ಚಿಕ್ಕಬಳ್ಳಾಪುರ: ಸಮಾಜಮುಖಿ ಕೆಲಸಗಳಿಂದಲೇ ಚಿಕ್ಕಬಳ್ಳಾಪುರದಲ್ಲಿ ಡಾ.ಸುಷ್ಮಾ ಪರಿಚಿತರು. ಚಿಕ್ಕಬಳ್ಳಾಪುರದ ರಂಗಸ್ಥಳ ದೇವಸ್ಥಾನದ ಸಮೀಪಮಾನಸ ಆಶ್ರಮ ನಡೆಸುತ್ತಿರುವ ಡಾ.ಸುಷ್ಮಾ ಅವರ ಕಾರ್ಯಗಳು ಪ್ರಶಂಸೆಗೆ ಪಾತ್ರವಾಗಿವೆ. ಈ ಆಶ್ರಮದಲ್ಲಿ ಕುಟುಂಬಗಳಿಂದ ದೂರವಾದ, ಅನಾಥ 25 ವೃದ್ಧರು ಆಶ್ರಯ ಪಡೆದಿದ್ದಾರೆ. ವೃದ್ಧಾಶ್ರಮವನ್ನು 1 ಎಕರೆಯಲ್ಲಿ ನಿರ್ಮಿಸಲಾಗಿದೆ.
ನಗರದ ಮಾನಸ ಆಸ್ಪತ್ರೆಯ ಡಾ.ಎಚ್.ಎಸ್. ಮಧುಕರ್ ಮತ್ತು ಡಾ.ಸುಷ್ಮಾ ದಂಪತಿ ಮಾನಸ ಮೆಡಿಕಲ್ ಟ್ರಸ್ಟ್ ಮೂಲಕ ಜಿಲ್ಲಾ ಆಸ್ಪತ್ರೆಯ ಹೊರರೋಗಿಗಳು, ಬಡರೋಗಿಗಳ ಚಿಕಿತ್ಸೆಗಾಗಿ ಅವರ ಜತೆ ಬರುವ ಕುಟುಂಬ ಸದಸ್ಯರಿಗೆ ಉಚಿತ ಊಟ ಸಹ ವಿತರಿಸುತ್ತಿದ್ದಾರೆ. ಈ ಕಾರ್ಯದಲ್ಲಿ ಸುಷ್ಮಾ ಅವರದ್ದು ಪ್ರಧಾನ ಪಾತ್ರ.
‘ಅನ್ನಪೂರ್ಣ’ ಹೆಸರಿನಲ್ಲಿ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಆಹಾರ ನೀಡುತ್ತಿರುವ ಈ ಕಾರ್ಯಕ್ರಮ ಒಂದು ವರ್ಷದಿಂದ ಚಾಲನೆಯಲ್ಲಿದೆ. ಇಲ್ಲಿಯವರೆಗೆ 50,000ಕ್ಕೂ ಹೆಚ್ಚು ಊಟವನ್ನು ವಿತರಿಸಲಾಗಿದೆ. ಸುಷ್ಮಾ ಅವರ ಈ ಕಾರ್ಯಕ್ಕಾಗಿ ಅವರನ್ನು ಹಲವು ಸಂಘ, ಸಂಸ್ಥೆಗಳು ಗೌರವಿಸಿವೆ.
ಅನ್ನಪೂರ್ಣ ಯೋಜನೆ ಮತ್ತು ವೃದ್ಧಾಶ್ರಮಕ್ಕೆ ಉದಾರ ಮನಸ್ಸುಳ್ಳವರ ಸಹಕಾರವೂ ಇದೆ. ಆದರೆ, ತಿಂಗಳ ಕೊನೆಯಲ್ಲಿ ಎದುರಾಗುವ ಹಣದ ಕೊರತೆಯನ್ನು ಸುಷ್ಮಾ ಹಾಗೂ ಅವರ ಪತಿ ಮಧುಕರ್ ವೈಯಕ್ತಿಕ ಆದಾಯದಿಂದ ಭರಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.