(ಪ್ರಾತಿನಿಧಿಕ ಚಿತ್ರ)
ಗುಡಿಬಂಡೆ: ದಂಪತಿ ಮಧ್ಯೆ ಶುಕ್ರವಾರ ಆರಂಭವಾದ ಜಗಳ ಪತ್ನಿ ಕೊಲೆಯಲ್ಲಿ ಅಂತ್ಯವಾಗಿದೆ.
ಪಟ್ಟಣದ ಜಾಮಿಯಾ ಮಸೀದಿಯ ತರಕಾರಿ ಮಾರುಕಟ್ಟೆ ಬಳಿ ವಾಸವಾಗಿದ್ದ ರಮೀಜಾಬಿ (35) ಕೊಲೆಯಾದ ಮಹಿಳೆ.
ಆಕೆಯ ಪತಿ ಬಾಬಾಜಾನ್ (40) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗಂಡ, ಹೆಂಡತಿ ಮಧ್ಯೆ ಆರಂಭವಾದ ಜಗಳ ವಿಕೋಪಕ್ಕೆ ಹೋಗಿ ಪತ್ನಿ ಮೇಲೆ ಗಂಡ ಮಚ್ಚಿನಿಂದ ತಲೆಗೆ ಹೊಡೆದ. ತೀವ್ರ ರಕ್ತಸ್ರಾವವಾಗಿ ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ರಮೀಜಾಬಿ ಮತ್ತು ಬಾಬಾಜಾನ್ ಗುಜರಿ ವ್ಯಾಪಾರ ಮಾಡುತ್ತಿದ್ದು, 3 ವರ್ಷಗಳಿಂದ ಗುಡಿಬಂಡೆ ಪಟ್ಟಣದಲ್ಲಿ ವಾಸವಾಗಿದ್ದರು. ದಂಪತಿ ಮಧ್ಯೆ ಹಣಕಾಸಿನ ವಿಚಾರವಾಗಿ ಜಗಳವಾಗುತ್ತಿತ್ತು ಎನ್ನಲಾಗಿದೆ.
ರಮೀಜಾಬಿ ಶ್ರೀನಿವಾಸಪುರ ತಾಲ್ಲೂಕಿನ ಗೌನಿಪಲ್ಲಿ ಮೂಲದವರು. ಬಾಬಾಜಾನ್ ಚಿಕ್ಕಬಳ್ಳಾಪುರ ಕಂದವಾರ ನಿವಾಸಿ. ರಮೀಜಾಬಿಗೆ ಈ ಮೊದಲೇ ಮುಳಬಾಗಿಲಿನ ವ್ಯಕ್ತಿಯೊಬ್ಬರೊಂದಿಗೆ ಮದುವೆಯಾಗಿ ಮಕ್ಕಳು ಇದ್ದವು. ಮೊದಲ ಪತಿಯನ್ನು ಬಿಟ್ಟು ಬಾಬಾಜಾನ್ ಜೊತೆ ಎರಡನೇ ಮದುವೆ ಯಾಗಿದ್ದಾರೆ. ಬಾಬಾಜಾನ್ಗೂ ಸಹ ಮದುವೆಯಾಗಿ ಹೆಂಡತಿ ಮಕ್ಕಳು ಇದ್ದರು. ಮೊದಲ ಪತ್ನಿಯನ್ನು ಆತ ಬಿಟ್ಟಿದ್ದ.
ಶುಕ್ರವಾರ ಮಧ್ಯಾಹ್ನದಿಂದ ರಮೀಜಾಬಿ ಮತ್ತು ಬಾಬಾಜಾನ್ ಮಧ್ಯೆಜಗಳವಾಗಿತ್ತು. ಅಕ್ಕಪಕ್ಕದ ಜನರು ಜಗಳ ಬಿಡಿಸಿದ್ದರು. ಸಂಜೆ ಬಾಬಾಜಾನ್ ಕುಡಿದು ಬಂದು ರಮೀಜಾಬಿ ಮೇಲೆ ಮಚ್ಚಿನಿಂದ ಹಲ್ಲೆ ನಡೆ ಸಿದ್ದಾನೆ.
ಸ್ಥಳಿಯರು ಆರೋಪಿಯನ್ನು ಮನೆ ಒಳಗೆ ಕೂಡಿಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.