ADVERTISEMENT

ಅಸುರಕ್ಷಿತ ಐಟಿಐ ಕಾಲೇಜು ಉದ್ಘಾಟನೆಗೆ ಸಜ್ಜು

ನಿರ್ಮಾಣವಾಗಿ ಒಂದು ವರ್ಷ; ಈಜುಕೊಳದಂತಾಗುವ ಮಧ್ಯಭಾಗ; ವಿದ್ಯಾರ್ಥಿಗಳು, ಪೋಷಕರ ಆತಂಕ

ಜೆ.ವೆಂಕಟರಾಯಪ್ಪ
Published 7 ಜನವರಿ 2021, 4:19 IST
Last Updated 7 ಜನವರಿ 2021, 4:19 IST
ಹಳೇಗುಡಿಬಂಡ ಸಮೀಪದಲ್ಲಿ ನಿರ್ಮಾಣವಾಗಿರುವ ಐಟಿಐ ಕಾಲೇಜು
ಹಳೇಗುಡಿಬಂಡ ಸಮೀಪದಲ್ಲಿ ನಿರ್ಮಾಣವಾಗಿರುವ ಐಟಿಐ ಕಾಲೇಜು   

ಗುಡಿಬಂಡೆ: ಪಟ್ಟಣದ ಹೊರವಲಯದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿಯ ಒಂದು ವರ್ಷದ ಹಿಂದೆ ನಿರ್ಮಾಣವಾಗಿರುವ ಕಾಲೇಜು ಕಟ್ಟಡ ಉದ್ಘಾಟನೆಗೆ ಸಜ್ಜಾಗಿದೆ. ಅಸುರಕ್ಷಿತವಾಗಿರುವ ಈ ಕಟ್ಟಡವನ್ನು ಇದೀಗ ಪ್ರಾರಂಭಿಸಲು ಇಲಾಖೆ ಮುಂದಾಗಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಆತಂಕ್ಕೊಳಗಾಗಿದ್ದಾರೆ.

ಸರ್ಕಾರಿ ಕೈಗಾರಿಕಾ ತರಬೇತಿಗಾಗಿ ಕಾಲೇಜು ಪ್ರಾರಂಭವಾಗಿ 12 ವರ್ಷದಿಂದ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿತ್ತು. ಹಲವಾರು ವರ್ಷಗಳ ಕಾಲ ಕಾಲೇಜಿಗೆ ಸ್ವಂತ ಕಟ್ಟಡಕ್ಕಾಗಿ ಹೋರಾಟ ನಡೆದಿತ್ತು. ನಿವೇಶನಕ್ಕಾಗಿ ಪರದಾಡಿ ನಂತರ ಗುಡಿಬಂಡೆ ಪಟ್ಟಣಕ್ಕೆ ಹೊಂದಿಕೊಂಡಿರುವ ಉಲ್ಲೋಡು ಗ್ರಾಮ ಪಂಚಾಯ್ತಿ ಹಳೇಗುಡಿಬಂಡೆ ಸಮೀಪದಲ್ಲಿ 1 ಎಕರೆ 19 ಗುಂಟೆ ಜಮೀನನ್ನು ಸರ್ಕಾರ ನೀಡಿತ್ತು. 2017ರಲ್ಲಿ ₹2.54 ಲಕ್ಷ ಅನುದಾನ ನೀಡಿ ಕಟ್ಟಡ ನಿರ್ಮಾಣಕ್ಕಾಗಿ ರೈಟ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು.

