ಗುಡಿಬಂಡೆ: ‘ತಾಲ್ಲೂಕಿನ ವರ್ಲಕೊಂಡ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರುವ ಸರ್ವೆ ನಂಬರ್ 168ರಲ್ಲಿ 277 ಎಕರೆ ಅರಣ್ಯ ಪ್ರದೇಶದಲ್ಲಿನ ಸಾವಿರಾರು ನೀಲಿಗಿರಿ ಮರಗಳನ್ನು ಒಂದು ವಾರದಿಂದ ರಾಜಾರೋಷವಾಗಿ ಕಡಿದು ಸಾಗಣಿಕೆ ಮಾಡಲಾಗುತ್ತಿದೆ. ಸುಮಾರು 10 ಎಕರೆ ಪ್ರದೇಶವನ್ನು ಜೆಸಿಬಿ ಯಂತ್ರದಲ್ಲಿ ಸಮದಟ್ಟು ಕೆಲಸ ನಡೆಯುತ್ತಿದ್ದರೂ ಯಾವುದೇ ಅಧಿಕಾರಿಗಳು ಕಣ್ಣು ಇದ್ದರೂ ಕುರುಡರಾಗಿ ವರ್ತಿಸುತ್ತಿದ್ದಾರೆ’ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ ಪೋಲಂಪಲ್ಲಿ ಮಂಜುನಾಥ ದೂರಿದರು.
‘ಈ ವಿಚಾರ ಮಂಗಳವಾರ ವರ್ಲಕೊಂಡ ಗ್ರಾಮ ಪಂಚಾಯ್ತಿ ಪಿಡಿಒ ಶ್ರೀನಿವಾಸ್ ಅವರಿಗೆ ವಿಚಾರ ತಿಳಿಸಲಾಗಿದ್ದು ಸ್ಥಳಕ್ಕೆ ಭೇಟಿ ನೀಡಿದಾಗ ಪಕ್ಕದ ತಾಲ್ಲೂಕಿನ ಪ್ರಬಾವಿ ಜನಪ್ರತಿನಿಧಿಗಳ ಸಹಚರರು ಪಿಡಿಒ ಅವರಿಗೆ ಬೆದರಿಕೆ ಹಾಕಿರುತ್ತಾರೆ. ಬುಧವಾರ ಸಂಜೆ ನಾನು ಜನರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಕಡಿದ ಮರಗಳನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ. ಉಳಿದ ನೂರಾರು ಮರಗಳನ್ನು ಗ್ರಾಮ ಪಂಚಾಯ್ತಿ ವಶಕ್ಕೆ ಪಡೆಯಲಾಗಿದೆ. ಈ ಅಕ್ರಮದಿಂದ ಸರ್ಕಾರಕ್ಕೆ ₹10 ಲಕ್ಷ ನಷ್ಟ ಉಂಟಾಗಿದೆ. ಜತೆಗೆ ಅಕ್ರಮವಾಗಿ ಅರಣ್ಯ ಜಮೀನನ್ನು ಹದಮಾಡಲಾಗಿದೆ’ ಎಂದರು.
ಅರಣ್ಯಾಧಿಕಾರಿ ಹುಲಗಪ್ಪ ಮಾತನಾಡಿ, ‘ಅರಣ್ಯ ಪ್ರದೇಶದಲ್ಲಿನ 25 ಎಕರೆ ವರ್ಲಕೊಂಡ ಗ್ರಾಮ ಪಂಚಾಯ್ತಿಗೆ ಸೇರಿದ್ದು, ಉಳಿದ 252 ಎಕರೆ ಅರಣ್ಯ ಪ್ರದೇಶ ಕಂದಾಯ ವ್ಯಾಪ್ತಿಗೆ ಬರುತ್ತದೆ. ನೀಲಗಿರಿ ಮರಗಳನ್ನು ಸಾಗಣೆ ಮಾಡುತ್ತಿದ್ದ ಟ್ರ್ಯಾಕ್ಟರ್ ಮಾಲೀಕ ಹಾಗೂ ಚಾಲಕನ ಮೇಲೆ ಕೇಸು ದಾಖಲು ಮಾಡಲಾಗಿದೆ. ಮುಂದಿನ ಕ್ರಮಕ್ಕಾಗಿ ವರದಿಯನ್ನು ಪ್ರಾದೇಶಿಕ ಅರಣ್ಯಾಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.