ಚಿಕ್ಕಬಳ್ಳಾಪುರ: ತಾಲ್ಲೂಕಿನ ಕಳವಾರ ಗ್ರಾಮದಲ್ಲಿ ನಡೆದ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಗೌರಿಬಿದನೂರು ತಾಲ್ಲೂಕಿನ ಮುದುಗೆರೆಯ ಗೋವಿಂದ (30) ಮತ್ತು ಅಶ್ವಿನಿ (19) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ 49 ಗ್ರಾಂನ ಬಂಗಾರದ ಮಾಂಗಲ್ಯದ ಸರ, 760 ಮಿಲಿ ತೂಕದ 2 ಬಂಗಾರದ ಗುಂಡುಗಳು, 8 ಗ್ರಾಂ ತೂಕದ ಬಂಗಾರದ ತಾಳಿ ಹಾಗೂ ನೋಂದಣಿ ಸಂಖ್ಯೆ ಇಲ್ಲದ ದ್ವಿಚಕ್ರವಾಹನ ವಶಕ್ಕೆ ಪಡೆಯಲಾಗಿದೆ. ಆರೋಪಿ ಗೋವಿಂದ ಒಂದು ತಿಂಗಳ ಹಿಂದೆ ಮಧುಗಿರಿಯಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿಯೂ ಆರೋಪಿ ಆಗಿದ್ದಾನೆ.
ಮೇ 26ರಂದು ಮಧ್ಯಾಹ್ನ ಕಳವಾರ ಗ್ರಾಮದ ಆಂಜಿನಮ್ಮ ಗಂಟಿಗಾನಹಳ್ಳಿ ಗ್ರಾಮದ ಬಳಿಯ ತಮ್ಮ ಜಮೀನಿನಲ್ಲಿ ನಿರ್ಮಿಸುತ್ತಿರುವ ಕೊಠಡಿ ಬಳಿಗೆ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಮಳೆಯೂ ಸುರಿಯುತ್ತಿತ್ತು.
ಆರೋಪಿಗಳು ಆಂಜಿನಮ್ಮ ಅವರನ್ನು ಹಿಂಬಾಲಿಸಿ ಅವರ ಬಾಯಿಗೆ ಸೀರೆ ತುರುಕಿ ಹಗ್ಗದಿಂದ ಕಾಲುಗಳನ್ನು ಕಟ್ಟಿ ಹಾಕಿದ್ದರು. ಆಂಜಿನಮ್ಮ ಅವರ ಬಂಗಾರದ ಮಾಂಗಲ್ಯದ ಸರ ದೋಚಿಸಿದ್ದರು. ಈ ಬಗ್ಗೆ ಚಿಕ್ಕಬಳ್ಲಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎಸ್ಪಿ ಕುಶಾಲ್ ಚೌಕ್ಸೆ, ಎಎಸ್ಪಿ ಜಗನ್ನಾಥ್ ರೈ, ಡಿವೈಎಸ್ಪಿ ಎಸ್.ಶಿವಕುಮಾರ್ ಮಾರ್ಗದರ್ಶನದಲ್ಲಿ ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿತ್ತು.
ಸಿಪಿಐ ಮಂಜುನಾಥ್ ಎಂ., ಪಿಎಸ್ಐ ಹರೀಶ್ ಕುಮಾರ್ ಡಿ., ಸಿಬ್ಬಂದಿ ರವಿಕುಮಾರ್, ರವೀಂದ್ರ ಕುಮಾರ್, ನವೀನ್ ಬಾಬು, ವಿಜಯ್ ಕುಮಾರ್, ವೆಂಕಟೇಶಮೂರ್ತಿ, ಪವಿತ್ರಾ ಕೊಠಾರಿ, ಮುನಿಕೃಷ್ಣ, ಹೇಮಂತ್ ಕುಮಾರ್, ಮೋಹನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.