ಪಟ್ಟಣದಲ್ಲಿ 2008ರಲ್ಲಿ ಐಟಿಐ ಸಂಸ್ಥೆ ಪ್ರಾರಂಭ ಮಾಡಿ ಪಿಟ್ಟರ್ ಸೇರಿದಂತೆ ಮೂರು ವಿಭಾಗಗಳನ್ನು ಆರಂಭಿಸಲಾಗಿತ್ತು. ಪ್ರತಿ ವರ್ಷ 120 ವಿದ್ಯಾರ್ಥಿಗಳು ಮೂರು ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿದ್ದರು. ನೂತನ ಕಟ್ಟಡದಲ್ಲಿಬೋಧನಾ ಕೊಠಡಿ, ಲ್ಯಾಬ್, ಆಡಳಿತ ಸಿಬ್ಬಂದಿ ಕಚೇರಿ ಸೇರಿದಂತೆ 12 ಕೊಠಡಿಗಳು ನಿರ್ಮಾಣವಾಗಿವೆ. ಹಿಂಭಾಗದಲ್ಲಿ ಯಾವುದೇ ಕಟ್ಟಡವು ನಿರ್ಮಾಣವಾಗದೆ ಬಹಿರಂಗ ಪ್ರದೇಶವಾಗಿದೆ. ಇದರ ಜತೆಗೆ ಕಾಲೇಜು ಮಧ್ಯಭಾಗದಲ್ಲಿ ನೀರಿನ ಕೊಳದ ಮಾದರಿಯಲ್ಲಿ ನಿರ್ಮಾಣವಾಗಿದ್ದು ಮಳೆ ಬಂದು ನೀರು ತುಂಬಿದರೇ ಈಜುಕೊಳವಾಗುತ್ತದೆ ಎಂದು ವಿದ್ಯಾರ್ಥಿಗಳು ದೂರುತ್ತಿದ್ದಾರೆ.

ADVERTISEMENT

‘2020ರ ಮಾರ್ಚ್ ತಿಂಗಳಲ್ಲಿ ಕಾಲೇಜು ಕಟ್ಟಡ ನಿರ್ಮಾಣವಾಗಿದ್ದು, ಕೊರೊನಾ ಸೋಂಕು ಹರಡುವಿಕೆಯಿಂದ ಕಾಲೇಜು ಕಟ್ಟಡವನ್ನು ಕ್ವಾರಂಟೈನ್‌ ಕೇಂದ್ರವಾಗಿತ್ತು. ಈಗಲೂ ಸಹ ಕಟ್ಟಡದಲ್ಲಿ ಮಂಚಗಳು ಹಾಗೆಯೇ ಇವೆ. ಜನವರಿ 15ರ ಹೊತ್ತಿಗೆ ಖಾಲಿ ಅಗಬಹುದು’ ಎಂದು ಪ್ರಾಂಶುಪಾಲರು ತಿಳಿಸಿದರು.‌

ಕಾಲೇಜು ಕಟ್ಟಡಕ್ಕೆ ಕೈಗಾರಿಕೆ ತರಬೇತಿ ಮತ್ತು ಉದ್ಯೋಗ ಇಲಾಖೆಯಉಪನಿರ್ದೇಶಕ ವೈ.ಜಿ.ಗುಂಡ, ರೈಟ್ ಸಂಸ್ಥೆ ಗುತ್ತಿಗೆದಾರರಾದ ಜಯಕುಮಾರ್, ನವೀನ್ ಡಿ.30ರಂದು ಭೇಟಿ ನೀಡಿದಾಗ ಪ್ರಾಶುಂಪಾಲ ಶಿವಕುಮಾರ್ ಕಟ್ಟಡದ ಲೋಪದೋಷಗಳನ್ನು ಗಮನಕ್ಕೆ ತಂದಿದ್ದರು. ಭದ್ರತೆಗಾಗಿ ಕಾಂಪೌಂಡು ಸೇರಿದಂತೆ ಹಲವಾರು ವಿಚಾರಗಳನ್ನು ಮೇಲಧಿಕಾರಿಗಳಿಗೆ ತಿಳಿಸಿದ್ದರು.

ಅನುದಾನ ಬಿಡುಗಡೆ ನಂತರ ದುರಸ್ತಿ
‘ಅನುದಾನಕ್ಕಾಗಿ ಇಲಾಖೆಗೆ ಪತ್ರ ಬರೆಯಲಾಗಿದ್ದು, ಅನುದಾನ ಬಿಡುಗಡೆ ನಂತರ ಲೋಪದೋಷಗಳನ್ನು ಸರಿಪಡಿಸಲಾಗುವುದು. ಜನಪ್ರತಿನಿಧಿಗಳ ಅನುದಾನದಲ್ಲಿ ಕಾಂಪೌಂಡ್‌ ನಿರ್ಮಾಣ ಮಾಡಿಕೊಳ್ಳಬೇ’ ಎಂದು ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ’ ಎಂದು ಪ್ರಾಂಶುಪಾಲ ಶಿವಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.