ಚಿಂತಾಮಣಿ: ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಜನದಟ್ಟಣೆ ತಪ್ಪಿಸಲು ಗುರುವಾರ ಮತ್ತು ಶುಕ್ರವಾರ ಹಬ್ಬದ ಸಾಮಗ್ರಿ ಮಾರಾಟಕ್ಕಾಗಿ ನಗರದ ವಿದ್ಯಾಗಣಪತಿ ರಂಗ ಮಂದಿರದ ಮುಂಭಾಗದಲ್ಲಿ ತಾತ್ಕಾಲಿಕ ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿದೆ ಎಂದು ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ ತಿಳಿಸಿದರು.
ನಗರಸಭೆ ಮತ್ತು ಪೊಲೀಸ್ ಇಲಾಖೆ ಅಂಬೇಡ್ಕರ್ ಭವನದ ಸಮೀಪದಲ್ಲಿ ಬುಧವಾರ ಕರೆದಿದ್ದ ವರ್ತಕರ ಮತ್ತು ವ್ಯಾಪಾರಿಗಳ ಸಭೆಯಲ್ಲಿ ಮಾತನಾಡಿದರು.
ನಗರದ ಬೆಂಗಳೂರು ರಸ್ತೆ, ಜೋಡಿ ರಸ್ತೆಯಲ್ಲಿ ಹೂ, ಹಣ್ಣು ಮತ್ತಿತರ ಹಬ್ಬದ ಸಾಮಗ್ರಿಗಳ ವ್ಯಾಪಾರ ಮಾಡುವುದರಿಂದ ಸಾರ್ವಜನಿಕರ ಮತ್ತು ವಾಹನಗಳ ಸಂಚಾರ ವ್ಯವಸ್ಥೆ ಹದಗೆಡುತ್ತದೆ. ರಸ್ತೆಗಳಲ್ಲಿ ವ್ಯಾಪಾರ ಮಾಡಬಾರದು. ಗ್ರಂಥಾಲಯದ ಮುಂಭಾಗದಲ್ಲಿ ಮತ್ತು ಹಿಂಬದಿಯಲ್ಲಿ ವ್ಯಾಪಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಗ್ರಂಥಾಲಯದ ಮುಂಭಾಗ ಮತ್ತು ಹಿಂಭಾಗ ಸ್ವಚ್ಛಗೊಳಿಸಲಾಗುವುದು. ತಳ್ಳುವ ಗಾಡಿ, ಬೀದಿಬದಿ ವ್ಯಾಪಾರಿಗಳು ಅಲ್ಲೇ ವ್ಯಾಪಾರ ಮಾಡಬೇಕು. ಹೂ, ಹಣ್ಣು, ಸೇರಿದಂತೆ ಹಬ್ಬದ ಎಲ್ಲ ಸಾಮಗ್ರಿಗಳು ಒಂದೇ ಸ್ಥಳದಲ್ಲಿ ದೊರೆಯುವುದರಿಂದ ನಗರದ ನಾಗರಿಕರಿಗೂ ಅನುಕೂಲವಾಗುತ್ತದೆ ಎಂದರು.
ಡಿವೈಎಸ್ಪಿ ಮುರಳೀಧರ್, ನಗರಠಾಣೆಯ ಇನ್ಸ್ಪೆಕ್ಟರ್ ವಿಜಿಕುಮಾರ್, ಸಿ.ಕೆ.ಬಾಬು, ಆರತಿ, ವಿಜಯಕುಮಾರ್, ವ್ಯಾಪಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.