕೆ ಸಿಲುಕುವುದರಿಂದ ತಮ್ಮ ಜೀವನದಲ್ಲಿ ಪರಿಪೂರ್ಣತೆಯನ್ನು ಹೊಂದಲು ಸಾಧ್ಯವಿಲ್ಲ. ಯುವಸ್ಪಂದನ ಕೇಂದ್ರದಲ್ಲಿ, ಸಂಬಂಧಗಳು, ಸುರಕ್ಷತೆ, ಶಿಕ್ಷಣ, ಆರೋಗ್ಯ ಮತ್ತು ಜೀವನಶೈಲಿ, ಭಾವನೆಗಳ ನಿರ್ವಹಣೆ ಕುರಿತ ವಿಷಯಗಳ ಬಗ್ಗೆ ಉಚಿತವಾಗಿ ಮಾರ್ಗದರ್ಶನ ಸಿಗುತ್ತದೆ. ಏನೇ ಕಷ್ಟ ಬಂದರೂ ಯುವಸ್ಪಂದನ ಕೇಂದ್ರಕ್ಕೆ ಭೇಟಿ ನೀಡಿ ಉಪಯೋಗ ಪಡೆಯಬಹುದು’ ಎಂದರು.

ತರಬೇತಿದಾರ ಮುನಿರಾಜು ಮಾತನಾಡಿ, ‘ವಿದ್ಯಾರ್ಥಿ ಜೀವನ ಪ್ರತಿ ವ್ಯಕ್ತಿಯ ಬದುಕಿನಲ್ಲಿ ಸುಂದರವಾದ ಹಂತ. ಈ ಅವಧಿಯಲ್ಲಿ ಮಕ್ಕಳು ಯಾವುದೇ ಕೆಟ್ಟ ಚಟಗಳಿಗೆ ಬಲಿಯಾಗದೆ ಸಮಾಜದಲ್ಲಿ ಉತ್ತಮಪ್ರಜೆಯಾಗಿ ಬಾಳಬೇಕು. ಅದಕ್ಕೆ ಪೂರಕವಾಗಿ ಯುವಸ್ಪಂದನ ಕೇಂದ್ರ ಯುವಜನರಿಗೆ ದಾರಿದೀಪವಾಗಿದೆ’ ಎಂದು ಹೇಳಿದರು.

ಸಂಸ್ಥೆಯ ನಿರ್ದೇಶಕರಾದ ವೆಂಕಟಸ್ವಾಮಿ, ಮಧುಪ್ರಿಯ, ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.