ಚಿಂತಾಮಣಿ: ಬಿಜೆಪಿ, ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿರುವುದರಿಂದ ಯಾವುದೇ ಗೊಂದಲವಿಲ್ಲದೆ ರಾಜ್ಯದಲ್ಲಿ 28 ಸ್ಥಾನಗಳಲ್ಲೂ ಜಯಗಳಿಸುತ್ತದೆ ಎಂದು ಮಾಜಿ ಶಾಸಕ ಸಿ.ಟಿ ರವಿ ಹೇಳಿದರು.
ತಾಲ್ಲೂಕಿನ ಕೈವಾರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ರಾಷ್ಟ್ರಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ರಾಜ್ಯಮಟ್ಟದಲ್ಲಿ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳೂ ಸೇರಿದಂತೆ 28 ಕ್ಷೇತ್ರಗಳನ್ನು ಗೆಲ್ಲುವ ಗುರಿಯೊಂದಿಗೆ ಕೆಲಸ ಮಾಡುತ್ತಿದ್ದೇವೆ. ಯಾವುದು ಅಸಾಧ್ಯ ಎನ್ನುವುದು ನಮ್ಮ ಇತಿಹಾಸದಲ್ಲೇ ಇಲ್ಲ ಎಂದರು.
ಚುನಾವಣಾ ಪೂರ್ವದಲ್ಲೇ ಒಪ್ಪಂದ ಮಾಡಿಕೊಂಡು ಜನರ ನಡುವೆ ಹೋಗುತ್ತಿದ್ದೇವೆ. ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಡಿಎಂಕೆ ಸರ್ಕಾರವಿರುವ ಕಡೆ ತರಬೇತಿ, ಕಾಂಗ್ರೆಸ್ ಸರ್ಕಾರವಿರುವ ಕಡೆ ಬಾಂಬ್ ಸ್ಫೋಟ, ತೃಣಮೂಲ ಸರ್ಕಾರವಿರುವ ಪಶ್ಚಿಮ ಬಂಗಾಳದಲ್ಲಿ ತಲೆಮರೆಸಿಕೊಳ್ಳುವುದನ್ನು ಗಮನಿಸಿದರೆ ಒಂದಕ್ಕೊಂದು ಸಂಬಂಧವಿರುವಂತೆ ಅನುಮಾನ ಮೂಡುತ್ತದೆ ಎಂದರು.
ಕೇಂದ್ರ ಸರ್ಕಾರ ಕಳೆದ 10 ವರ್ಷಗಳಲ್ಲಿ ಮಾಡಿರುವ ಶಾಶ್ವತ ಯೋಜನೆ, ದೇಶದ ಒಳಗೆ ಮತ್ತು ದೇಶದ ಹೊರಗೆ ಭಾರತೀಯರ ಸುರಕ್ಷತೆಗಾಗಿ ನೀಡಿರುವ ವಿಶೇಷ ಗಮನ, ಜಾಗತಿಕವಾಗಿ ವಿಶ್ವದಾದ್ಯಂತ ಭಾರತೀಯರಿಗೆ ಸಿಕ್ಕಿರುವ ಗೌರವ ಆಧಾರದ ಮೇಲೆ ಜನರಲ್ಲಿಗೆ ಹೋಗಿ ಮತ ಕೇಳುತ್ತಿದ್ದೇವೆ ಎಂದರು.
ಮಾಜಿ ಶಾಸಕ ಎಂ.ಕೃಷ್ಣಾರೆಡ್ಡಿ, ಮುಖಂಡ ವೇಣುಗೋಪಾಲ್ ಮತ್ತಿತರರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.