ADVERTISEMENT

ಬಸ್ಸುಗಳ ಮುಖಾಮುಖಿ‌ ಡಿಕ್ಕಿ; 2 ಸಾವು, 20 ಜನರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 10:17 IST
Last Updated 16 ಮಾರ್ಚ್ 2020, 10:17 IST
ಗೌರಿಬಿದನೂರು ತಾಲ್ಲೂಕಿನ ಕಾಮಲಾಪುರದ ಬಳಿ ನಡೆದ ಬಸ್ ಗಳ ನಡುವಿನ ಅಪಘಾತ
ಗೌರಿಬಿದನೂರು ತಾಲ್ಲೂಕಿನ ಕಾಮಲಾಪುರದ ಬಳಿ ನಡೆದ ಬಸ್ ಗಳ ನಡುವಿನ ಅಪಘಾತ   

ಗೌರಿಬಿದನೂರು: ತಾಲ್ಲೂಕಿನ ತೊಂಡೇಬಾವಿ ‌ಹೋಬಳಿಯ ಕಾಮಲಾಪುರದ ಬಳಿ‌ ಭಾನುವಾರ ಸಂಜೆ ಎರಡು ಖಾಸಗಿ ಬಸ್ಸು ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿದ್ದು ದ್ವಿಚಕ್ರ ವಾಹನ ಸವಾರರಿಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದಾರೆ.

ಮೃತಪಟ್ಟ ಯುವಕರನ್ನು ತಾಲ್ಲೂಕಿನ ತರಿದಾಳು ಗ್ರಾಮದ ಗೋಪಾಲ(28) ಮತ್ತು ಶಶಿಧರ್ (29) ಎಂದು ಗುರುತಿಸಲಾಗಿದೆ. ದೊಡ್ಡಬಳ್ಳಾಪುರ ಕಡೆಯಿಂದ ಬರುತ್ತಿದ್ದ ಬಾಲಾಜಿ‌ ಬಸ್ ಕಾಮಾಲಾಪುರದ ಬಳಿ ಗೌರಿಬಿದನೂರು ಕಡೆಯಿಂದ ‌ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಾಹನ ಸವಾರರಿಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದಾರೆ.

ಈ ಘಟನೆಯ ಸಂಭವಿಸುತ್ತಿದ್ದಂತೆ ಗೌರಿಬಿದನೂರು ಕಡೆಯಿಂದ ಬರುತ್ತಿದ್ದ ವೆಂಕಟೇಶ್ವರ ಬಸ್ ಬಾಲಾಜಿ ಬಸ್‌ಗೆ ಮುಖಾಮುಖಿ ಡಿಕ್ಕಿ ಹಿಡೆದಿದೆ. ಇದರಿಂದ ಎರಡೂ ಬಸ್ ನಲ್ಲಿದ್ದ ಸುಮಾರು 20 ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ನಗರದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆಯಲ್ಲಿ ಎರಡೂ ಬಸ್ಸುಗಳು‌ ಜಖಂಗೊಂಡಿವೆ.

ADVERTISEMENT

ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಘಟನೆಯ ಸ್ಥಳದಲ್ಲಿ ನೂರಾರು‌ ಮಂದಿ‌ ಜಮಾಯಿಸಿದ ಕಾರಣ ವಾಹನ ಸಂಚಾರಕ್ಕೆ ಕೆಲ ಕಾಲ ತೊಂದರೆಯಾಯಿತು. ಕೂಡಲೇ ಪೊಲೀಸರು ಮಧ್ಯಪ್ರವೇಶಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಸ್ಥಳಕ್ಕೆ ಸಿಪಿಐ ಎಸ್.ರವಿ, ಪಿಎಸ್ಐ ಅವಿನಾಶ್, ಮೋಹನ್, ರಾಘವೇಂದ್ರ ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದು ಪ್ರಕರಣವನ್ನು ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡು ಎರಡೂ ಬಸ್ ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.